×
Ad

ಆರ್ಥಿಕ ಇಲಾಖೆಯ ಅನುಮತಿ ಪಡೆಯದೆ ಅನುಪಯುಕ್ತ ಪೀಠೋಪಕರಣಗಳ ವಿಲೇವಾರಿ

ಲೆಕ್ಕಪರಿಶೋಧಕರಿಂದ ಬೆಳಕಿಗೆ

Update: 2023-04-26 08:48 IST

ಬೆಂಗಳೂರು: ಕರ್ನಾಟಕ ವಿಧಾನಪರಿಷತ್ ಸಚಿವಾಲಯಕ್ಕೆ ಸೇರಿರುವ ಅನುಪಯುಕ್ತ ಪೀಠೋಪಕರಣಗಳು ಮತ್ತು ಉಪಕರಣಗಳನ್ನು ವಿಲೇವಾರಿ ಮಾಡುವ ಮುನ್ನ ಆರ್ಥಿಕ ಇಲಾಖೆಯ ಅನುಮತಿಯನ್ನೇ ಪಡೆದಿರಲಿಲ್ಲ ಎಂದು ಲೆಕ್ಕಪರಿಶೋಧಕರು ಬೆಳಕಿಗೆ ತಂದಿದ್ದಾರೆ.

ಕರ್ನಾಟಕ ವಿಧಾನಪರಿಷತ್ ಸಚಿವಾಲಯಕ್ಕೆ ಸಂಬಂಧಿಸಿದಂತೆ 2013-14ರಿಂದ 2014-15ರ ಅವಧಿಯಲ್ಲಿ ಲೆಕ್ಕಪರಿಶೋಧನೆ ಮಾಡಿರುವ ಲೆಕ್ಕಪರಿಶೋಧಕರು ಸರಕಾರದ ಆದೇಶ ಪಡೆಯದೇ ಪೀಠೋಪಕರಣಗಳು ಮತ್ತು ಇತರ ಉಪಕರಣಗಳನ್ನು ಚಾರಿಟೇಬಲ್ ಸಂಸ್ಥೆಗಳಿಗೆ ನೀಡಿರುವುದನ್ನೂ ಪತ್ತೆ ಹಚ್ಚಿದ್ದಾರೆ. ಇದರ ಪ್ರತಿಯು ‘the-file.in’ಗೆ ಲಭ್ಯವಾಗಿದೆ.

ಉಪಕರಣಗಳ ವಿಲೇವಾರಿಯಿಂದ ಬಂದ ಮೊತ್ತವನ್ನು ರಾಜ್ಯದ ಸಂಚಿತ ನಿಧಿಗೆ ಜಮೆ ಮಾಡಬೇಕಾದ್ದರಿಂದ ಈ ವಿಷಯದಲ್ಲಿ ಅಗತ್ಯವಿದ್ದ ಆರ್ಥಿಕ ಇಲಾಖೆಯ ಅನುಮತಿಯನ್ನು ಹೊಂದಿರುವುದಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.

ದುರಸ್ತಿಗೆ ಅರ್ಹವಿದ್ದ ಉಪಕರಣಗಳನ್ನು ವಿಲೇವಾರಿಗೂ ಪೂರ್ವದಲ್ಲಿ ಇಲಾಖಾ ಮುಖ್ಯಸ್ಥರು 34ಬಿ ನಮೂನೆಯಲ್ಲಿ ದಾಖಲಿಸಿರುವುದಿಲ್ಲ. ದಾಸ್ತಾನಿನ ಮೌಲ್ಯವನ್ನು ನಮೂದಿಸಿರುವುದಿಲ್ಲ ಎಂದು ಆಕ್ಷೇಪಿಸಿದೆ.

ಕರ್ನಾಟಕ ಆರ್ಥಿಕ ಸಂಹಿತೆಯ ನಿಯಮ 168(b)(ii)ರ ರೀತ್ಯಾ 34ಬಿ ನಮೂನೆಯನ್ನು ಲೆಕ್ಕಪರಿಶೋಧಕರಿಗೆ ಒದಗಿಸಿರುವುದಿಲ್ಲ. ರಾಜ್ಯದಲ್ಲಿ ಹಲವಾರು ಚಾರಿಟೇಬಲ್ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದ್ದರೂ, ಎರಡೂ ಬಾರಿ ಒಂದೇ ಸಂಸ್ಥೆಗೆ ಅನುಪಯುಕ್ತ ಸಾಮಗ್ರಿಗಳನ್ನು ನೀಡಿರುವ ಹಿನ್ನೆಲೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಿರುವುದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಅದೇ ರೀತಿ ಕರ್ನಾಟಕ ವಿಧಾನಪರಿಷತ್ ಸಚಿವಾಲಯು ವ್ಯಾಪ್ತಿಯಲ್ಲಿ ವ್ಯಾಪಾರ ಮಾಡಲು ಹೊಟೇಲ್ ನಿಸರ್ಗದವರಿಗೆ ಬಾಡಿಗೆಗೆ ನೀಡಲಾಗಿತ್ತು. ಆದರೆ ಇವರಿಂದ ವಿದ್ಯುಚ್ಛಕ್ತಿ ಬಿಲ್‌ನಲ್ಲಿನ ಮೊತ್ತಕ್ಕಿಂತಲೂ ಕಡಿಮೆ ವಸೂಲಾತಿ ಮಾಡಿತ್ತು. ಈ ಹೊಟೇಲ್‌ಗೆ ಬಾಡಿಗೆಗೆ ನೀಡಿದ್ದ ಜಾಗಕ್ಕೆ ಲೋಕೋಪಯೋಗಿ ಇಲಾಖೆಯು ನಿಗದಿಪಡಿಸಿರುವ ಬಾಡಿಗೆಯೊಂದಿಗೇ ವಿದ್ಯುಚ್ಛಕ್ತಿ ಮತ್ತು ನೀರಿನ ಬಿಲ್‌ನ್ನು ಪ್ರತೀ ತಿಂಗಳೂ ಪಾವತಿಸಬೇಕಿತ್ತು. ಆದರೆ ಸಚಿವಾಲಯವು ವಿದ್ಯುಚ್ಛಕ್ತಿ ಬಿಲ್‌ನ್ನು ಮೀಟರಿಗನುಣವಾಗಿ ವಸೂಲಾತಿ ಮಾಡದೆಯೇ ಪ್ರತಿ ಯೂನಿಟ್‌ಗೆ 2,500 ರೂ.ನಂತೆ ನಿಗದಿಪಡಿಸಿ ವಸೂಲಾತಿ ಮಾಡಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಕರ್ನಾಟಕ ವಿಧಾನಪರಿಷತ್ ಸಚಿವಾಲಯದ ಕೊಠಡಿಗಳ ನವೀಕರಣ ಕಾಮಗಾರಿಯನ್ನು ವಿಭಜಿಸಿ ನೀಡಿದ್ದರೂ ಕೆಟಿಪಿಪಿ ಕಾಯ್ದೆ ಪಾಲನೆ ಮಾಡಿಲ್ಲದಿರುವುದು, ಕೆ.ಆರ್.ಐ.ಡಿ.ಎಲ್ ನಿಂದ ಬಳಕೆ ಪ್ರಮಾಣ ಪತ್ರವನ್ನೂ ಪಡೆದಿರಲಿಲ್ಲ.  ಕಾರ್ಯಾದೇಶದಲ್ಲಿ ಉಲ್ಲೇಖಿಸಲಾದ ದಾಸ್ತಾನು/ಪೀಠೋಪಕರಣಗಳನ್ನು ಭೌತಿಕವಾಗಿ ದಾಸ್ತಾನಿಗೆ ತೆಗೆದುಕೊಂಡಿರುವುದಿಲ್ಲ ಎಂಬುದನ್ನು ಲೆಕ್ಕಪರಿಶೋಧಕರು ಪತ್ತೆ ಹಚ್ಚಿದ್ದನ್ನು ಸ್ಮರಿಸಬಹುದು.

Similar News