ತಿರುವನಂತಪುರ: ಕಿನ್ಫ್ರಾ ಪಾರ್ಕ್ನ ಗೋದಾಮಿನಲ್ಲಿ ಅಗ್ನಿ ಆಕಸ್ಮಿಕ; ಓರ್ವ ಸಾವು
Update: 2023-05-23 15:16 GMT
ತಿರುವನಂತಪುರ, ಮೇ 23: ಮೇನಂಕುಳಂನ ಕಿನ್ಫ್ರಾ ಪಾರ್ಕ್ನಲ್ಲಿರುವ ಕೇರಳ ಮೆಡಿಕಲ್ ಸರ್ವೀಸಸ್ ಕಾರ್ಪೊರೇಶನ್ನ ಗೋದಾಮಿನಲ್ಲಿ ಮಂಗಳವಾರ ಮುಂಜಾನೆ ಬೆಂಕಿ ಆಕಸ್ಮಿಕ ಸಂಭವಿಸಿದೆ.
ಈ ದುರ್ಘಟನೆ ಸಂಭವಿಸುವಾಗ ಭದ್ರತಾ ಸಿಬ್ಬಂದಿ ಮಾತ್ರ ಇದ್ದರು. ಬೆಂಕಿ ವ್ಯಾಪಿಸಿಕೊಳ್ಳುತ್ತಿದ್ದಂತೆ ಜೋರಾಗಿ ಸ್ಫೋಟದ ಸದ್ದು ಕೂಡ ಕೇಳಿ ಬಂತು. ಈ ನಡುವೆ ಬೆಂಕಿ ನಂದಿಸುವ ಸಂದರ್ಭ ಅಗ್ನಿ ಶಾಮಕ ಹಾಗೂ ರಕ್ಷಣಾ ಇಲಾಖೆಯ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ.
ಕಟ್ಟಡದ ಭಾಗವೊಂದು ಕುಸಿದ ಪರಿಣಾಮ ರಾಜ್ಯ ಅಗ್ನಿ ಹಾಗೂ ರಕ್ಷಣಾ ಸೇವೆಗಳ ಚಕ್ಕಾ ಘಟಕದ 32 ವರ್ಷದ ಅಧಿಕಾರಿ ಜೆ.ಎಸ್ ರಂಜಿತ್ ಅವರು ಗಾಯಗೊಂಡಿದ್ದರು. ಅವರನ್ನು ಕೂಡಲೇ ನಗರದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಮುಂಜಾನೆ 3.50ಕ್ಕೆ ಸಾವನ್ನಪ್ಪಿದ್ದಾರೆ.
ದುರಂತದಲ್ಲಿ ರಾಸಾಯನಿಕಗಳು ಬೆಂಕಿಗಾಹುತಿಯಾಗಿವೆ. ಔಷಧಗಳನ್ನು ಪ್ರತ್ಯೇಕ ಕಟ್ಟಡದಲ್ಲಿ ಇರಿಸಿರುವುದರಿಂದ ಅದಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.