ಸಾರ್ವಜನಿಕರಿಗೂ ಉತ್ತಮ ಸೇವೆ ನೀಡುವುದು ಅಧಿಕಾರಿಗಳ ಕರ್ತವ್ಯ: ಜಯಪ್ರಕಾಶ್ ಹೆಗ್ಡೆ

ಕಾಪು ತಾಲೂಕು ಆಡಳಿತ ಸಂಕೀರ್ಣ ಕಟ್ಟಡ ಉದ್ಘಾಟನೆ

Update: 2023-03-17 13:38 GMT

ಕಾಪು : ಪ್ರತಿಯೊಬ್ಬ ಸಾರ್ವಜನಿಕರಿಗೂ ಉತ್ತಮ ಸೇವೆ ಒದಗಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯಪಟ್ಟರು.

ಶುಕ್ರವಾರ ಕಾಪುವಿನ ಬಂಗ್ಲೆ ಮೈದಾನದಲ್ಲಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಪು ತಾಲೂಕು ಆಡಳಿತ ಸಂಕೀರ್ಣ ಕಟ್ಟಡ - ಮಿನಿ ವಿಧಾನ ಸೌಧವನ್ನು ಉದ್ಘಾಟಿಸಿ ಮಾತನಾಡಿದರು. 

ಸರಕಾರದ ಎಲ್ಲಾ ಸೇವೆಗಳನ್ನೂ ಒಂದೇ ಸೂರಿನಡಿ ದೊರಕಿಸಿ ಕೊಡುವ ಉದ್ದೇಶದೊಂದಿಗೆ ನೂತನ ತಾಲೂಕುಗಳಾದ ಹೆಬ್ರಿ, ಬಂದೂರು, ಕಾಪು, ಬ್ರಹ್ಮಾವರ ತಾಲೂಕುಗಳಲ್ಲಿಯೂ ಮಿನಿ ವಿಧಾನ ಸೌಧ ನಿರ್ಮಾಣ ವಾಗಿರುವುದು ಪ್ರಶಂಸನೀಯ. ಕಾಪು ಮಿನಿ ವಿಧಾನ ಸೌಧ ನಿರ್ಮಾಣದಲ್ಲಿ ಶಾಸಕ ಲಾಲಾಜಿ ಆರ್. ಮೆಂಡನ್ ಅವರ ಶ್ರಮ ಶ್ಲಾಘನೀಯವಾಗಿದೆ ಎಂದರು. 

ಅಧ್ಯಕ್ಷತೆ ವಹಿಸಿದ್ದ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, 2018ರಲ್ಲಿ ತಾಲೂಕು ರಚನೆಯಾಗುವಾಗ ತಹಶೀಲ್ದಾರ್ ಮತ್ತು ಅವರ ಅಗತ್ಯದ ಸಿಬ್ಬಂದಿಗಳ ಸೇವೆಗೆ ಮಾತ್ರ ಸೀಮಿತವಾಗಿದ್ದ ಕಾಪು ತಾಲೂಕಿನಲ್ಲಿ ಐದು ವರ್ಷದೊಳಗೆ ಸುಸಜ್ಜಿತವಾದ ಮಿನಿ ವಿಧಾನಸೌಧ ಸಹಿತವಾಗಿ ತಾಲೂಕಿಗೆ ಅವಶ್ಯವಾಗಿರಬೇಕಾದ ಬಹುತೇಕ ಇಲಾಖೆಗಳು ಮತ್ತು ಕಚೇರಿಗಳು ಕಾರ್ಯ ನಿರ್ವಹಿಸುವಂತಾಗಿದೆ ಎಂದರು.

3000 ಕೋಟಿ ರೂ. ಯೋಜನೆ: ಕಳೆದ ಐದು ವರ್ಷಗಳ ಅವಧಿಯಲ್ಲಿ ಕಾಪು ಕ್ಷೇತ್ರದಲ್ಲಿ 3,000 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಂಡಿವೆ. ಇನ್ನೂ 500 ಕೋ. ರೂ. ವರೆಗಿನ ಯೋಜನೆಗಳು ಅನುಷ್ಠಾನದ ಹಂತದಲ್ಲಿವೆ. ಕಾಪು ಮತ್ತು ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ 1215 ಕೋ. ರೂ. ವೆಚ್ಚದ ಬೃಹತ್ ಕುಡಿಯುವ ನೀರಿನ ಯೋಜನೆಯು ಟೆಂಡರ್ ಹಂತದಲ್ಲಿದೆ. ಇದೇ ಸಂದರ್ಭದಲ್ಲಿ ಮಿನಿ ವಿಧಾನ ಸೌಧವೂ ಉದ್ಘಾಟನೆಗೊಂಡಿರುವುದು ಹರ್ಷ ತಂದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, 2018ರಲ್ಲಿ ತಾಲೂಕು ರಚನೆಯಾಗುವಾಗ ತಹಶೀಲ್ದಾರ್ ಮತ್ತು ಅವರ ಅಗತ್ಯದ ಸಿಬಂದಿಗಳ ಸೇವೆಗೆ ಮಾತ್ರಾ ಸೀಮಿತವಾಗಿದ್ದ ಕಾಪು ತಾಲೂಕಿನಲ್ಲಿ ಐದು ವರ್ಷದೊಳಗೆ ಸುಸಜ್ಜಿತವಾದ ಮಿನಿ ವಿಧಾನಸೌಧ ಸಹಿತವಾಗಿ ತಾಲೂಕಿಗೆ ಅವಶ್ಯವಾಗಿರಬೇಕಾದ ಬಹುತೇಕ ಇಲಾಖೆಗಳು ಮತ್ತು ಕಚೇರಿಗಳು ಕಾರ್ಯ ನಿರ್ವಹಿಸುವಂತಾಗಿದೆ. ಇಲ್ಲಿ ಜನರಿಗೆ ಒಂದೇ ಸೂರಿನಲ್ಲಿ ಎಲ್ಲಾ ಸೇವೆಗಳನ್ನೂ ಒದಗಿಸುವುದೇ ಇದರ ಹಿಂದಿನ ಮುಖ್ಯ ಉದ್ದೇಶವಾಗಿದೆ.

ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ. ಹಾಕೆ, ಕರ್ನಾಟಕ ಗೃಹಮಂಡಳಿ ಕಾರ್ಯಪಾಲಕ ಅಭಿಯಂತರೆ ಸಿ.ಕೆ. ಮಂಜುಳಾ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್, ಶಿಕ್ಷಣ ಇಲಾಖೆ ಅಧಿಕಾರಿ ಚಂದ್ರೇಗೌಡ, ಉಪ ಖಜಾನಾಧಿಕಾರಿ ಪುಟ್ಟರಾಜು, ನೋಂದಣಾಧಿಕಾರಿ ಶ್ರೀಧರ್, ಎಡಿಎಲ್‍ಆರ್ ತಿಪ್ಪೇರಾಯ, ಗುತ್ತಿಗೆದಾರ ವಾಸುದೇವ ಶೆಟ್ಟಿ ಕಾಪು ಉಪಸ್ಥಿತರಿದ್ದರು.

ಸಮ್ಮಾನ: ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಮಿನಿ ವಿಧಾನಸೌಧ ನಿರ್ಮಾಣದ ಗುತ್ತಿಗೆದಾರರಾದ ಕಾಪು ಶ್ರೀ ದೇವಿಪ್ರಸಾದ್ ಕನ್‍ಸ್ಟ್ರಕ್ಷನ್‍ನ ಆಡಳಿತ ನಿರ್ದೇಶಕ ಕೆ. ವಾಸುದೇವ ಶೆಟ್ಟಿ, ವಿನ್ಯಾಸಗಾರ ಯೋಗೀಶ್, ಕರ್ನಾಟಕ ಗೃಹ ಮಂಡಳಿಯ ಅಧಿಕಾರಿಗಳಾದ ಸಿ.ಕೆ. ಮಂಜುಳ, ಸಹನಾ ಅವರನ್ನು ಸಮ್ಮಾನಿಸಲಾಯಿತು.

ಕಾಪು ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಸ್ವಾಗತಿಸಿದರು. ಪುರಸಭೆ ಮುಖ್ಯಾ„ಕಾರಿ ಬಿ. ವೆಂಕಟೇಶ ನಾವುಡ ವಂದಿಸಿದರು. ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ಮತ್ತು ಲೆಸ್ಟರ್ನ್ ಕ್ಲಾರೆನ್ಸ್ ಕರ್ನೇಲಿಯೋ ಕಾರ್ಯಕ್ರಮ ನಿರೂಪಿಸಿದರು.

ಎಲ್ಲರಿಗೂ ಜಾತಿ ಪ್ರಮಾಣ ಪತ್ರಕ್ಕೆ ಶಿಫಾರಸು: ಇನ್ನು ಮುಂದೆ ಮೀಸಲಾತಿ ಇದ್ದವರಿಗೂ, ಮೀಸಲಾತಿ ಇರದೇ ಇರುವವರಿಗೂ ಎಲ್ಲರಿಗೂ ಜಾತಿ ಪ್ರಮಾಣ ಪತ್ರ ನೀಡುವ ಬಗ್ಗೆ ಸರಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯದಲ್ಲಿ ಮೀಸಲಾತಿ ಪಟ್ಟಿಯಲ್ಲಿ ಇಲ್ಲದ ಜಾತಿಯವರಿಗೆ ಜಾತಿ ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಇಲ್ಲವಾಗಿತ್ತು. ಶಾಲೆಗೆ ಮಕ್ಕಳನ್ನು ದಾಖಲಾತಿ ಮಾಡುವಾಗಲೇ ಅರ್ಜಿಯಲ್ಲಿ ಜಾತಿಯ ಹೆಸರನ್ನು ಉಲ್ಲೇಖಿಸಲು ಅವಕಾಶ ಮಾಡಿಕೊಡುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.

ಶಿಕ್ಷಕರ ನೇಮಕಾತಿ: ಗಂಡನ ಬದಲು ಪೋಷಕರ ಪ್ರಮಾಣ ಪತ್ರ

ಶಿಕ್ಷಕರ ನೇಮಕಾತಿಯ ವೇಳೆ ವಿವಾಹಿತ ಮಹಿಳಾ ಅಭ್ಯರ್ಥಿಗಳು ಗಂಡನ ಆದಾಯ ಪ್ರಮಾಣ ಪತ್ರ ಸಲ್ಲಿಸುವ ನಿಯಮಾವಳಿ ರಾಜ್ಯದಲ್ಲಿ ಜಾರಿಯಲ್ಲಿದ್ದು ಇದರಿಂದಾಗಿ ಮಹಿಳೆಯರು ತೊಂದರೆ ಎದುರಿಸುವಂತಾಗಿದೆ. ಅದಕ್ಕಾಗಿ ಶಿಕ್ಷಕರ ಆಯ್ಕೆಗಾಗಿ ಗಂಡನ ಆದಾಯ ಪ್ರಮಾಣಪತ್ರದ ಬದಲಾಗಿ ತಂದೆ - ತಾಯಿಯ ಆದಾಯ ಪ್ರಮಾಣ ಪತ್ರವನ್ನೇ ಪರಿಗಣಿಸುವ ನಿಟ್ಟಿನಲ್ಲಿಯೂ ಚಿಂತನೆ ನಡೆಸಲಾಗಿದೆ. ಈ ವಿಚಾರದಲ್ಲಿ ದೇಶದಲ್ಲಿ ಇರುವ ಕಾನೂನನ್ನೇ ಜಾರಿಗೆ ತರುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಕೆ. ಜಯಪ್ರಕಾಶ್ ಹೆಗ್ಡೆ  ನುಡಿದರು. 

Similar News