ಠಾಣೆಗೆ ನುಗ್ಗಿ ಪೊಲೀಸರ ಮೇಲೆ ದಾಳಿ ನಡೆಸಿ ಡಕಾಯಿತ ಸಹಿತ ಮೂವರನ್ನು ಬಿಡುಗಡೆಗೊಳಿಸಿ ಪರಾರಿಯಾದ ದುಷ್ಕರ್ಮಿಗಳು
ಭೋಪಾಲ್: ಮಧ್ಯ ಪ್ರದೇಶದ ಬುರ್ಹಾನ್ಪುರ್ ಜಿಲ್ಲೆಯ ಪೊಲೀಸ್ ಠಾಣೆಯೊಂದಕ್ಕೆ ಶುಕ್ರವಾರ ನುಗ್ಗಿದ 50ಕ್ಕೂ ಅಧಿಕ ಜನರಿದ್ದ ಗುಂಪೊಂದು ಓರ್ವ ಡಕಾಯಿತ ಸೇರಿದಂತೆ ಪೊಲೀಸ್ ಕಸ್ಟಡಿಯಲ್ಲಿದ್ದ ಮೂವರನ್ನು ಬಿಡುಗಡೆಗೊಳಿಸಿದೆ. ಈ ಸಂದರ್ಭ ಠಾಣೆಯಲ್ಲಿ ದಾಂಧಲೆ ನಡೆಸಿದ ದುಷ್ಕರ್ಮಿಗಳು ಪೊಲೀಸರಿಗೂ ಥಳಿಸಿದ್ದಾರೆ.
ಮುಂಜಾನೆ ಸುಮಾರು 3 ಗಂಟೆಗೆ ನಡೆದ ಈ ಘಟನೆ ಠಾಣೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂದರ್ಭ ಠಾಣೆಯಲ್ಲಿ ನಾಲ್ಕು ಮಂದಿ ಪೊಲೀಸ್ ಸಿಬ್ಬಂದಿಗಳು ಕರ್ತವ್ಯದಲ್ಲಿದ್ದರು. ಅವರಲ್ಲಿ ಮೂವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಠಾಣೆಗೆ ನುಗ್ಗಿದ ಗುಂಪು ಬಿಡುಗಡೆಗೊಳಿಸಿದ್ದ ಡಕಾಯಿತ ಹೇಮ ಮೇಘ್ವಾಲ್ ಎಂಬಾತನನ್ನು ಪತ್ತೆಹಚ್ಚಿದವರಿಗೆ ರೂ. 32000 ನಗದು ಬಹುಮಾನವನ್ನು ಪೊಲೀಸರು ಈ ಹಿಂದೆ ಘೋಷಿಸಿದ್ದರು. ಆತನನ್ನು ಕೆಲ ದಿನಗಳ ಹಿಂದೆಯಷ್ಟೇ ಬಂಧಿಸಲಾಗಿತ್ತು.
ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ: ಬಾವಿಗೆ ಬಿದ್ದ ಕಿರಿಯ ಸಹೋದರನನ್ನು ರಕ್ಷಿಸಿದ ಎಂಟು ವರ್ಷದ ಬಾಲಕಿ ಫಾತಿಮಾ