ಕಾರ್ಯಕರ್ತರು ಧೃತಿಗೆಡುವ ಅವಶ್ಯವಿಲ್ಲ: ವಿನಯ ಕುಮಾರ್ ಸೊರಕೆ

Update: 2023-05-28 12:15 GMT

ಹಿರಿಯಡ್ಕ, ಮೇ 28: ಕಾರ್ಯಕರ್ತರು ಧೃತಿಗೆಡ ಬೇಕಾದ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದೆ. ಕಾರ್ಯಕರ್ತರು ಮತ್ತು ಮುಖಂಡರ ಬೇಡಿಕೆಯನ್ನು ಈಡೇರಿಸುವ ಕಾರ್ಯ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಸರಕಾರದಿಂದ ವಿವಿಧ ನಿಗಮ ಮಂಡಳಿಗಳಿಗೆ ಪಕ್ಷದ ಕಾರ್ಯ ಕರ್ತರಿಗೆ ನಾಮಕರಣ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.

ಹಿರಿಯಡ್ಕದಲ್ಲಿ ರವಿವಾರ ಜರಗಿದ ಕೃತಜ್ಞತಾ ಸಮರ್ಪಣ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಆಡಳಿತ ಯಂತ್ರ ಚುರುಕುಗೊಳಿಸುವ ಬಗ್ಗೆ ಅಧಿಕಾರಿಗಳ ಹಂತದಲ್ಲಿ ಕ್ರಮ ಕೈಗೊಳ್ಳಲಾಗುವುದು. ಕ್ಷೇತ್ರದಲ್ಲಿ ನಡೆದ ಚುನಾವಣೆಯ ಸಂದರ್ಭದಲ್ಲಿ ಅವಿರತ ಅಹೋರಾತ್ರಿ ದುಡಿದ ಕಾರ್ಯಕರ್ತರಿಗೆ ಪಕ್ಷದ ಮುಖಂಡರಿಗೆ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಎಂದೆಂದಿಗೂ ನಿಮ್ಮೊಡನೆ ಈ ಹಿಂದಿನ ರೀತಿಯಲ್ಲಿ ಕಷ್ಟ ಸುಖಕ್ಕೆ ಒಬ್ಬನಾಗಿ ಇರುತ್ತೇನೆ ಎಂದು ಅವರು ಭರವಸೆ ನೀಡಿದರು.

ಸಭೆಯಲ್ಲಿ ಚುನಾವಣೆಯಲ್ಲಿ ಲಭಿಸಿದ ಮತದ ಬಗ್ಗೆ ಚಿಂತನ ಮಂಥನ ನಡೆಸ ಲಾಯಿತು. ಸೋಲಿನ ಕಾರಣಗಳು ಹಾಗೂ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷದ ಸರಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕುರಿತು, ಮುಂಬರುವ ಗ್ರಾಪಂ, ಜಿಪಂ, ತಾಪಂ ಮತ್ತು ಲೋಕಸಭಾ ಚುನಾವಣೆಯಲ್ಲಿ ಅನೇಕ ರೀತಿಯ ಅಪಪ್ರಚಾರಗಳನ್ನು ಎದುರಿಸುವ ಕುರಿತು ಚರ್ಚೆ ಅನಿಸಿಕೆಗಳನ್ನು ಕಾರ್ಯಕರ್ತರು ವ್ಯಕ್ತಪಡಿಸಿದರು.

Similar News