ಮತದಾನ ಬಹಿಷ್ಕರಿಸಿರುವ ಗ್ರಾಮಸ್ಥರ ಮನವೊಲಿಕೆಗೆ ಕಮಿಟಿ ರಚನೆ: ಡಿಸಿ ಕೂರ್ಮಾರಾವ್
ಉಡುಪಿ ಜಿಲ್ಲೆಯ ಪತ್ರಕರ್ತರಿಗೆ ಕಾರ್ಯಾಗಾರ
ಉಡುಪಿ, ಎ.6: ಮತದಾನ ಬಹಿಷ್ಕರಿಸಲಾಗಿರುವ ಗ್ರಾಮದ ಜನರ ಮನವೊಲಿಕೆಗಾಗಿ ಆಯಾ ತಾಲೂಕಿನ ತಹಶೀಲ್ದಾರ್ ಹಾಗೂ ತಾಪಂ ಕಾರ್ಯ ನಿರ್ವಹಣಾಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ. ಅವರು ಆ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಹಾಗೂ ಗ್ರಾಮಸ್ಥರನ್ನು ಮನ ವೊಲಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತದ ಮಾಧ್ಯಮ ಪ್ರಾಮಾಣೀಕರಣ ಹಾಗೂ ಕಣ್ಗಾವಲು ಸಮಿತಿ(ಎಂಸಿಎಂಸಿ) ವತಿಯಿಂದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿ ಉಡುಪಿ ಜಿಲ್ಲೆಯ ಮಾಧ್ಯಮದವರಿಗೆ ಗುರುವಾರ ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಲಾದ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಮತ ಗಳಿಕೆ ಹಾಗೂ ರಾಜಕೀಯ ಅಸ್ತ್ರ ಆಗಬಾರದು. ಮತದಾನಕ್ಕೆ 48 ಗಂಟೆಗಳಿಗೆ ಮೊದಲು ಚುನಾ ವಣಾ ಜಾಹೀರಾತು ಪ್ರಕಟಿಸಲು ಪ್ರಾಮಾಣೀಕರಣ ಕಡ್ಡಾಯವಾಗಿದೆ. ಸಾಮಾಜಿಕ ಜಾಲತಾಣಗಳ ಬಗ್ಗೆ 24 ಗಂಟೆಗಳ ಕಾಲ ನಿಗಾ ಇರಿಸಲಾಗುತ್ತಿದೆ. ಪಕ್ಷ ಅಭ್ಯರ್ಥಿ ಮತ್ತು ಚುನಾವಣೆಯ ಮೇಲೆ ಪರಿಣಾಮ ಬೀರುವ ಅಂಶಗಳನ್ನು ಕುರಿತು ಪರಿಶೀಲನೆ ಮಾಡಲಾಗುತ್ತದೆ ಎಂದರು.
ಬರವಣಿಗೆ ಬಗ್ಗೆ ನಿಗಾ
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚೀಂದ್ರ ಮಾತ ನಾಡಿ, ಚುನಾವಣೆಯಲ್ಲಿ ಅಕ್ರಮ ತಡೆಯುವ ನಿಟ್ಟಿನಲ್ಲಿ ಚೆಕ್ಫೋಸ್ಟ್ಗಳನ್ನು ನಿರ್ಮಿಸಲಾಗಿದೆ. ಕೆಲವು ಕಡೆ ದಿಢೀರ್ ಕಾರ್ಯಾಚರಣೆಗಳನ್ನು ಮಾಡಲಾಗುತ್ತಿದೆ. ಏಕಕಾಲದಲ್ಲಿ ಜಿಲ್ಲೆಯಾದ್ಯಂತ ಇರುವ ಗೋಡಾನ್, ಕಟ್ಟಡಗಳಿಗೆ ದಾಳಿ ನಡೆಸಿ ದೊಡ್ಡ ಪ್ರಮಾಣದಲ್ಲಿ ವಸ್ತುಗಳನ್ನು ಸಂಗ್ರಹಿಸಲಾಗಿದೆಯೇ ಎಂಬುದನ್ನು ಪರಿಶೀಲನೆ ಮಾಡಲಾಗಿದೆ ಎಂದು ತಿಳಿಸಿದರು.
ಪೊಲೀಸ್ ಇಲಾಖೆ ಮೂಲಕ ಎಸ್ಪಿ ಕಚೇರಿಯಲ್ಲಿ ಸ್ಥಾಪಿಸಿರುವ ಸೆಲ್ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ವಿಚಾರಗಳ ಬಗ್ಗೆ ನಿಗಾ ಇರಿಸಲಾಗಿದೆ. ಅನುಮತಿ ಪಡೆದರೂ ಸಾಮಾಜಿಕ ಜಾಲತಾಣಗಳಲ್ಲಿ ಏನು ಬೇಕಾದರೂ ಬರೆಯುವಂತಿಲ್ಲ. ಅದಕ್ಕೆ ಅದರದ್ದೆ ಆದ ಕಾನೂನು ಚೌಕಟ್ಟುಗಳಿವೆ ಮತ್ತು ಚುನಾವಣಾ ಆಯೋಗದ ನಿಯಮ ಗಳಿವೆ. ಜಾತಿ, ಧರ್ಮ, ಸಮುದಾಯ, ಭಾಷೆ ಆಧಾರದಲ್ಲಿ ಮತಗಳನ್ನು ಕೇಳಲು ಅವಕಾಶ ಇಲ್ಲ ಎಂದು ಅವರು ಹೇಳಿದರು.
ಬಿಎಲ್ಓಗಳಿಗೆ ಬಹುಮಾನ
ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್. ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಕಳೆದ ಬಾರಿಯ ಚುನಾವಣೆಗೆ ಹೋಲಿಕೆ ಮಾಡಿದರೆ ಜಿಲ್ಲೆಯ 409 ಮತಗಟ್ಟೆಗಳಲ್ಲಿ ರಾಜ್ಯದ ಸರಾಸರಿಗಿಂತ ಕಡಿಮೆ ಮತದಾನ ಆಗಿದೆ. ಅದೇ ರೀತಿ ಜಿಲ್ಲಾ ಮಟ್ಟದಲ್ಲಿ 109 ಮತಗಟ್ಟೆಯಲ್ಲಿ ಶೇಕಡವಾರು ಕಡಿಮೆ ಮತದಾನ ಆಗಿದೆ. ಈ ಮತಗಟ್ಟೆಗಳಿಗೆ ಹೆಚ್ಚು ಗಮನ ಹರಿಸುವುದು ನಮ್ಮ ಉದ್ದೇಶವಾಗಿದೆ. ಅದಕ್ಕಾಗಿ ಬಿಎಲ್ಓಗಳಿಗೆ ತರಬೇತಿ ನೀಡಿ ಹೆಚ್ಚು ಮತದಾನ ಆಗುವಂತೆ ಮಾಡಲಾಗಿದೆ ಎಂದು ತಿಳಿಸಿದರು.
ಕಡಿಮೆ ಹಾಗೂ ಹೆಚ್ಚು ಮತದಾನ ಆಗಿರುವ 10 ಮತಗಟ್ಟೆಗಳ ಬಿಎಲ್ಓ ಗಳು ಕ್ರಮವಾಗಿ ಶೇ.10 ಮತ್ತು ಶೇ.5ರಷ್ಟು ಹೆಚ್ಚು ಮತದಾನ ಮಾಡಿಸಿದರೆ ನಗದು ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ. ಜಿಲ್ಲೆಯ ಸರಕಾರಿ ಮತ್ತು ಅನುದಾನಿತ ಶಾಲೆಗಳ 1.62ಲಕ್ಷ ಮಂದಿ ವಿದ್ಯಾರ್ಥಿಗಳಿಗೆ ತಮ್ಮ ಮನೆಗಳಲ್ಲಿರುವ 18ವರ್ಷ ಮೇಲ್ಪಟ್ಟವರ ಪಟ್ಟಿ, ಮತಗಟ್ಟೆ ಹಾಗೂ ಎಪಿಕ್ ನಂಬರ್ ವಿವರ ಬರೆದು ಶಿಕ್ಷಕರಿಗೆ ಕೊಡುವಂತಹ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. ಇದರಿಂದ ಸುಮಾರು 5ಲಕ್ಷ ಮತದಾರರು ತಮ್ಮ ಮತಗಟ್ಟೆ ಬಗ್ಗೆ ಚರ್ಚೆ ಮಾಡಿದಂತಾಗುತ್ತದೆ. ಪ್ರತಿ ಗ್ರಾಪಂ ಕಚೇರಿಗಳ ಪ್ರವೇಶದಲ್ಲಿ ಆಯಾ ಗ್ರಾಪಂ ವ್ಯಾಪ್ತಿಯ ಮತಗಟ್ಟೆಗಳ ವಿವರಗಳನ್ನು ಫ್ಲೆಕ್ಸ್ ಮೂಲಕ ಹಾಕಲಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಅಶೋಕ್ ಕಾಮತ್ ಮಾದರಿ ನೀತಿ ಸಂಹಿತೆ ಕುರಿತು ಮಾಹಿತಿ ನೀಡಿ ದರು. ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ವಂದಿಸಿದರು.
‘ಉಡುಪಿ ಜಿಲ್ಲೆಯಲ್ಲಿ ಈವರೆಗೆ ದಾಖಲಾತಿ ಇಲ್ಲದ 48.50ಲಕ್ಷ ರೂ. ನಗದು ಹಣ ವನ್ನು ವಶಪಡಿಸಲಾಗಿದೆ. ಅಬಕಾರಿ ಇಲಾಖೆಯೊಂದಿಗೆ ಸೇರಿ 6000ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಸಾಗಾಟ ಮಾಡುತಿದ್ದ ಅಕ್ಕಿಯನ್ನು ಕೂಡ ವಶಪಡಿಸಿಕೊಂಡಿದ್ದೇವೆ. ಈ ಕಾರ್ಯಾಚರಣೆ ಮುಂದುವರೆ ಯಲಿದೆ’
-ಅಕ್ಷಯ್ ಹಾಕೇ ಮಚ್ಚೀಂದ್ರ, ಎಸ್ಪಿ ಉಡುಪಿ