ಅಮೃತಸರ: ಮುಖದ ಮೇಲೆ ತ್ರಿವರ್ಣ ಮುದ್ರೆ, ಯುವತಿಗೆ ಸ್ವರ್ಣಮಂದಿರಕ್ಕೆ ಪ್ರವೇಶ ನಿರಾಕರಣೆ
ಅಮೃತಸರ,ಎ.17: ಮುಖದ ಮೇಲೆ ತ್ರಿವರ್ಣ ಮುದ್ರೆಯನ್ನು ಹೊಂದಿದ್ದ ಯುವತಿಯೋರ್ವಳಿಗೆ ಇಲ್ಲಿಯ ಸ್ವರ್ಣಮಂದಿರದಲ್ಲಿ ಪ್ರವೇಶವನ್ನು ನಿರಾಕರಿಸಿದ್ದು ವರದಿಯಾಗಿದೆ. ಘಟನೆಯ ವೀಡಿಯೊ ಸೋಮವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ತನಗೆ ಮಂದಿರವನ್ನು ಪ್ರವೇಶಿಸಲು ಅವಕಾಶ ನೀಡದ್ದಕ್ಕಾಗಿ ಯುವತಿ ಗುರುದ್ವಾರಾ ಸಿಬ್ಬಂದಿಯೊಂದಿಗೆ ವಾದಿಸುತ್ತಿದ್ದುದು ವೀಡಿಯೊದಲ್ಲಿ ಕಂಡು ಬಂದಿದೆ.
‘ಇದು ಪಂಜಾಬ್, ಭಾರತವಲ್ಲ’ ಎಂದು ಆತ ಹೇಳಿದ್ದೂ ವೀಡಿಯೊದಲ್ಲಿ ದಾಖಲಾಗಿದೆ. ವೀಡಿಯೊ ವೈರಲ್ ಆದ ಬಳಿಕ ಶಿರೋಮಣಿ ಗುರುದ್ವಾರಾ ಪ್ರಬಂಧಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಗುರುಚರಣ್ ಸಿಂಗ್ ಗ್ರೆವಾಲ್ ಅವರು, ಸಿಬ್ಬಂದಿಯ ಕಡೆಯಿಂದ ಯಾವುದೇ ಅನುಚಿತ ವರ್ತನೆಗಾಗಿ ಕ್ಷಮೆಯನ್ನು ಯಾಚಿಸಿದ್ದಾರೆ. ಯುವತಿಯ ಮುಖದ ಮೇಲಿದ್ದುದು ರಾಷ್ಟ್ರಧ್ವಜವಾಗಿರಲಿಲ್ಲ ಎಂದು ಅವರು ಹೇಳಿದರು.
‘ಇದು ಸಿಕ್ಖರ ಮಂದಿರವಾಗಿದೆ. ಪ್ರತಿಯೊಂದೂ ಧಾರ್ಮಿಕ ಸ್ಥಳಕ್ಕೆ ತನ್ನದೇ ಆದ ಶಿಷ್ಟಾಚಾರಗಳಿವೆ. ಅಧಿಕಾರಿ ತಪ್ಪಾಗಿ ನಡೆದುಕೊಂಡಿದ್ದರೆ ನಾವು ಕ್ಷಮೆ ಯಾಚಿಸುತ್ತೇವೆ. ಯುವತಿಯ ಮುಖದಲ್ಲಿದ್ದುದು ನಮ್ಮ ರಾಷ್ಟ್ರಧ್ವಜವಾಗಿರಲಿಲ್ಲ ಮತ್ತು ಅದು ಅಶೋಕ ಚಕ್ರವನ್ನು ಹೊಂದಿರಲಿಲ್ಲ. ಅದು ರಾಜಕೀಯ ಪಕ್ಷವೊಂದರ ಧ್ವಜವಾಗಿದ್ದಿರಬಹುದು ’ಎಂದು ಅವರು ಹೇಳಿದರು.