ಮುಂದಿನ ಚುನಾವಣೆಗಳಿಗೆ ಉಡುಪಿ ಜಿಲ್ಲಾ ಬಿಜೆಪಿ ಸಜ್ಜು: ಕುಯಿಲಾಡಿ

Update: 2023-05-28 12:19 GMT

ಉಡುಪಿ, ಮೇ 28: ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ರಾಜ್ಯದಲ್ಲೇ ಮೂಂಚೂಣಿ ಸ್ಥಾನ ವನ್ನು ಪಡೆದಿದೆ. ಈ ಭರ್ಜರಿ ವಿಜಯದ ಹಿನ್ನೆಲೆಯಲ್ಲಿ ಪ್ರತೀ ಮಂಡಲ ಮತ್ತು ಜಿಲ್ಲೆಯ 1,111 ಬೂತ್ ಗಳಲ್ಲಿ ಆತ್ಮಾವಲೋಕನ ಸಭೆಗಳನ್ನು ನಡೆಸುವ ಜೊತೆಗೆ ಸದೃಢ ಪಕ್ಷ ಸಂಘಟನೆ ಮೂಲಕ ಮುಂಬರಲಿರುವ ಲೋಕ ಸಭೆ, ಜಿಪಂ ಮತ್ತು ತಾಪಂ ಚುನಾವಣೆ ಗಳಲ್ಲಿ ಭರ್ಜರಿ ಯಶಸ್ಸು ಸಾಧಿಸಲು ತಕ್ಷಣದಿಂದ ಕಾರ್ಯಪ್ರವೃತ್ತರಾಗ ಬೇಕಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಬಿಜೆಪಿ ಉಡುಪಿ ಜಿಲ್ಲಾ ಕಚೇರಿಯಲ್ಲಿ ಶನಿವಾರ ನಡೆದ ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಕಾಂಗ್ರೆಸ್ ಉಚಿತಗಳ ಗ್ಯಾರಂಟಿ ಕಾರ್ಡ್‌ಗಳ ಆಮಿಷ ತೋರಿಸಿ ಮೋಸದಿಂದ ವಿಧಾನಸಭಾ ಚುನಾವಣೆಯನ್ನು ಗೆದ್ದಿದೆ. ಅಧಿಕಾರಕ್ಕೆ ಬಂದ ಮೊದಲನೇ ಕ್ಯಾಬಿನೆಟ್ ಸಭೆಯಲ್ಲೇ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇವೆ ಎಂದಿರುವ ಕಾಂಗ್ರೆಸ್ ಮುಖಂಡರು ಮಾತು ತಪ್ಪಿದ್ದಾರೆ. ಉಚಿತ ಖಚಿತ ಗಳ ಗ್ಯಾರಂಟಿ ಗಳನ್ನು ತಕ್ಷಣ ಜಾರಿಗೊಳಿಸದೇ ಇದ್ದಲ್ಲಿ ಬಿಜೆಪಿ ಜನತೆಯ ಪರವಾಗಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದರು.

ಈ ಹಿನ್ನೆಲೆಯಲ್ಲಿ ಮೇ 30ರಂದು ಸಂಜೆ 4ಗಂಟೆಗೆ ಬೈಂದೂರು, ಜೂ.2 ರಂದು ಸಂಜೆ 4ಗಂಟೆಗೆ ಕುಂದಾಪುರ, ಜೂ.3ರಂದು ಬೆಳಗ್ಗೆ 10.30ಕ್ಕೆ ಕಾಪು, ಸಂಜೆ 4ಗಂಟೆಗೆ ಕಾರ್ಕಳ ಮತ್ತು 5.30ಕ್ಕೆ ಉಡುಪಿ ನಗರ ಮತ್ತು ಗ್ರಾಮಾಂತರ ಮಂಡಲಗಳ ಸಭೆ ನಡೆಯಲಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಕಿಶೋರ್ ಕುಮಾರ್ ಕುಂದಾಪುರ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗೀತಾಂಜಲಿ ಎಮ್. ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಎಸ್.ಕಲ್ಮಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ ವಂದಿಸಿದರು.

Similar News