ಪ್ರಧಾನಿ ಮೋದಿ ಹಣ ಕಳಿಸಿದ್ದಾರೆಂದು ನಂಬಿದ್ದೆ: ಬ್ಯಾಂಕ್ ತಪ್ಪಿನಿಂದ ರೂ. 1 ಲಕ್ಷ ಪಡೆದ ಬೀಡಿ ಕಾರ್ಮಿಕ ಜೈಲು ಪಾಲು!
ಸಿಂಗ್ಭುಮ್: ರೂ. ಒಂದು ಲಕ್ಷಕ್ಕೂ ಹೆಚ್ಚು ಮೊತ್ತ ಹೊಂದಿದ್ದ ಬ್ಯಾಂಕ್ ಖಾತೆಯು ತನ್ನ ಆಧಾರ್ ನಂಬರ್ಗೆ ತಪ್ಪಾಗಿ ಜೋಡಣೆಯಾಗಿದ್ದರಿಂದ ಜೀತ್ರಾಯ್ ಸಮಂತ್ ಎಂಬ ಬೀಡಿ ಕಾರ್ಮಿಕನ ಜೈಲು ಶಿಕ್ಷೆಗೆ ಕಾರಣವಾದ ಘಟನೆ ನಡೆದಿದೆ ಎಂದು indianexpress.com ವರದಿ ಮಾಡಿದೆ.
42 ವರ್ಷದ ಬೀಡಿ ಕಾರ್ಮಿಕನಾದ ಜೀತ್ರಾಯ್ ಸಮಂತ್ ಎಂಬ ಝಾರ್ಖಂಡ್ ರಾಜ್ಯದ ಸಿಂಗ್ಭುಮ್ ಜಿಲ್ಲೆಗೆ ಸೇರಿದ ವ್ಯಕ್ತಿಯ ಆಧಾರ್ ಸಂಖ್ಯೆಗೆ ಮಹಿಳೆಯೊಬ್ಬರ ಬ್ಯಾಂಕ್ ಖಾತೆ ತಪ್ಪಾಗಿ ಜೋಡಣೆಯಾಗಿದ್ದು, ಆ ಖಾತೆಯಲ್ಲಿದ್ದ ಹಣವನ್ನು ತೆಗೆದ ಕಾರಣಕ್ಕೆ ರಾಜ್ಯ ಪೊಲೀಸರು ಆತನನ್ನು ಬಂಧಿಸಿದ್ದಾರೆ. ದೇಶಾದ್ಯಂತ ಕೋವಿಡ್ ಸಾಂಕ್ರಾಮಿಕ ಆವರಿಸಿದ್ದಾಗ ತನ್ನ ಬ್ಯಾಂಕ್ ಖಾತೆಯಲ್ಲಿ ರೂ. ಒಂದು ಲಕ್ಷಕ್ಕೂ ಹೆಚ್ಚು ಮೊತ್ತವಿರುವ ಸಂಗತಿ ನಾಗರಿಕ ಸೇವಾ ಕೇಂದ್ರದ ಮೂಲಕ ಸಮಂತ್ ಅರಿವಿಗೆ ಬಂದಿತ್ತು. ದೇಶಾದ್ಯಂತ ಗ್ರಾಮೀಣ ಭಾಗ ಹಾಗೂ ತೀರ ದೂರವಿರುವ ಪ್ರದೇಶಗಳಲ್ಲಿ ಈ ನಾಗರಿಕ ಸೇವಾ ಕೇಂದ್ರಗಳು ಅಗತ್ಯ ಸಾರ್ವಜನಿಕ ಸೇವೆಗಳು, ಕಲ್ಯಾಣ ಯೋಜನೆಗಳು ಇತ್ಯಾದಿಗಳನ್ನು ಒದಗಿಸುತ್ತವೆ. ಪ್ರಕರಣದ ತನಿಖೆಯ ಬಗ್ಗೆ ಮಾಹಿತಿ ಹೊಂದಿರುವ ಮೂಲಗಳ ಪ್ರಕಾರ, ಈ ನಾಗರಿಕ ಕೇಂದ್ರವು ಫಲಾನುಭವಿಗಳು ತಮ್ಮ ಖಾತೆಯಿಂದ ಹಣ ತೆಗೆಯಲು ಬ್ಯಾಂಕ್ ಪ್ರತಿನಿಧಿಯೊಬ್ಬರನ್ನು ತನ್ನ ಜೊತೆಗಿಟ್ಟುಕೊಂಡಿತ್ತು.
ತನ್ನ ಖಾತೆಯಿಂದ ಹಣ ಕಾಣೆಯಾಗಿದೆ ಎಂದು ಶ್ರಿಮತಿ ಲಾಗೂರಿ ಎಂಬ ಮಹಿಳೆ ಝಾರ್ಖಂಡ್ ರಾಜ್ಯ ಗ್ರಾಮೀಣ ಬ್ಯಾಂಕ್ನ ವ್ಯವಸ್ಥಾಪಕರಿಗೆ ದೂರು ನೀಡಿದ್ದರಿಂದ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸಮಂತ್ ಕಾನೂನಿನ ಬಲೆಗೆ ಬಿದ್ದಿದ್ದಾನೆ. ಈ ಕುರಿತು ವ್ಯವಸ್ಥಾಪಕರು ಪ್ರಾಧಿಕಾರಕ್ಕೆ ಪತ್ರ ಬರೆದಾಗ, ನಡೆದಿರುವ ತಪ್ಪು ಬೆಳಕಿಗೆ ಬಂದಿದೆ. ನಂತರ ವ್ಯವಸ್ಥಾಪಕರು ಸಮಂತ್ನಿಗೆ ಹಣ ಹಿಂದಿರುಗಿಸುವಂತೆ ಸೂಚಿಸಿದ್ದಾರೆ. ಆದರೆ, ಆತ ಹಣ ಹಿಂದಿರುಗಿಸಲು ವಿಫಲನಾಗಿದ್ದರಿಂದ ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406 (ನಂಬಿಕೆ ದ್ರೋಹ), ಹಾಗೂ ಸೆಕ್ಷನ್ 420 (ವಂಚನೆ) ಅಡಿ ಸಿಂಗ್ಭುಮ್ ಜಿಲ್ಲೆಯ ಮುಫಾಸಿಲ್ ಪೊಲೀಸ್ ಠಾಣೆಯಲ್ಲಿ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಳ್ಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಶೇಖರ್, "ಮಾರ್ಚ್ 24ರಂದು ಸಮಂತ್ನನ್ನು ಬಂಧಿಸಲಾಯಿತು. ಬೇರೊಬ್ಬರ ಬ್ಯಾಂಕ್ ಖಾತೆಗೆ ಆತನ ಆಧಾರ್ ಕಾರ್ಡ್ ಅನ್ನು ತಪ್ಪಾಗಿ ಜೋಡಿಸಲಾಗಿತ್ತು. ಆದರೆ, ಆತ ಹಣವನ್ನು ಹಿಂದಿರುಗಿಸಲಿಲ್ಲ. ಪೊಲೀಸರು ಈ ಕುರಿತು ನೋಟಿಸ್ ಜಾರಿ ಮಾಡಿದಾಗ ತನ್ನ ಗುರುತು ತಿಳಿಸದಂತೆ ಆತ ನಾಗರಿಕ ಸೇವಾ ಕೇಂದ್ರದ ನಿರ್ವಾಹಕನಿಗೆ ಲಂಚ ನೀಡಿದ್ದ. ಆತ ನಮಗೆ ಪತ್ರ ಬರೆದು, 'ಪ್ರಧಾನಿ ನರೇಂದ್ರ ಮೋದಿ ನನಗೆ ದುಡ್ಡು ಕಳಿಸಿದ್ದಾರೆ ಎಂದು ನಂಬಿದ್ದೆ' ಎಂದು ಹೇಳಿಕೊಂಡಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.
"ಈ ಮುನ್ನ ಗ್ರಾಮೀಣ ಬ್ಯಾಂಕ್ ಅನ್ನು ಬ್ಯಾಂಕ್ ಆಫ್ ಇಂಡಿಯಾ ಪ್ರಾಯೋಜಿಸುತ್ತಿತ್ತು. ಬ್ಯಾಂಕ್ ವಿಲೀನವಾದಾಗ ಏಪ್ರಿಲ್ 2019ರಂದು ಅದರ ಸಂಪೂರ್ಣ ದತ್ತಾಂಶ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನವಾಯಿತು. ಈ ಪ್ರಕ್ರಿಯೆಯಲ್ಲಿ ಸಮಂತ್ನ ಆಧಾರ್ ಕಾರ್ಡ್ ಸಂಖ್ಯೆ ಆಕಸ್ಮಿಕವಾಗಿ ಬೇರೆ ವ್ಯಕ್ತಿಯ ಬ್ಯಾಂಕ್ ಖಾತೆಗೆ ಜೋಡಣೆಯಾಗಿದೆ. ಆ ಮಹಿಳೆಯು ಈ ಕುರಿತು ಕೂಡಲೇ ದೂರು ನೀಡಿರಲಿಲ್ಲ. ಇಲ್ಲವಾಗಿದ್ದರೆ, ಈ ತಪ್ಪನ್ನು ತಡೆಯಬಹುದಾಗಿತ್ತು. ಕೇವಲ ಒಬ್ಬ ಬ್ಯಾಂಕ್ ಅಧಿಕಾರಿಯ ವಿರುದ್ಧ ಈ ತಪ್ಪನ್ನು ಹೊರಿಸುವುದು ಕಷ್ಟವಾಗುತ್ತದೆ" ಎಂದು ಬ್ಯಾಂಕ್ ವ್ಯವಸ್ಥಾಪಕ ಮನೀಶ್ ಕುಮಾರ್ indianexpress.com ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಹೆಸರೇಳಲಿಚ್ಛಿಸದ ಯುಐಡಿಎಐ ಅಧಿಕಾರಿಯೊಬ್ಬರ ಪ್ರಕಾರ, "ಇದು ಸ್ಪಷ್ಟವಾಗಿ ಬ್ಯಾಂಕ್ನ ತಪ್ಪಾಗಿದೆ. ಈ ತಪ್ಪಿನಲ್ಲಿ ಯುಐಡಿಎಐನ ಯಾವುದೇ ಪಾತ್ರವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿ ಕ್ಷಮೆ ಕೋರದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ: ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ಎಚ್ಚರಿಕೆ