ಈ ಜನ್ಮದಲ್ಲೇ ಪಾಪ-ಪುಣ್ಯಗಳ ಲೆಕ್ಕಾಚಾರ: ಅತೀಕ್‌ ಅಹ್ಮದ್‌ ಸಹೋದರರ ಹತ್ಯೆಗೆ ಉತ್ತರ ಪ್ರದೇಶ ಸಚಿವರ ಸಮರ್ಥನೆ?

Update: 2023-04-15 19:26 GMT

ಲಕ್ನೋ: ಉತ್ತರಪ್ರದೇಶದ ಮಾಜಿ ಸಂಸದ, ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಮತ್ತು‌ ಅವರ ಸಹೋದರ ಅಶ್ರಫ್ ಹತ್ಯೆ ಬಗ್ಗೆ ಆದಿತ್ಯನಾಥ್‌  ಸಚಿವ ಸಂಪುಟದ ಸ್ವತಂತ್ರ ದೇವ್ ಸಿಂಗ್ ಪರೋಕ್ಷವಾಗಿ ಸಮರ್ಥನೆ ನೀಡಿದ್ದಾರೆ ಎನ್ನಲಾಗಿದೆ. 

ಪೊಲೀಸ್‌ ಕಟ್ಟಡಿಯಲ್ಲಿರುವಾಗ, ಮಾಧ್ಯಮಗಳ ಮುಂದೆಯೇ ಅಹ್ಮದ್‌ ಸಹೋದರರ ಮೇಲೆ ಗುಂಡಿನ ದಾಳಿಯಾಗಿದ್ದು, ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.  ಹತ್ಯೆ ಸುದ್ದಿ ವರದಿಯಾಗುತ್ತಿದ್ದಂತೆ ಟ್ವೀಟ್‌ ಮಾಡಿದ ಸಚಿವ ಸ್ವತಂತ್ರ ದೇವ್‌ ಸಿಂಗ್ “ಈ ಜನ್ಮದಲ್ಲೇ ಪಾಪ-ಪುಣ್ಯಗಳ ಲೆಕ್ಕಾಚಾರವಿದೆ” ಎಂದು ಟ್ವೀಟ್‌ ಮಾಡಿದ್ದಾರೆ. 

ಅತೀಕ್‌ ಅಹ್ಮದ್‌ ಅಥವಾ ಅವರ ಸಹೋದರ ಹೆಸರನ್ನು ಹೇಳದೆ ಸಚಿವರು ಟ್ವೀಟ್‌ ಮಾಡಿದ್ದರಾದರೂ, ಈ ಟ್ವೀಟ್‌ ಅಹ್ಮದ್‌ ಸಹೋದರರ ಹತ್ಯೆಯ ಕುರಿತೇ ಮಾಡಲಾಗಿದೆ ಎಂದು ಹೇಳಲಾಗಿದೆ. 

ಸಚಿವ ಸ್ವತಂತ್ರ ದೇವ್‌ ಸಿಂಗ್‌ ರನ್ನು ಪ್ರಧಾನಿ ನರೇಂದ್ರ ಮೋದಿ ಟ್ವಿಟರಿನಲ್ಲಿ ಫಾಲೋ ಮಾಡುತ್ತಿರುವುದರಿಂದ ಸಚಿವರ ಪರೋಕ್ಷ ಸಮರ್ಥನೆ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ 1985 ರ ಬ್ಯಾಚ್‌ ಐಎಎಸ್‌ ಅಧಿಕಾರಿ ಸಂಜೀವ್‌ ಗುಪ್ತಾ, “ ಪೊಲೀಸ್ ರಕ್ಷಣೆ ಇದ್ದರೂ ಅತೀಕ್ ಮತ್ತು ಅಶ್ರಫ್‌ ಮೇಲಿನ ಹೇಯ ದಾಳಿಯ ಕುರಿತು ನೀವು ಮಾತನಾಡುತ್ತಿದ್ದರೆ, ಇದು ಅತ್ಯಂತ ನಾಚಿಕೆಗೇಡಿನ ಹೇಳಿಕೆ. ದಯವಿಟ್ಟು ಇಂತಹ ಗಂಭೀರ ವಿಚಾರದಲ್ಲಿ ಬಾಲಿಶವಾಗಿ ಮಾತನಾಡಬೇಡಿ. (ದಾಳಿಯನ್ನು) ಪೊಲೀಸರು ಉದ್ದೇಶಪೂರ್ವಕವಾಗಿ ನಿಲ್ಲಿಸಲಿಲ್ಲ ಎಂದು ಜನರು ಯೋಚಿಸಲು ಪ್ರಾರಂಭಿಸಬಾರದು. ಸಾಂವಿಧಾನಿಕ ಹುದ್ದೆಗಳಲ್ಲಿ ಕುಳಿತ ವ್ಯಕ್ತಿಗಳಿಂದ ಇಂತಹ (ಹೇಳಿಕೆ) ನಿರೀಕ್ಷೆ ಇರಲಿಲ್ಲ.” ಎಂದು ಟ್ವೀಟ್‌ ಮಾಡಿದ್ದಾರೆ.

Similar News