ಭಾರತದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರ: ನಿರ್ಮಲಾ ಸೀತಾರಾಮನ್ ಕೊಟ್ಟ ಪ್ರತಿಕ್ರಿಯೆಯೇನು?

Update: 2023-04-11 12:41 GMT

ವಾಷಿಂಗ್ಟನ್: ಭಾರತದಲ್ಲಿನ ಹೂಡಿಕೆ ಮೇಲೆ ಪರಿಣಾಮ ಬೀರುತ್ತಿರುವ ನಕಾರಾತ್ಮಕ ಪಾಶ್ಚಿಮಾತ್ಯ ಗ್ರಹಿಕೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, "ನೆಲದ ವಾಸ್ತವವನ್ನರಿಯದ ವ್ಯಕ್ತಿಗಳು ಸೃಷ್ಟಿಸಿರುವ ಗ್ರಹಿಕೆಗೆ ಕಿವಿ ಕೊಡುವ ಬದಲು ಭಾರತಕ್ಕೆ ಬನ್ನಿ ಮತ್ತು ನೋಡಿ" ಎಂದು ಹೂಡಿಕೆದಾರರನ್ನು ಆಗ್ರಹಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಭಾರತದ ಆರ್ಥಿಕತೆಯ ಚೇತರಿಕೆ ಮತ್ತು ಬೆಳವಣಿಗೆ ಕುರಿತು ಪೀಟರ್‌ಸನ್ ಅಂತಾರಾಷ್ಟ್ರೀಯ ಆರ್ಥಿಕ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಭಾರತದಲ್ಲಿನ ವಿರೋಧ ಪಕ್ಷದ ಸಂಸದರು ತಮ್ಮ ಸ್ಥಾನಮಾನ ಕಳೆದುಕೊಳ್ಳುತ್ತಿದ್ದಾರೆ ಹಾಗೂ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯದ ಮೇಲೆ ಹಿಂಸಾಚಾರ ನಡೆಯುತ್ತಿದೆ ಎಂಬ ಕುರಿತು ಪಾಶ್ಚಿಮಾತ್ಯ ಪತ್ರಿಕೆಗಳಲ್ಲಿನ ವರದಿ ಬಗ್ಗೆ ಪೀಟರ್‌ಸನ್ ಅಂತಾರಾಷ್ಟ್ರೀಯ ಆರ್ಥಿಕತೆ ಸಂಸ್ಥೆಯ ಅಧ್ಯಕ್ಷ ಆ್ಯಡಮ್ ಎಸ್. ಪೋಸನ್ ಪ್ರಶ್ನೆಯೆತ್ತಿದರು.

ಆ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್, "ಈ ಪ್ರಶ್ನೆಗೆ ಉತ್ತರ ಭಾರತಕ್ಕೆ ಆಗಮಿಸುತ್ತಿರುವ ಹೂಡಿಕೆದಾರರಲ್ಲಿ ಅಡಗಿದೆ, ಮತ್ತವರು ಬರುತ್ತಲೇ ಇದ್ದಾರೆ. ಭಾರತಕ್ಕೆ ಭೇಟಿಯನ್ನೇ ನೀಡದೆ ವರದಿಗಳನ್ನು ಸೃಷ್ಟಿಸುತ್ತಿರುವ ವ್ಯಕ್ತಿಗಳ ಮಾತಿಗೆ ಕಿವಿಗೊಡದೆ ಭಾರತದಲ್ಲಿ ಏನಾಗುತ್ತಿದೆ ಎಂಬುದನ್ನು ಬಂದು ನೋಡಿ ಎಂದು ಮಾತ್ರ ಬಂಡವಾಳ ಸ್ವೀಕರಿಸುವ ಆಸಕ್ತಿ ಹೊಂದಿರುವ ವ್ಯಕ್ತಿಯಾಗಿ ಹೇಳಲು ಬಯಸುತ್ತೇನೆ" ಎಂದು ಉತ್ತರಿಸಿದ್ದಾರೆ.

"ಭಾರತದಲ್ಲಿ ಮುಸ್ಲಿಮರು ಎರಡನೆ ಅತಿ ದೊಡ್ಡ ಜನಸಂಖ್ಯೆಯುಳ್ಳವರಾಗಿದ್ದಾರೆ ಮತ್ತು ಅವರ ಜನಸಂಖ್ಯೆ ಹಲವು ಪಟ್ಟು ವೃದ್ಧಿಯಾಗುತ್ತಿದೆ. ಒಂದು ವೇಳೆ ಈ ವರದಿಗಳಲ್ಲಿನ ಪ್ರಭುತ್ವದ ನೆರವಿನಿಂದ ಅವರ ಬದುಕನ್ನು ದುರ್ಭರಗೊಳಿಸಲಾಗಿದೆ ಅಥವಾ ದುರ್ಭರಗೊಳಿಸಲಾಗುತ್ತಿದೆ ಎಂಬ ಗ್ರಹಿಕೆಯಲ್ಲಿ ವಾಸ್ತವ ಇರುವುದೇ ಆದರೆ, 1947ರಲ್ಲಿದ್ದ ಮುಸ್ಲಿಮರ ಜನಸಂಖ್ಯೆ ಈಗಿನಷ್ಟು ವೃದ್ಧಿಯಾಗಲು ಸಾಧ್ಯವಾಗುತ್ತಿತ್ತೆ ಎಂದು ಕೇಳಲು ಬಯಸುತ್ತೇನೆ" ಎಂದು ಹೇಳಿದ್ದಾರೆ.

ಇದೇ ವೇಳೆ ಭಾರತದಲ್ಲಿ ಮುಸ್ಲಿಮರನ್ನು ಬಲಿಪಶುಗಳನ್ನಾಗಿಸಲಾಗುತ್ತಿದೆ ಎಂಬ ಆರೋಪಗಳನ್ನು ಅಲ್ಲಗಳೆದಿರುವ ನಿರ್ಮಲಾ ಸೀತಾರಾಮನ್, "ಮುಸ್ಲಿಮರನ್ನು ಬಾಧಿತರನ್ನಾಗಿ ಮಾಡಲು ಭಾರತದಾದ್ಯಂತ ಹಿಂಸಾಚಾರ ನಡೆಯುತ್ತಿದೆ ಎಂಬ ಹೇಳಿಕೆಗಳೇ ಭ್ರಾಮಕವಾಗಿವೆ. ಈ ಹೇಳಿಕೆಗಳು ಭಾರತ ಸರ್ಕಾರದ ಮೇಲೆ ಮಾಡುವ ಆರೋಪಗಳಾಗಿದ್ದು, 2014ರಿಂದ ಇಲ್ಲಿಯವರೆಗೆ ಅದರ ಜನಸಂಖ್ಯೆ ಕುಂಠಿತವಾಗಿದೆಯೇ, ಯಾವುದಾದರೂ ನಿರ್ದಿಷ್ಟ ಸಮುದಾಯದ ಜನಸಂಖ್ಯೆ ಅಸಮತೋಲನವಾಗಿದೆಯೆ ಎಂಬುದನ್ನು ತಿಳಿಯಲು ಬಯಸುತ್ತೇನೆ. ಹೀಗಾಗಿ ಇಂತಹ ವರದಿಗಳನ್ನು ಬರೆಯುವವರನ್ನು ಭಾರತಕ್ಕೆ ಬರುವಂತೆ ಆಹ್ವಾನಿಸುತ್ತೇನೆ. ನಾನೇ ಅವರಿಗೆ ಆತಿಥ್ಯ ಒದಗಿಸುತ್ತೇನೆ. ಅವರು ಭಾರತಕ್ಕೆ ಬಂದು ತಮ್ಮ ಪ್ರತಿಪಾದನೆಯನ್ನು ಸಾಬೀತು ಪಡಿಸಲಿ" ಎಂದು ಸವಾಲು ಹಾಕಿದ್ದಾರೆ.

ಅಲ್ಲದೆ, ಕಾನೂನಿನ ದುರ್ಬಳಕೆಯಿಂದ ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ಪರಿಸ್ಥಿತಿ ಹದಗೆಟ್ಟಿದ್ದು, ಅವರ ಜನಸಂಖ್ಯೆಯೂ ಕುಂಠಿತಗೊಳ್ಳುತ್ತಿದೆ ಎಂದೂ ನಿರ್ಮಲಾ ಸೀತಾರಾಮನ್ ನೇರವಾಗಿ ಆರೋಪಿಸಿದ್ದಾರೆ.

Similar News