×
Ad

​ಸಾರ್ವಜನಿಕ ಬಳಕೆಯ ನೀರು ಕಲುಷಿತ: ಮಂಗಳೂರು ಮನಪಾ ಮೌನಕ್ಕೆ ಡಿವೈಎಫ್‌ಐ ಕಳವಳ

Update: 2023-05-19 23:24 IST

ಮಂಗಳೂರು: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಂಗಳೂರು ನಗರಪಾಲಿಕೆಯು ಪ್ರತಿ ವರ್ಷ ನೀರಿನ ಅಭಾವ ನೀಗಿಸಲು ನಾನಾ ಯೋಜನೆಗಳನ್ನು ರೂಪಿಸಿ ಕೋಟ್ಯಂತರ ರೂ. ಖರ್ಚು ಮಾಡಿದರೂ ಪಾಲಿಕೆಯು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ವಿಫಲವಾಗಿದೆ ಎಂದು ಡಿವೈಎಫ್‌ಐ ಆರೋಪಿಸಿದೆ.

ಕಳೆದ 6 ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಗರಿಷ್ಠ ಮಟ್ಟದಲ್ಲಿ ನೀರಿನ ಅಭಾವವಾಗಿದೆ. ಸಾರ್ವಜನಿಕರ ದಿನ ಬಳಕೆಗಾಗಿ ಪೂರೈಕೆ ಆಗುತ್ತಿರುವ ನೀರಿನ ಪ್ರಮಾಣ ನಗರದ ಜನರ ಶೇ.50 ಪ್ರಮಾಣದಲ್ಲಿ ನೀರಿನ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಗರದ ವಸತಿ ಸಮುಚ್ಚಯಗಳು, ಹೋಟೆಲ್, ಮಾಲ್, ಶಾಲಾ ಕಾಲೇಜು ವಿದ್ಯಾರ್ಥಿನಿಲಯ, ವಸತಿ ಗೃಹಗಳು, ಕಲ್ಯಾಣ ಮಂಟಪಗಳು, ವಾಣಿಜ್ಯ ಸಂಕೀರ್ಣಗಳಲ್ಲಿ ಕಳೆದೊಂದು ತಿಂಗಳಿನಿಂದ ಟ್ಯಾಂಕರ್ ನೀರನ್ನು ಬಳಸುತ್ತಿವೆ. ಇದರಿಂದಾಗಿ ಅನೇಕರಿಗೆ ವಾಂತಿ, ಭೇದಿ, ಚರ್ಮದ ಕಾಯಿಲೆಯಾಗಿದೆ ಎಂದು ತಿಳಿಸಿದೆ.

ವಸತಿ ಸಮುಚ್ಚಯ, ವಿದ್ಯಾರ್ಥಿ ನಿಲಯಗಳಲ್ಲಿ ಈ ರೀತಿಯ ಕಾಯಿಲೆಗಳು ಹೆಚ್ಚಾಗಿ ಕಾಸಿಕೊಂಡಿದ್ದು, ಕುದಿಸಿ, ಶುದ್ಧಿಕರಿಸಿದ ನೀರನ್ನು ಕುಡಿಯುತ್ತಿರುವ ಜನರಿಗೂ ವಾಂತಿ ಭೇದಿ ಸಮಸ್ಯೆ ಕಾಣುತ್ತಿರುವುದು ಆಶ್ಚರ್ಯವಾಗಿದೆ. ಸ್ನಾನ, ಪಾತ್ರೆ, ಕೈ ತೊಳೆಯುವ, ಆಹಾರಕ್ಕೆ ಬಳಸುವ ನೀರು ಕಲುಷಿತಗೊಂಡಿರುವುದೇ ಸಮಸ್ಯೆಗೆ ಕಾರಣವಾಗಿದೆ. ಆದರೆ ಮಹಾನಗರ ಪಾಲಿಕೆ ಇದನ್ನು ಗಂಭೀರವಾಗಿ ಪರಿಗಸದೆ ನಿರ್ಲಕ್ಷ ಧೋರಣೆ ತಾಳುತ್ತಿರುವುದು ಖಂಡನೀಯ ಎಂದು ಡಿವೈಎಫ್‌ಐ ಹೇಳಿಕೆಯಲ್ಲಿ ತಿಳಿಸಿದೆ.

ನಗರಪಾಲಿಕೆ ಕೂಡಲೇ ಸಾರ್ವಜನಿಕರಿಗೆ ವಿವಿಧ ರೀತಿಯಲ್ಲಿ ಪೂರೈಕೆ ಆಗುತ್ತಿರುವ ನೀರಿನ ಗುಣಮಟ್ಟವನ್ನು ಪರೀಕ್ಷೆ ಮಾಡಬೇಕು, ನೀರು ಶೇಖರಿಸಿಡುವ ಟ್ಯಾಂಕುಗಳನ್ನು ಪರಿಶೀಲಿಸಲು ತಂಡಗಳನ್ನು ರಚಿಸಬೇಕು, ಟ್ಯಾಂಕುಗಳನ್ನು ಸ್ವಚ್ಛವಾಗಿಡದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ನೀರು ಪೂರೈಕೆ ವ್ಯವಸ್ಥೆಯನ್ನು ಬಲಪಡಿಸವೇಕು ಎಂದು ಡಿವೈಎಫ್‌ಐ ಆಗ್ರಹಿಸಿದೆ.

ನಗರ ಆಡಳಿತ ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ಮುಂದುವರಿಸಿ ಜನಸಾಮಾನ್ಯರ ಆರೋಗ್ಯದಲ್ಲಿ ಚೆಲ್ಲಾಟವಾಡಿದರೆ ಪಾಲಿಕೆಯ ವಿರುದ್ಧ ಪ್ರತಿಭಟಿಸಲಾಗುವುದು ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮತ್ತು ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಎಚ್ಚರಿಸಿದ್ದಾರೆ.

Similar News