×
Ad

ಬಿಜೆಪಿಗೆ ಒಂದು ದುರ್ದಿನ, ಎರಡು ಪಾಠಗಳು

Update: 2023-05-18 11:34 IST

ಬಿಜೆಪಿಗೆ ಪಾಠಗಳು ಸ್ಪಷ್ಟವಾಗಿವೆ: ಪಕ್ಷದ ಕಾರ್ಯಸೂಚಿಯನ್ನು ಮುಂದುವರಿಸಲು ರಾಜ್ಯಪಾಲರನ್ನು ಎಷ್ಟು ಬಳಸಿಕೊಳ್ಳಬಹುದು ಎಂಬುದಕ್ಕೆ ಮಿತಿಯಿದೆ. ಎರಡನೆಯದಾಗಿ, ಅದು ಸಶಕ್ತ ದಿಲ್ಲಿ ಸರಕಾರವನ್ನು ಬಯಸದಿದ್ದರೆ, ಅದು ಸಂಸತ್ತಿನಲ್ಲಿ ಕಾನೂನನ್ನು ತಿದ್ದುಪಡಿ ಮಾಡಬೇಕು ಮತ್ತು ಈಗ ದಿಲ್ಲಿ ಶಾಸಕಾಂಗದ ವ್ಯಾಪ್ತಿಯಲ್ಲಿರುವ ವಿಷಯಗಳನ್ನು ನಿರ್ಧರಿಸಲು ಲೆಫ್ಟಿನೆಂಟ್ ಗವರ್ನರ್ ಅವರನ್ನು ಬಳಸಬಾರದು ಎಂಬ ಪಾಠವನ್ನೂ ಕಲಿತಂತಾಗಿದೆ. 

ದಿಲ್ಲಿಯ ಆಮ್ ಆದ್ಮಿ ಪಕ್ಷ ಮತ್ತು ಶಿವಸೇನೆಯ ಉದ್ಧವ್ ಠಾಕ್ರೆ ಬಣವು ಗುರುವಾರ ಸುಪ್ರೀಂ ಕೋರ್ಟ್ ನೀಡಿದ ಎರಡು ಸಾಂವಿಧಾನಿಕ ಪೀಠದ ತೀರ್ಪುಗಳಲ್ಲಿ ನೈತಿಕ ವಿಜಯ ಗಳಿಸಿದೆ. ಆದಾಗ್ಯೂ, ಈ ತೀರ್ಪುಗಳು ಸಂಬಂಧಪಟ್ಟ ಎರಡು ರಾಜ್ಯಗಳಾದ ದಿಲ್ಲಿ ಮತ್ತು ಮಹಾರಾಷ್ಟ್ರದ ವಾಸ್ತವ ಪರಿಸ್ಥಿತಿಯನ್ನು ತಕ್ಷಣವೇ ಬದಲಾಯಿಸುತ್ತವೆ ಎಂದು ಹೇಳಲಾಗುವುದಿಲ್ಲ. ಶಾಸಕಾಂಗದಲ್ಲಿ ವಿಶ್ವಾಸಮತ ಯಾಚನೆಗೆ ಯಾವಾಗ ಆದೇಶಿಸಬೇಕು ಎಂದು ರಾಜ್ಯ ರಾಜ್ಯಪಾಲರು ನಿರ್ಧರಿಸಲು ಸಾಧ್ಯವಿಲ್ಲ ಮತ್ತು ಚುನಾಯಿತ ವಿಧಾನಸಭೆ ಇರುವಾಗ ಲೆಫ್ಟಿನೆಂಟ್ ಗವರ್ನರ್ ತಮ್ಮ ಕೇಂದ್ರಾಡಳಿತ ಪ್ರದೇಶದ ಆಡಳಿತ ಸೇವೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂಬುದು ಅತ್ಯುನ್ನತ ನ್ಯಾಯಾಲಯದ ದೊಡ್ಡ ಸಂದೇಶವಾಗಿದೆ.

ದಿಲ್ಲಿಯಲ್ಲಿ ಆಡಳಿತಾತ್ಮಕ ಸೇವೆಗಳನ್ನು ನಿಯಂತ್ರಿಸುವ ಕೇಂದ್ರದ ಹಕ್ಕನ್ನು ಎಎಪಿ ಪ್ರಶ್ನಿಸಿದ್ದ ಮೊದಲ ಪ್ರಕರಣದಲ್ಲಿ, ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐದು ನ್ಯಾಯಾಧೀಶರ ಪೀಠವು ಅಧಿಕಾರ ಮತ್ತು ಜವಾಬ್ದಾರಿ ಒಟ್ಟೊಟ್ಟಿಗೆ ಹೋಗುವ ಸರಳ ಒಕ್ಕೂಟ ತತ್ವವನ್ನು ಒತ್ತಿ ಹೇಳಿತು. ಚುನಾಯಿತ ಸರಕಾರವು ತನ್ನದೇ ಆದ ಆಡಳಿತಾಧಿಕಾರಿಗಳನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ, ಅದು ಸಂವಿಧಾನದ ಅಡಿಯಲ್ಲಿ ತನ್ನದೇ ಆದ ಅಧಿಕಾರಗಳ ನಿರಾಕರಣೆಯಾಗುತ್ತದೆ. 

ಇದರರ್ಥ ಅಧಿಕಾರಶಾಹಿಯ ನಿಯಂತ್ರಣವು ಈಗ ಅರವಿಂದ ಕೇಜ್ರಿವಾಲ್ ಸರಕಾರಕ್ಕೆ ಮರಳಿದೆ ಮತ್ತು ಲೆಫ್ಟಿನೆಂಟ್ ಗವರ್ನರ್ ಅವರ ನೇಮಕಾತಿಗಳು ಅಥವಾ ವರ್ಗಾವಣೆಗಳ ಬಗ್ಗೆ ಸ್ವತಂತ್ರ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದಾಗ್ಯೂ, ಈ ಆಡಳಿತಾತ್ಮಕ ನಿಯಂತ್ರಣವು ದಿಲ್ಲಿ ಸರಕಾರವು ಕಾನೂನಾಗಿ ಜಾರಿಮಾಡಲಾಗದ ಮೂರು ವಿಷಯಗಳಿಗೆ ವಿಸ್ತರಿಸುವುದಿಲ್ಲ, ಅವುಗಳೆಂದರೆ ಸಾರ್ವಜನಿಕ ಸುವ್ಯವಸ್ಥೆ, ಭೂಮಿಯ ಪ್ರಶ್ನೆ ಮತ್ತು ಪೊಲೀಸ್ ಇಲಾಖೆ. ಹಾಗಾಗಿ ನ್ಯಾಯಾಲಯವು ದಿಲ್ಲಿಯಲ್ಲಿ ಎರಡು ಪ್ರತ್ಯೇಕ ಸರಕಾರಗಳು ಕಾರ್ಯನಿರ್ವಹಣೆ ಮಾಡುತ್ತವೆ  ಆದರೆ  ಚುನಾಯಿತ ಶಾಸಕಾಂಗಕ್ಕೆ ನಿಗದಿಪಡಿಸಿದ ವಿಷಯಗಳಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಪರಮಾಧಿಕಾರವಿಲ್ಲ ಎಂದು ಹೇಳಿದಂತಾಗಿದೆ. 

ಬಿಜೆಪಿ ಇದನ್ನು ರದ್ದುಗೊಳಿಸಲು ಬಯಸಿದರೆ, ದಿಲ್ಲಿ ಜಾರಿಗೆ ತಂದ ಯಾವುದೇ ಕಾನೂನನ್ನು ರದ್ದುಗೊಳಿಸಲು ಸಂಸತ್ತಿನಲ್ಲಿ ನಿರ್ದಿಷ್ಟವಾಗಿ ಹೊಸ ಕಾನೂನನ್ನು ರೂಪಿಸಬೇಕಾಗುತ್ತದೆ. ರಾಷ್ಟ್ರೀಯ ರಾಜಧಾನಿ ಪ್ರದೇಶಕ್ಕೆ (National Capital Territory) ಶಾಸಕಾಂಗ ಸಭೆಯನ್ನು ರಚಿಸಲು ಅನುವು ಮಾಡಿಕೊಟ್ಟ ಸಂವಿಧಾನದ ಅನುಚ್ಛೇದ 239 ಎಎ, ಉಪ-ಕಲಂ (3) (ಬಿ)ನ ಅನುಸಾರ: ‘‘ಕೇಂದ್ರಾಡಳಿತ ಪ್ರದೇಶ ಅಥವಾ ಅದರ ಯಾವುದೇ ಭಾಗಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನುಗಳನ್ನು ರಚಿಸುವ ನಿಟ್ಟಿನಲ್ಲಿ ಉಪ-ಕಲಮು (ಎ) ನಲ್ಲಿರುವ ಯಾವುದೂ ಸಂಸತ್ತಿನ ಅಧಿಕಾರ ವನ್ನು ಕಸಿದುಕೊಳ್ಳುವುದಿಲ್ಲ.’’ ಎಂದು ಹೇಳಲಾಗಿದೆ.

ಪ್ರತ್ಯೇಕ ರಾಷ್ಟ್ರೀಯ ರಾಜಧಾನಿಯನ್ನು ರಚಿಸಲು ಎರಡು ರಾಜ್ಯಗಳಿಂದ (ಮೇರಿಲ್ಯಾಂಡ್ ಮತ್ತು ವರ್ಜೀನಿಯಾ) ಬೇರ್ಪಡಿಸಿದ ಅಮೆರಿಕ ವಾಶಿಂಗ್ಟನ್ ಡಿಸಿಯಲ್ಲಿ ಸಹ ನಿಯಮಿತ ರಾಜ್ಯಗಳ ಅಧಿಕಾರವನ್ನು ಹೊಂದಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ. ವಾಶಿಂಗ್ಟನ್ ಡಿಸಿ ನಿವಾಸಿಗಳು ಒಕ್ಕೂಟದ ಇತರ ರಾಜ್ಯಗಳಂತೆ ಮತದಾನದ ಹಕ್ಕನ್ನು ಹೊಂದಿಲ್ಲ. ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಬಹುದಾದರೂ, ಕಾಂಗ್ರೆಸ್‌ಗೆ ತಮ್ಮದೇ ಆದ ನಾಮನಿರ್ದೇಶಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿಲ್ಲ.

ದಿಲ್ಲಿಯಲ್ಲಿ, ನಾಗರಿಕರು ಪುರಸಭೆ, ರಾಜ್ಯ ವಿಧಾನಸಭೆ ಮತ್ತು ಸಂಸತ್ತಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಬಹುದು, ಅಂದರೆ ಯಾವುದೇ ಪೌರತ್ವ ಹಕ್ಕುಗಳನ್ನು ನಿರ್ಬಂಧಿಸಲಾಗುವುದಿಲ್ಲ. ಚುನಾಯಿತ ದಿಲ್ಲಿ ಸರಕಾರ ಅಥವಾ ಕೇಂದ್ರ ಸರಕಾರವು ಎರಡರ ಪೈಕಿ ಯಾವುದು ಆದ್ಯತೆಯನ್ನು ಹೊಂದಿದೆ ಎಂಬ ಪ್ರಶ್ನೆ ಅಸ್ಪಷ್ಟವಾಗಿಯೇ ಉಳಿದಿದೆ. ಮತ್ತೊಂದೆಡೆ ರಾಷ್ಟ್ರೀಯ ರಾಜಧಾನಿಯು ಎಲ್ಲಾ ವಿಷಯಗಳಲ್ಲಿ ಕೇಂದ್ರಕ್ಕೆ ಅಧೀನವಾಗಿರಬೇಕೇ ಅಥವಾ ತನ್ನ ಸರಕಾರವನ್ನು ಆಯ್ಕೆ ಮಾಡುವ ಜನರ ಆಕಾಂಕ್ಷೆಗಳನ್ನು ಪೂರೈಸಲು ಸ್ವಲ್ಪಅವಕಾಶವನ್ನು ಹೊಂದಿರಬೇಕೇ ಎಂಬ ಪ್ರಶ್ನೆ ಉಳಿದೇ ತೀರುತ್ತದೆ. ದಿಲ್ಲಿಯನ್ನು ನಿಯಮಿತ ಕೇಂದ್ರಾಡಳಿತ ಪ್ರದೇಶವಾಗಿ ಮಾಡಲು ಬಿಜೆಪಿ ಬಯಸಿದರೆ, ಅದು ಸಂಸತ್ತಿನಲ್ಲಿ ಕಾನೂನನ್ನು ತಿದ್ದುಪಡಿ ಮಾಡಬೇಕಾಗುತ್ತದೆ. ಚುನಾಯಿತ ಸರಕಾರವನ್ನು ದುರ್ಬಲಗೊಳಿಸಲು ಅದು ಲೆಫ್ಟಿನೆಂಟ್ ಗವರ್ನರ್ ಅವರನ್ನು ಬಳಸಲು ಸಾಧ್ಯವಿಲ್ಲ. ನ್ಯಾಯಾಲಯದ ತೀರ್ಪು ಅದರ ಬಗ್ಗೆ ಸ್ಪಷ್ಟವಾಗಿದೆ.

ಮಹಾರಾಷ್ಟ್ರ ತೀರ್ಪು ಹೆಚ್ಚು ಸಂಕೀರ್ಣವಾಗಿದೆ, ಏಕೆಂದರೆ ಸಾಂವಿಧಾನಿಕ ಪೀಠವು ಒಂದು ವಿಷಯವನ್ನು ದೊಡ್ಡ ಪೀಠಕ್ಕೆ ವರ್ಗಾಯಿಸುವಾಗ ಹಲವಾರು ರೀತಿಯಲ್ಲಿ ಅವಲೋಕನ  ಮಾಡಿದೆ. ಮೊದಲನೆಯದಾಗಿ, ಶಿವಸೇನೆಯೊಳಗಿನ ಭಿನ್ನಾಭಿಪ್ರಾಯದ ಆಧಾರದ ಮೇಲೆ ಜೂನ್ 2022ರಲ್ಲಿ ವಿಶ್ವಾಸ ಮತವನ್ನು ಕೋರಲು ಉದ್ಧವ್ ಸರಕಾರವನ್ನು ಕೇಳುವ ರಾಜ್ಯಪಾಲರ ನಿರ್ಧಾರವು ತಪ್ಪುಮತ್ತು ವಸ್ತುನಿಷ್ಠ ಮಾನದಂಡಗಳನ್ನು ಆಧರಿಸಿಲ್ಲ ಎಂದು ಅದು ಹೇಳಿದೆ. 

ಆ ಸಮಯದಲ್ಲಿ, ಯಾವುದೇ ಶಿವಸೇನೆ ಶಾಸಕರು ಅವರು ಪಕ್ಷವನ್ನು ತೊರೆಯುತ್ತಿದ್ದಾರೆ ಅಥವಾ ಅದರ ವಿಪ್ ಅನ್ನು ಉಲ್ಲಂಘಿಸಲು ಯೋಜಿಸುತ್ತಿದ್ದಾರೆ ಎಂದು ಔಪಚಾರಿಕವಾಗಿ ಸೂಚಿಸಿರಲಿಲ್ಲ. ಎರಡನೆಯದಾಗಿ, ಏಕನಾಥ್ ಶಿಂದೆ ಬಣವು ಶಾಸಕಾಂಗ ಪಕ್ಷದ ಮತದ ಮೂಲಕ ತನ್ನದೇ ಆದ ವಿಪ್ ಅನ್ನು ನೇಮಿಸಬಹುದು ಎಂಬ ಕಲ್ಪನೆಯನ್ನು ನ್ಯಾಯಾಲಯ ತಿರಸ್ಕರಿಸಿತು ಏಕೆಂದರೆ ಆ ಹಕ್ಕು ರಾಜಕೀಯ ಪಕ್ಷಕ್ಕೆ ಸೇರಿದ್ದೇ ಹೊರತು ಪಕ್ಷದ ಶಾಸಕರಿಗೆ ಅಲ್ಲ.

ಆದಾಗ್ಯೂ, ಉದ್ಧವ್ ಸರಕಾರವು ವಿಶ್ವಾಸ ಮತಕ್ಕೆ ಮುಂಚಿತವಾಗಿ ರಾಜೀನಾಮೆ ನೀಡುವ ಮೂಲಕ ತನ್ನ ಕಾರ್ಯತಂತ್ರದಲ್ಲಿ ತಪ್ಪು ಮಾಡಿರುವುದರಿಂದ ನ್ಯಾಯಪೀಠವು ಸರಕಾರವನ್ನು ಪುನಃ ಸ್ಥಾಪಿಸುವುದನ್ನು ಅನುಮೋದಿಸಲಿಲ್ಲ. ಒಂದು ವೇಳೆ ಹಾಗಾಗದೆ ಇದ್ದಿದ್ದರೆ, ಸರಕಾರವನ್ನು ಪುನಃಸ್ಥಾಪಿಸಬಹುದಿತ್ತು ಎಂದು ನ್ಯಾಯಾಲಯ ಸೂಚಿಸಿತು. ಕುತೂಹಲಕಾರಿ ಸಂಗತಿಯೆಂದರೆ, ಶಿಂಧೆ ಬಣವನ್ನು ನಿಜವಾದ ಶಿವಸೇನೆ ಎಂದು ಗುರುತಿಸುವ ಚುನಾವಣಾ ಆಯೋಗದ ನಿರ್ಧಾರದ ಬಗ್ಗೆ ಅದು ಯಾವುದೇ ಘೋಷಣೆ ಮಾಡಿಲ್ಲ. ಆ ಪ್ರಕರಣವು ಪ್ರತ್ಯೇಕವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಬಹುದು. 

ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಮತ್ತು ಮಹಾರಾಷ್ಟ್ರ ರಾಜ್ಯಪಾಲರ ಪಾತ್ರಗಳ ಬಗ್ಗೆ ನ್ಯಾಯಾಲಯದ ನಕಾರಾತ್ಮಕ ಉಲ್ಲೇಖಗಳು ಬಿಜೆಪಿಯಲ್ಲಿ ಮುಜುಗರ ಉಂಟುಮಾಡುವುದು ಖಚಿತ. ಆದರೆ ರಾಜಕಾರಣಿಗಳು ಈ ರೀತಿಯ ಕಾನೂನು ಮುಜುಗರಗಳಿಂದ ವಿಚಲಿತರಾಗುವುದಿಲ್ಲ. ಇದು ಶಿಂದೆ ಸರಕಾರದ ಅಂತಿಮ ಹಣೆಬರಹವನ್ನು ಹೇಗೆ ನಿರ್ಧರಿಸುತ್ತದೆ ಎನ್ನುವುದು ಅಸ್ಪಷ್ಟವಾಗಿದೆ. ಶಿಂದೆ ಬಣಕ್ಕೆ ಸೇರಿದ ಶಾಸಕರನ್ನು ಅನರ್ಹಗೊಳಿಸುವ ನಿರ್ಧಾರವನ್ನು ಸ್ಪೀಕರ್‌ಗೆ ಬಿಡುವುದಾಗಿ ಸುಪ್ರೀಂ ಕೋರ್ಟ್ ಸರಿಯಾಗಿಯೇ ನಿರ್ಧರಿಸಿದೆ.  

ಸ್ಪೀಕರ್ ರಾಹುಲ್ ನರ್ವೇಕರ್ ಬಿಜೆಪಿಗೆ ಸೇರಿದವರಾಗಿರುವುದರಿಂದ, ವಿಧಾನಸಭೆಯಲ್ಲಿ ಶಿಂದೆ-ಬಿಜೆಪಿ ಸರಕಾರವನ್ನು ಅಸ್ಥಿರಗೊಳಿಸುವ ಯಾವುದೇ ತೀರ್ಪನ್ನು ಅವರು ನೀಡುವುದಿಲ್ಲ ಎಂದು ಭಾವಿಸಬಹುದು. ನೈತಿಕ ನ್ಯಾಯಸಮ್ಮತಿಯ ಪ್ರಶ್ನೆ ಎದುರಾದಾಗ ಮತದಾರರು ಶಿಂದೆ ಬಂಡಾಯವನ್ನು ನ್ಯಾಯಸಮ್ಮತವೆಂದು ನೋಡುತ್ತಾರೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. 

ಅವಿಶ್ವಾಸ ಮತವನ್ನು ಎದುರಿಸುತ್ತಿರುವ ಸ್ಪೀಕರ್ ಅನರ್ಹತೆ ಅರ್ಜಿಗಳ ಬಗ್ಗೆ ನಿರ್ಧರಿಸಬಹುದೇ ಎಂಬ ಮತ್ತೊಂದು ಪ್ರಶ್ನೆಯನ್ನು ಈಗ ದೊಡ್ಡ ಪೀಠಕ್ಕೆ ರವಾನಿಸಲಾಗುತ್ತಿದೆ. ಅರುಣಾಚಲ ಪ್ರದೇಶದ ಸ್ಪೀಕರ್ ಕೆಲವು ಶಾಸಕರನ್ನು ಅನರ್ಹಗೊಳಿಸಿದ ನಬಮ್ ರೆಬಿಯಾ ಪ್ರಕರಣದಲ್ಲಿ 2016ರ ಸುಪ್ರೀಂ ಕೋರ್ಟ್ ತೀರ್ಪನ್ನು ಈ ಪೀಠವು ಮರುಪರಿಶೀಲಿಸಬೇಕಾಗುತ್ತದೆ. ಸ್ಪೀಕರ್ ವಿರುದ್ಧ ಗೊತ್ತುವಳಿ ಬಾಕಿಯಿದ್ದರೆ ಅನರ್ಹತೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಬಿಜೆಪಿಗೆ ಪಾಠಗಳು ಸ್ಪಷ್ಟವಾಗಿವೆ: ಪಕ್ಷದ ಕಾರ್ಯಸೂಚಿಯನ್ನು ಮುಂದುವರಿಸಲು ರಾಜ್ಯಪಾಲರನ್ನು ಎಷ್ಟು ಬಳಸಿಕೊಳ್ಳಬಹುದು ಎಂಬುದಕ್ಕೆ ಮಿತಿಯಿದೆ. ಎರಡನೆಯದಾಗಿ, ಅದು ಸಶಕ್ತ ದಿಲ್ಲಿ ಸರಕಾರವನ್ನು ಬಯಸದಿದ್ದರೆ, ಅದು ಸಂಸತ್ತಿನಲ್ಲಿ ಕಾನೂನನ್ನು ತಿದ್ದುಪಡಿ ಮಾಡಬೇಕು ಮತ್ತು ಈಗ ದಿಲ್ಲಿ ಶಾಸಕಾಂಗದ ವ್ಯಾಪ್ತಿಯಲ್ಲಿರುವ ವಿಷಯಗಳನ್ನು ನಿರ್ಧರಿಸಲು ಲೆಫ್ಟಿನೆಂಟ್ ಗವರ್ನರ್ ಅವರನ್ನು ಬಳಸಬಾರದು ಎಂಬ ಪಾಠವನ್ನೂ ಕಲಿತಂತಾಗಿದೆ. 
(ಮೂಲ ಲೇಖಕರು ಸ್ವರಾಜ್ಯ ಪತ್ರಿಕೆಯ ಸಂಪಾದಕೀಯ ನಿರ್ದೇಶಕರು)
ಅನುವಾದ: ನಾ. ದಿವಾಕರ

ಕೃಪೆ: timesofindia

Similar News