ನಿರ್ಭಯಾ ನಿಧಿಯನ್ನು ಅಪರಾಧದಾಚೆಗೂ ವಿಸ್ತರಿಸಿ, ಕಲ್ಯಾಣ ಕಾರ್ಯಕ್ರಮಗಳನ್ನು ಸೇರಿಸಿ: ಸಂಸದೀಯ ಸಮಿತಿ

Update: 2023-03-29 16:45 GMT

ಹೊಸದಿಲ್ಲಿ,ಮಾ.29: ಪೊಲೀಸಿಂಗ್, ಸಂತ್ರಸ್ತರಿಗೆ ನೆರವು ನೀಡಿಕೆ ಮತ್ತು ಮಹಿಳೆಯರನ್ನು ಉದ್ಯೋಗ ಸನ್ನದ್ಧರಾಗಿಸಲು ಅವರ ಕೌಶಲ್ಯ ಮತ್ತು ಜ್ಞಾನದ ಸಬಲೀಕರಣದಂತಹ ಕ್ರಮಗಳನ್ನು ಪ್ರೋತ್ಸಾಹಿಸಲು ನಿರ್ಭಯಾ ನಿಧಿಯ ಬಳಕೆಯ ಮಾರ್ಗಸೂಚಿಗಳನ್ನು ವಿಸ್ತರಿಸಬೇಕು ಎಂದು ಶಿಕ್ಷಣ, ಮಹಿಳೆಯರು ಮತ್ತು ಮಕ್ಕಳು, ಯುವ ಮತ್ತು ಕ್ರೀಡೆಗಳ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿದ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.

ನಿರ್ಭಯಾ ನಿಧಿಯು ಮಹಿಳಾ ಮತ್ತು ಮಕ್ಕಳ ಸಚಿವಾಲಯದ ಅಧೀನದಲ್ಲಿ ಕಾರ್ಯಾಚರಿಸುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಗರ ಅಪರಾಧಗಳ ಮೇಲೆ ಗಮನವನ್ನು ಕೇಂದ್ರೀಕರಿಸುವುದರ ಜೊತೆಗೆ ಸಂತ್ರಸ್ತೆಯರಿಗೆ ಬೆಂಬಲ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಮುದಾಯ ಪೊಲೀಸಿಂಗ್ನಂತಹ ಸಬಲೀಕರಣ ಯೋಜನೆಗಳಿಗೂ ವಿಸ್ತರಿಸಬೇಕು. ‌

ಸಂತ್ರಸ್ತೆಯರಿಗೆ ಮಾನಸಿಕ ಬೆಂಬಲಕ್ಕೂ ಹೆಚ್ಚಿನ ಒತ್ತು ನೀಡಬೇಕು ಮತ್ತು ಪೊಲೀಸ್ ಪಡೆಗೆ ಆಯ್ಕೆಯಾಗಲು ಆಕಾಂಕ್ಷಿ ಮಹಿಳೆಯರಿಗಾಗಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಬೇಕು,ಇದರಿಂದ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪೊಲೀಸ್ ಪಡೆಯಲ್ಲಿ ಮಹಿಳೆಯರ ಪ್ರಾತಿನಿಧ್ಯವು ಹೆಚ್ಚುತ್ತದೆ. ಅಂತಿಮವಾಗಿ ಇದು ಮಹಿಳೆಯರ ವಿರುದ್ಧ ಅಪರಾಧಗಳನ್ನು ತಗ್ಗಿಸುವಲ್ಲಿ ನೆರವಾಗುತ್ತದೆ ಮತ್ತು ನಿಧಿಯ ಬಳಕೆಯೂ ಉತ್ತಮಗೊಳ್ಳುತ್ತದೆ ಎಂದು ರಾಜ್ಯಸಭಾ ಸಂಸದ ವಿವೇಕ ಠಾಕೂರ್ ನೇತೃತ್ವದ ಸಮಿತಿಯು ತನ್ನ 350ನೇ ವರದಿಯಲ್ಲಿ ಅಭಿಪ್ರಾಯಿಸಿದೆ.

ಏಕ-ನಿಲುಗಡೆ ಕೇಂದ್ರವನ್ನು ಸ್ಥಾಪಿಸಲು, ಸುರಕ್ಷತಾ ಸಾಧನಗಳನ್ನು ತಯಾರಿಸಲು,ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲು ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಫಾರೆನ್ಸಿಕ್ ಕಿಟ್ಗಳ ಖರೀದಿ ಇತ್ಯಾದಿಗಳಿಗೆ ನಿರ್ಭಯಾ ನಿಧಿಯ ಬಳಕೆಯನ್ನು ಸಮಿತಿಯು ಗಮನಿಸಿದ್ದು,ಇವು ಮಹಿಳೆಯರ ವಿರುದ್ಧ ಅಪರಾಧಗಳನ್ನು ನಿಯಂತ್ರಿಸಲು ಭದ್ರತಾ ಸಂಸ್ಥೆಗಳಿಗೆ ನೆರವಾಗುತ್ತವೆ ಎಂದು ವರದಿಯಲ್ಲಿ ಹೇಳಿದೆ.

ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಮತ್ತು ಹಿಂದುಳಿದಿರುವ ರಾಜ್ಯಗಳ ಸಮನ್ವಯದೊಂದಿಗೆ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ರಾಜ್ಯಗಳಿಂದ ನಿಧಿಯ ಬಳಕೆಯ ಮೇಲೆ ಪರಿಣಾಮ ಬೀರುವ ತಳಮಟ್ಟದ ವಾಸ್ತವಗಳು ಮತ್ತು ಅಂಶಗಳನ್ನು ತಿಳಿದುಕೊಳ್ಳಲು ಅಧಿಕಾರಯತ ಸಮಿತಿಯೊಂದು ರಾಜ್ಯ ಸರಕಾರಗಳ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚೆಗಳನ್ನು ನಡೆಸಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.

ಹೆಣ್ಣು ಭ್ರೂಣ ಹತ್ಯೆಯನ್ನು ಅಂತ್ಯಗೊಳಿಸಲು ಮತ್ತು ಹದಿಹರೆಯದ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಸರಕಾರದ ಮುಂಚೂಣಿ ಯೋಜನೆ ‘ಬೇಟಿ ಬಚಾವೊ ಬೇಟಿ ಪಢಾವೊ ’ಯೋಜನೆಯು ಇತ್ತೀಚಿಗೆ ಭರವಸೆದಾಯಕ ಫಲಿತಾಂಶಗಳನ್ನು ತೋರಿಸಿದೆ ಎಂದು ಸಮಿತಿಯು ಪ್ರಶಂಸಿಸಿದೆ.

Similar News