ಮಾಜಿ ಕೇಂದ್ರ ಸಚಿವನ ಸೋದರಳಿಯ, ಸ್ನೇಹಿತ ಆತ್ಮಹತ್ಯೆ

Update: 2023-03-23 03:42 GMT

ಚಂಡೀಗಢ: ಮಾಜಿ ಕೇಂದ್ರ ಸಚಿವ ಹಂಸರಾಜ್ ಅಹಿರ್ ಅವರ ಅಳಿಯ ಮಹೇಶ್ ಅಹಿರ್ (26) ಮತ್ತು ಸ್ನೇಹಿತ ಹರೀಶ್ ಧೋತೆ (27) ಚಂಡೀಗಢದ ಗಿಡಮರಗಳಿದ್ದ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ನೇಣಿಗೆ ಶರಣಾಗಿದ್ದಾರೆ.

ಇಬ್ಬರೂ ಮಹಾರಾಷ್ಟ್ರದ ಚಂದ್ರಾಪುರದವರು. ಮಧ್ಯಪ್ರದೇಶದ ಉಜ್ಜಯಿನಿಗೆ ತೆರಳುವುದಾಗಿ ಹೇಳಿ ಇಬ್ಬರೂ ಮಾರ್ಚ್ 14ರಂದು ಮನೆ ಬಿಟ್ಟಿದ್ದರು. ಆದರೆ ಅವರು ಉಜ್ಜಯಿನಿ ತಲುಪಿರಲಿಲ್ಲ ಹಾಗೂ ಅವರ ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಮಾರ್ಚ್ 15ರಂದು ಅವರ ಕುಟುಂಬದವರು ಚಂದ್ರಾಪುರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಮೊಬೈಲ್ ಲೊಕೇಶನ್ ಅವರು ಹರಿದ್ವಾರದಲ್ಲಿ ಇದ್ದುದನ್ನು ಪೊಲೀಸರು ಪತ್ತೆ ಮಾಡಿದ ಬಳಿಕ ಕುಟುಂಬದವರು ಉತ್ತರಾಖಂಡಕ್ಕೆ ಕೂಡಾ ತೆರಳಿದ್ದರು. ಮಹೇಶ್ ಅವರು ಹಂಸರಾಜ್ ಅವರ ಅಣ್ಣ ಹರಿಶ್ಚಂದ್ರ ಅಹಿರ್ ಅವರ ಪುತ್ರ.

ಚಂಡೀಗಢದ ಸೆಕ್ಟರ್ 52ರಲ್ಲಿ ಬುಧವಾರ ಮಧ್ಯಾಹ್ನ 1 ಗಂಟೆಯ ವೇಳೆಗೆ ಮರದಲ್ಲಿ ಇಬ್ಬರು ನೇತಾಡುತ್ತಿದ್ದ ಬಗ್ಗೆ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ತಕ್ಷಣ ಸರ್ಕಾರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆ ವೇಳೆಗಾಗಲೇ ಅವರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು.

ಬುಧವಾರ ಬೆಳಿಗ್ಗೆ ಡೆಹ್ರಾಡೂನ್‌ನಿಂದ ಬಸ್‌ನಲ್ಲಿ ಚಂಡೀಗಢಕ್ಕೆ ಇಬ್ಬರೂ ಆಗಮಿಸಿದ್ದರು ಎಂದು ಪ್ರಯಾಣದ ಟಿಕೆಟ್ ಆಧರಿಸಿ ಪೊಲೀಸರು ಹೇಳಿದ್ದಾರೆ. ಮದ್ಯದ ಬಾಟಲಿ ಮತ್ತು ಕನ್ನಡಕ ಕೂಡಾ ಸ್ಥಳದಲ್ಲಿ ಪತ್ತೆಯಾಗಿದೆ. ಪತ್ತೆಯಾದ ದಾಖಲೆಗಳ ಆಧಾರದಲ್ಲಿ ಇಬ್ಬರ ಗುರುತನ್ನು ಪೊಲೀಸರು ಪತ್ತೆ ಮಾಡಿ ಕುಟುಂಬಕ್ಕೆ ಮಾಹಿತಿ ನೀಡಿದರು.

Similar News