ಮಂಗಳೂರು: ಗುಡ್ ಫ್ರೈಡೇ ಆಚರಣೆ

Update: 2023-04-07 14:47 GMT

ಮಂಗಳೂರು: ಪವಿತ್ರ ದಿನವಾದ ಶುಭ ಶುಕ್ರವಾರ (ಗುಡ್ ಫ್ರೈ ಡೇ)ವನ್ನು ಕ್ರೈಸ್ತರು ದ.ಕ.ಜಿಲ್ಲಾದ್ಯಂತ ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಿಸಿದರು.

ಜಿಲ್ಲೆಯ ಎಲ್ಲಾ ಚರ್ಚ್‌ಗಳಲ್ಲೂ ಬೆಳಗ್ಗಿನಿಂದ ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆಯ ಹಾದಿಯ ವಾಚನ ನಡೆಯಿತು. ಮಂಗಳೂರು ಬಿಷಪ್ ಡಾ.ಪೀಟರ್ ಪಾವ್ಲ್  ಸಲ್ಡಾನ್ಹಾ ಅವರು  ಶಕ್ತಿನಗರದ ಮರಿಯಾಗಿರಿಯ ಮದರ್ ಆಫ್ ಗ್ವಾಡ್ ಚರ್ಚ್‌ನಲ್ಲಿ ಜರಗಿದ ವಿಶೇಷ ಪ್ರಾರ್ಥನಾ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.

ವಿಶೇಷ ಪ್ರಾರ್ಥನಾ ವಿಧಿಯಲ್ಲಿ ಪ್ರವಚನ ನೀಡಿದ ಅವರು ‘ಪಾಪದ ವಿಮೋಚನೆಗೆ ಯಾವುದೇ ಔಷಧ ಇಲ್ಲ. ಯಾವುದೇ ವೈದ್ಯರು, ಮನಃಶಾಸ್ತ್ರಜ್ಞರಿಂದ ಪಾಪ ವಿಮೋಚನೆ ಮಾಡಲು ಸಾಧ್ಯವಿಲ್ಲ. ದೇವರ ಪುತ್ರನಾದ ಯೇಸು ಶಿಲುಬೆಗೆ ಏರಿ ರಕ್ತ ಹರಿಸಿಕೊಂಡು ಪಾಪಕ್ಕೆ ವಿಮೋಚನೆ ಕೊಟ್ಟರು. ಪಾಪದ ಗುಲಾಮರಾಗಿ ದೇವರನ್ನು ತಿರಸ್ಕಾರ ಮಾಡಿದಾಗ ಮನುಷ್ಯರು ನರಕದ ಹಾದಿಯನ್ನು ಹಿಡಿಯುತ್ತಾರೆ. ಯೇಸು ತನ್ನ  ಬಲಿದಾನದ ಮೂಲಕ ಇಂತಹ ಪಾಪಿಗಳಿಗೆ ವಿಮೋಚನೆ ಕೊಟ್ಟರು ಎಂದರು.

ಚರ್ಚ್‌ನ ಪ್ರಧಾನ ಧರ್ಮಗುರು ಫಾ. ಜೆರಾಲ್ಡ್ ಡಿಸೋಜ, ರೆಸಿಡೆಂಟ್ ಧರ್ಮಗುರುಗಳಾದ ಫಾ.ವಿನ್ಸೆಂಟ್ ವಿನೋದ್ ಸಲ್ಡಾನ, ಫಾ. ಪ್ರಮೋದ್ ಕ್ರಾಸ್ತಾ ಪ್ರಾರ್ಥನಾ ವಿಧಿಯಲ್ಲಿ ಭಾಗವಹಿಸಿದರು.

ಶುಭ ಶುಕ್ರವಾರ ಬಲಿಪೂಜೆ ಇಲ್ಲ: ಕೆಥೋಲಿಕ್ ಚರ್ಚ್‌ಗಳಲ್ಲಿ ಶುಭ ಶುಕ್ರವಾರದಂದು ಯಾವುದೇ ಬಲಿಪೂಜೆಗಳು ನಡೆಯುವುದಿಲ್ಲ. ಬದಲಾಗಿ ಬೆಳಗ್ಗಿನಿಂದ ಮಧ್ಯಾಹ್ನ 12ರ ತನಕ ಶಿಲುಬೆಯ ಹಾದಿಯ ಭಕ್ತಿಯ ಕಾರ್ಯಕ್ರಮಗಳು ಸಾಗಿತು. ಕೆಲವು  ಚರ್ಚ್‌ಗಳಲ್ಲಿ ಶಿಲುಬೆಯ ಹಾದಿಯ ಬಳಿಕ ಶಿಲುಬೆಗೆ ಏರಿದ ಯೇಸುವಿನ ಪ್ರತಿಮೆಯನ್ನು ಮೆರವಣಿಗೆ ಮಾಡುವ ಪರಿಪಾಠ ನಡೆಯಿತು. ಇನ್ನು ಕೆಲವು ಚರ್ಚ್‌ಗಳಲ್ಲಿ  ಯೇಸು ಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನು ಒಪ್ಪುವ ತನಕದ ಘಟನೆಗಳನ್ನು ಪ್ರಸ್ತುತ ಪಡಿಸುವ ಕಾರ್ಯ ನಡೆಯಿತು. ಶಿಲುಬೆಯ ಹಾದಿಯ 14 ಪ್ರಮುಖ ಘಟ್ಟಗಳನ್ನು ನೆನಪಿಸಿ ಧ್ಯಾನಿಸಿ ಪ್ರಾರ್ಥನೆಗಳು ಸಾಗಿದವು.

ಸಂಜೆಯ ವೇಳೆ ಕರಾವಳಿಯ ಚರ್ಚ್‌ಗಳಲ್ಲಿ ನಡೆದ ಪ್ರಾರ್ಥನಾ ವಿಧಿಗಳಲ್ಲಿ  ಬೈಬಲ್ ವಾಚನದ ವೇಳೆ ಧರ್ಮಗುರುಗಳು ರಕ್ತವರ್ಣದ ಪೂಜಾ ಬಟ್ಟೆಯನ್ನು ಧರಿಸಿ ಯೇಸು ಕ್ರಿಸ್ತರ ಕೊನೆಯ ಗಳಿಗೆಗಳ ಕಥನವನ್ನು ವಾಚಿಸಿದರು. ಆ  ಬಳಿಕ ಪ್ರವಚನ ಸಾಗಿತು.

ಸಮಾಜದ ನಾನಾ 10 ವಿಚಾರಗಳ ಕುರಿತು ವಿಶೇಷ ಪ್ರಾರ್ಥನೆ ನಡೆಯಿತಲ್ಲದೆ ಶಿಲುಬೆಗೆ ನಮನ, ಶಿಲುಬೆಯ ಆರಾಧನೆಯ ಕಾರ್ಯಕ್ರಮಗಳು ಜರುಗಿದವು. 

Similar News