ಮಹಿಳೆಯರ ಆರೋಗ್ಯ ಚಿಕಿತ್ಸೆಗಾಗಿ ಆಯುಷ್ಮತಿ ಕ್ಲಿನಿಕ್

Update: 2023-03-26 13:06 GMT

ಉಡುಪಿ, ಮಾ.26: ಮಹಿಳೆಯರ ಆರೋಗ್ಯ ಸುಧಾರಣೆಗಾಗಿ ಮತ್ತು  ಆರೋಗ್ಯ ಸಮಸ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸಲು ಪ್ರತ್ಯೇಕ ಕ್ಲಿನಿಕ್‌ಗಳ ಅವಶ್ಯಕತೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ವಿಶೇಷ ಆರೋಗ್ಯ ಸೇವೆಗಳನ್ನು ಒದಗಿಸಲು ಆಯುಷ್ಮತಿ ಕ್ಲಿನಿಕ್‌ಗಳನ್ನು ರಾಜ್ಯದ ಪ್ರಮುಖ ನಗರಗಳಲ್ಲಿ ಸ್ಥಾಪಿಸ ಲಾಗುತ್ತಿದೆ. ಅದರಂತೆ ಉಡುಪಿ ಜಿಲ್ಲೆಯಲ್ಲಿ ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ (ಅಲಂಕಾರ್ ಚಿತ್ರಮಂದಿರ ಹತ್ತಿರ)ದಲ್ಲಿ ಆಯುಷ್ಮತಿ ಕ್ಲಿನಿಕ್ ಆರಂಭಿಸಲಾಗಿದೆ.

ಮಹಿಳೆಯರಿಗೆ ತಮ್ಮ ಆರೋಗ್ಯ ಸಮಸ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸಲು ಅವಕಾಶ ಕಲ್ಪಿಸುವುದು, ಹದಿಹರೆಯದ ಹೆಣ್ಣು ಮಕ್ಕಳಿಗೆ ದೈಹಿಕ ಬದಲಾವಣೆ ನೈರ್ವಲ್ಯ ಮತ್ತು ಸಂತಾನೋತ್ಪತ್ತಿ ಕುರಿತು ಅರಿವು ಮೂಡಿಸುವುದು ಮತ್ತು ಆಪ್ತ ಸಮಾಲೋಚನೆ ನಡೆಸುವುದು, 30ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಅಸಾಂಕ್ರಮಿಕ ರೋಗಗಳ ತಪಾಸಣೆ ನಡೆಸುವುದು, ರೆಪರಲ್ ಸೇವೆ ಒದಗಿಸುವುದು ಈ ಆಯುಷ್ಮತಿ ಕ್ಲಿನಿಕ್‌ನ ಪ್ರಮುಖ ಉದ್ದೇಶವಾಗಿದೆ.

ಈ ಕ್ಲಿನಿಕ್‌ನಲ್ಲಿ ಪ್ರತಿದಿನ ಒಬ್ಬ ತಜ್ಞ ವೈದ್ಯರ ಸೇವೆಯು ಲಭ್ಯವಿದ್ದು, ಸೋಮವಾರ: ಫಿಜಿಷಿಯನ್, ಮಂಗಳವಾರ: ಮೂಳೆ ಮತ್ತು ಕೀಲು ತಜ್ಞರು, ಬುಧವಾರ: ಶಸ್ತ್ರ ಚಿಕಿತ್ಸಾತಜ್ಞರು, ಗುರುವಾರ: ಮಕ್ಕಳ ತಜ್ಞರು, ಶುಕ್ರವಾರ: ಸ್ತ್ರೀರೋಗ ತಜ್ಞರು, ಶನಿವಾರ: ಇತರೆ ತಜ್ಞರು(ಕಿವಿ, ಮೂಗು, ಗಂಟಲು, ಚರ್ಮ, ನೇತ್ರ) ಮಹಿಳೆಯರನ್ನು ತಪಾಸಣೆ ನಡೆಸಲಿದ್ದಾರೆ.

ಅಲ್ಲದೆ ಆಪ್ತ ಸಮಲೋಚನೆ ಕೂಡ ಲಭ್ಯವಿದ್ದು, ಋತುಚಕ್ರ ಸಂಬಂಧಿ ಹಾಗೂ ಋತುಚಕ್ರ ನೈರ್ಮಲ್ಯ, ಕುಟುಂಬ ಕಲ್ಯಾಣ ಯೋಜನೆಗಳು, ಅಸಾಂಕ್ರಾಮಿಕ ರೋಗಗಳು, ಸಂತಾನೋತ್ಪತ್ತಿ ಅಂಗಗಳ ಸೋಂಕು/ಲೈಂಗಿಕ ಸೋಂಕುಗಳು, ಮಾನಸಿಕ ಆರೋಗ್ಯ ಸಮಸ್ಯೆಗಳು, ಹದಿಹರೆಯದ ಸಮಸ್ಯೆಗಳು, ಮುಟ್ಟು ನಿಲ್ಲುವ ಸಮಯದ ಸವಸ್ಯೆಗಳು, ಪೋಷ್ಟಿಕಾಂಶದ ಕೊರತೆಗಳ ಬಗ್ಗೆ ವೈದ್ಯರಿಂದ ಸೂಕ್ತ ಸಲಹೆ ಸೂಚನೆಗಳನ್ನು ಪಡಯಬಹುದು. ಅಲ್ಲದೇ ಲ್ಯಾಬ್ ಪರೀಕ್ಷೆಗಳ ಸೇವೆ ಮತ್ತು ಉಚಿತ ಔಷಧಿಗಳು ದೊರೆಯುತ್ತವೆ.

ಉಡುಪಿಯ ಈ ಕ್ಲಿನಿಕ್ ಬೆಳಿಗ್ಗೆ 9ಗಂಟೆಯಿಂದ ಸಂಜೆ 4.30ರವರೆಗೆ ತೆರೆದಿರುತ್ತದೆ. ಜಿಲ್ಲೆಯ ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಈ ಕ್ಲಿನಿಕ್‌ನ ಸದುಪಯೋಗ ಪಡೆಯಬಹುದಾಗಿದೆ.

"ಆರೋಗ್ಯ ಸಮಸ್ಯೆಗಳ ಬಗ್ಗೆ ಪರೀಕ್ಷಿಸಿಕೊಳ್ಳಲು ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಶುಲ್ಕ ನೀಡಲಾಗದೇ, ತಜ್ಞ ವೈದ್ಯರ ಸೇವೆಯಿಂದ ವಂಚಿತರಾಗಿ, ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೇ ಸಾಕಷ್ಟು ಸಂಖ್ಯೆಯ ಮಹಿಳೆಯರು ಮತ್ತು ಹದಿ ಹರೆಯದವರು ಅನಾರೋಗ್ಯ ಪೀಡಿತರಾಗಿ, ಅನೇಕ ಸಮಸ್ಯೆಗಳನ್ನು ಎದುರಿಸುತಿ ದ್ದಾರೆ. ಜಿಲ್ಲೆಯಲ್ಲಿ ಆರಂಭವಾಗಿರುವ ಆಯುಷ್ಮತಿ ಕ್ಲಿನಿಕ್‌ಗಳಲ್ಲಿ  ಮಹಿಳೆಯರು ಮತ್ತು ಹದಿ ಹರೆಯದವರಿಗೆ ತಜ್ಞ ವೈದ್ಯರಿಂದ ಉಚಿತ ತಪಾಸಣೆ, ಆಪ್ತ ಸಮಾ ಲೋಚನೆಯೊಂದಿಗೆ ಅಗತ್ಯ ಔಷಧಗಳನ್ನು ಉಚಿತವಾಗಿ ನೀಡಲಾಗುವುದು"
-ಕೂರ್ಮಾರಾವ್ ಎಂ., ಜಿಲ್ಲಾಧಿಕಾರಿ, ಉಡುಪಿ

ಆಯುಷ್ಮತಿ ಕ್ಲಿನಿಕ್ ಉದ್ಘಾಟನೆ
ಆಯುಷ್ಮತಿ ಕ್ಲಿನಿಕ್‌ನ ಉದ್ಘಾಟನೆಯನ್ನು ಮಾ.27ರಂದು ಬೆಳಗ್ಗೆ 11.30ಕ್ಕೆ ರಾಜ್ಯದ ಮುಖ್ಯಮಂತ್ರಿಗಳು, ಭಾರತ ಸರಕಾರದ ಆರೋಗ್ಯ ಸಚಿವರು  ಮತ್ತು ರಾಜ್ಯದ ಆರೋಗ್ಯ ಸಚಿವರು ವರ್ಚುಲ್ ಮೂಲಕ ನೆರವೇರಿಸಲಿದ್ದಾರೆ.

ಈ ಕಾರ್ಯಕ್ರಮದ ನೇರ ಪ್ರಸಾರವನ್ನು ಉಡುಪಿಯ ಅಲಂಕಾರ್ ಚಿತ್ರಮಂದಿರದ ಬಳಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಆಯುಷ್ಮತಿ ಕ್ಲಿನಿಕ್‌ನಲ್ಲಿ ಮಾಡಲಾಗಿದ್ದು, ಜಿಲ್ಲೆಯ ಆಯುಷ್ಮತಿ ಕ್ಲಿನಿಕ್‌ನ ಉದ್ಘಾಟನೆ ಸಹ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Similar News