ಇಂದ್ರಾಳಿ: ನವೀಕೃತ ಕಾಂಕ್ರೀಟ್ ರಸ್ತೆಯಲ್ಲಿ ಬಿರುಕು; ಕಳಪೆ ಕಾಮಗಾರಿ ಆರೋಪ
ಉಡುಪಿ: ಕೆಲವು ಸಮಯಗಳ ಹಿಂದೆ ದುರಸ್ಥಿ ಮಾಡಲಾದ ಇಂದ್ರಾಳಿ ರಾಷ್ಟ್ರೀಯ ಹೆದ್ದಾರಿಯಿಂದ ರೈಲು ನಿಲ್ದಾಣ ಸಂಪರ್ಕಿಸುವ ಜಾರ್ಜ್ ಫೆರ್ನಾಂಡಿಸ್ ರಸ್ತೆಯು ಕಳಪೆ ಮಟ್ಟದ ಕಾಮಗಾರಿಯಿಂದ ಕಾಂಕ್ರೀಟ್ ರಸ್ತೆ ಬಿರುಕು ಬಿಟ್ಟಿದ್ದು, ಸಾರ್ವಜನಿಕರ ಹಣ ಪೋಲಾಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹೊಂಡ ಗುಂಡಿ ಬಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾಗಿದ್ದ ಜಾರ್ಜ್ ಫೆರ್ನಾಂಡಿಸ್ ರಸ್ತೆಯನ್ನು ದುರಸ್ತಿ ಪಡಿಸುವಂತೆ ವಿನೂತನ ಪ್ರತಿಭಟನೆಯ ಮೂಲಕ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅಧಿಕಾರಿಗಳ ಗಮನ ಸೆಳೆದಿದ್ದರು. ಆ ಬಳಿಕ ರೈಲ್ವೆ ಆರೋಗ್ಯ ಕೇಂದ್ರದಿಂದ, ರೈಲು ನಿಲ್ದಾಣದ ವರೆಗೆ ಕಾಂಕ್ರೀಟಿಕರಣಗೊಳಿಸಲು ಮಂಜೂರಾತಿ ದೊರೆತಿತ್ತು.
ಇದೀಗ ಕಾಮಗಾರಿ ನಡೆದು ಕೆಲವು ದಿನಗಳು ಕಳೆದಿವೆ. ರಸ್ತೆ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಸಾವಿರಾರು ವಾಹನಗಳು ಇಲ್ಲಿ ಸಂಚರಿಸುತ್ತಿದ್ದು, ಇದೀಗ ವಾಹನಗಳಲ್ಲಿ ಸಂಚರಿಸಲು ಭಯ ಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಕೋಟ್ಯಾಂತರ ಹಣ ವೆಚ್ಚದಲ್ಲಿ ನಿರ್ಮಾಣವಾಗಿರುವ ರಸ್ತೆ ಕೆಲವೇ ದಿನಗಳಲ್ಲಿ ಹಾಳಾಗಿರುವುದಕ್ಕೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲಾಖೆಯವರು ಗುತ್ತಿಗೆದಾರರಿಂದಲೇ ಸಂಪೂರ್ಣ ರಸ್ತೆ ನಿರ್ಮಾಣದ ಹಣವನ್ನು ವಸೂಲಿ ಮಾಡಬೇಕು. ಜಿಲ್ಲಾಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿನೀಡಿ ಕಾಮಗಾರಿಯ ಪರಿಶೀಲನೆ ನಡೆಸಬೇಕು, ಸತ್ಯಾಸತ್ಯತೆ ಅರಿತು ಸೂಕ್ತ ಕ್ರಮ ಜರುಗಿಸಬೇಕೆಂದು ಸಮಾಜಸೇವಕ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.