ಸುಳ್ಯ: ಹೊಳೆಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತ್ಯು

Update: 2023-05-08 16:45 GMT

ಸುಳ್ಯ: ಹೊಳೆಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟ ಘಟನೆ ಸುಬ್ರಹ್ಮಣ್ಯ ಠಾಣೆ ವ್ಯಾಪ್ತಿಯ ಬಳ್ಪ ಸಮೀಪದ ಕೇನ್ಯದ ಕಣ್ಕಲ್ ಕುಮಾರಧಾರ ನದಿಯ ಪೆಲತಗುಂಡಿ ಎಂಬಲ್ಲಿ ಸೋಮವಾರ ಸಂಜೆ  ಸಂಭವಿಸಿದೆ.

ಮೂಲತಃ ಬಳ್ಪದ ಕಣ್ಕಲ್ ನವರಾದ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಸತೀಶ್ ಅಮ್ಮಣ್ಣಾಯ ಅವರ ಪುತ್ರಿಯರಾದ ಹಂಸಿತಾ (15) ಹಾಗೂ ಆವಂತಿಕಾ (11) ನೀರಿನಲ್ಲಿ ಮುಳುಗಿ ಮೃತಪಟ್ಟವರು. ರಾತ್ರಿ ವೇಳೆ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹ ಪತ್ತೆ ಹಚ್ಚಿ ನದಿಯಿಂದ ಹೊರ ತೆಗೆಯಲಾಯಿತು.

ಘಟನೆ ವಿವರ

ಕೇನ್ಯ ಉದಯ ಅಮ್ಮಣ್ಣಾಯ ಅವರ ಸಹೋದರ ಸತೀಶ್ ಅಮ್ಮಣ್ಣಾಯ ಅವರು ಬೆಂಗಳೂರಿನಲ್ಲಿ ವಾಸ್ತವ್ಯವಿದ್ದು, ಅವರ ಇಬ್ಬರು ಹೆಣ್ಣು ಮಕ್ಕಳು ಶಾಲೆಗೆ ರಜೆಯ ಹಿನ್ನೆಲೆಯಲ್ಲಿ ತಾಯಿಯೊಂದಿಗೆ ಬಳ್ಪದ ಕಣ್ಕಲ್ ಗೆ ಬಂದಿದ್ದರು. ಸೋಮವಾರ ಸಂಜೆಯ ವೇಳೆಗೆ ಇಬ್ಬರು ಬಾಲಕಿಯರು ಮನೆ ಮಂದಿಯ ಜೊತೆಗೆ ಮನೆ ಸಮೀಪವೇ ಇರುವ ಕುಮಾರಧಾರ ನದಿ ಬಳಿಗೆ ತೆರಳಿದ್ದರು ಎನ್ನಲಾಗಿದೆ. ಮನೆಮಂದಿ ನದಿ ಸಮೀಪವೇ ಇದ್ದಿದ್ದು, ಇಬ್ಬರು ಸಹೋದರಿಯರು ನದಿಗೆ ಇಳಿದವರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು.

ಮಕ್ಕಳು ನಾಪತ್ತೆಯಾಗಿರುವುದು ತಿಳಿಯುತ್ತಲೇ ಮನೆಮಂದಿ ಹುಡುಕಾಟ ಆರಂಭಿಸಿದ್ದಾರೆ. ಸುಳ್ಯದಿಂದ ಅಗ್ನಿಶಾಮಕ ದಳವನ್ನು ಕರೆಸಿಕೊಳ್ಳಲಾಗಿತ್ತು. ಸ್ಥಳೀಯ ಈಜುಗಾರರೂ ನದಿ ನೀರಲ್ಲಿ ಮುಳುಗಿ ಹುಡುಕಾಟ ನಡೆಸಿದ್ದರು. ನದಿಯಲ್ಲಿ ತೀವ್ರ ಹುಡುಕಾಟದ ಬಳಿಕ ರಾತ್ರಿ ವೇಳೆಗೆ ಇಬ್ಬರ ಮೃತದೇಹ ಪತ್ತೆಯಾಗಿದೆ. ನದಿಯ ಆಳ ತಿಳಿಯದೆ ಕಾಲು ಜಾರಿ ನೀರಲ್ಲಿ ಮುಳುಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಸುಬ್ರಹ್ಮಣ್ಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಂಗಳವಾರ ಕಣ್ಕಲ್ ನಲ್ಲಿ ಕಾರ್ಯಕ್ರಮವೊಂದಿತ್ತು ಎನ್ನಲಾಗಿದ್ದು, ಇದಕ್ಕೆ ಬೆಂಗಳೂರಿನಿಂದ ಬಂದಿದ್ದರು. ಸಂಜೆ ವೇಳೆ ನದಿ ಬಳಿಗೆ ಹೋದ ವೇಳೆ ದುರ್ಘಟನೆ ಸಂಭವಿಸಿದೆ. ತನ್ನಿಬ್ಬರು ಮಕ್ಕಳನ್ನು ಕಳೆದುಕೊಂಡ ಹೆತ್ತವರ ಹಾಗೂ ಮನೆಯವರ ಆಕ್ರಂದನ ಮುಗಿಮುಟ್ಟಿದೆ.

Similar News