ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ಕ್ಷಿಪಣಿ ಉಡಾವಣೆಯಿಂದ ಬೊಕ್ಕಸಕ್ಕೆ 24 ಕೋ.ರೂ.ನಷ್ಟ; ಕೇಂದ್ರ

Update: 2023-05-30 18:21 GMT

ಹೊಸದಿಲ್ಲಿ,ಮೇ 30: ಕಳೆದ ವರ್ಷದ ಮಾರ್ಚ್‌ನಲ್ಲಿ ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ಬ್ರಹ್ಮೋಸ್ ಕ್ಷಿಪಣಿಯ ಉಡಾವಣೆಯಿಂದ ಸರಕಾರದ ಬೊಕ್ಕಸಕ್ಕೆ 24 ಕೋ.ರೂ.ಗಳ ನಷ್ಟ ಸಂಭವಿಸಿದೆ ಎಂದು ಕೇಂದ್ರ ಸರಕಾರವು ಮಂಗಳವಾರ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅಫಿಡವಿಟ್ನಲ್ಲಿ ತಿಳಿಸಿದೆ.

ಭಾರತದಿಂದ ಪ್ರಯೋಗಿಸಲಾದ ಅತಿ ವೇಗದ ಕ್ಷಿಪಣಿಯು ತನ್ನ ವಾಯುಪ್ರದೇಶವನ್ನು ಪ್ರವೇಶಿಸಿದೆ ಮತ್ತು ಖನೇವಾಲ್ ಜಿಲ್ಲೆಯ ಮಿಯಾಂ ಚನ್ನು ನಗರದ ಬಳಿ ಪತನಗೊಂಡಿದೆ. ಇದರಿಂದಾಗಿ ಕೆಲವು ನಾಗರಿಕ ಆಸ್ತಿಗಳಿಗೆ ಹಾನಿಯುಂಟಾಗಿದೆ ಎಂದು ಕಳೆದ ವರ್ಷದ ಮಾ.9ರಂದು ಪಾಕಿಸ್ತಾನವು ಹೇಳಿತ್ತು. ಘಟನೆಗೆ ತೀವ್ರ ವಿಷಾದವನ್ನು ವ್ಯಕ್ತಪಡಿಸಿದ್ದ ಭಾರತದ ರಕ್ಷಣಾ ಸಚಿವಾಲಯವು,ಮಾಮೂಲು ನಿರ್ವಹಣೆ ಕಾರ್ಯಾಚರಣೆ ಸಂದರ್ಭದಲ್ಲಿ ‘ತಾಂತ್ರಿಕ ದೋಷ’ದಿಂದಾಗಿ ಆಕಸ್ಮಿಕವಾಗಿ ಕ್ಷಿಪಣಿಯು ಉಡಾವಣೆಗೊಂಡಿತ್ತು ಎಂದು ತಿಳಿಸಿತ್ತು.

ಆಗಸ್ಟ್‌ನಲ್ಲಿ ರಕ್ಷಣಾ ಸಚಿವಾಲಯವು ಕ್ಷಿಪಣಿಯ ಆಕಸ್ಮಿಕ ಉಡಾವಣೆಗೆ ಕಾರಣರಾಗಿದ್ದ ಭಾರತೀಯ ವಾಯುಪಡೆಯ ಮೂವರು ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿತ್ತು. ಆದರೆ ಭಾರತವು ಉದ್ದೇಶಪೂರ್ವಕವಾಗಿ ಪ್ರಕರಣವನ್ನು ಮುಕ್ತಾಯಗೊಳಿಸುವುದನ್ನು ತಾನು ತಿರಸ್ಕರಿಸುತ್ತೇನೆ ಎಂದು ಹೇಳಿದ್ದ ಪಾಕಿಸ್ತಾನವು ಜಂಟಿ ತನಿಖೆಗೆ ಕರೆ ನೀಡಿತ್ತು.

ಅಧಿಕಾರಿಗಳಲ್ಲಿ ಓರ್ವರಾಗಿದ್ದ ಅಭಿನವ ಶರ್ಮಾ ತನ್ನನ್ನು ವಜಾಗೊಳಿಸಿದ್ದರ ವಿರುದ್ಧ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.

ಕೋರ್ಟ್ ಮಾರ್ಷಲ್‌ನಲ್ಲಿ ಮೂವರು ಅಧಿಕಾರಿಗಳ ವಿಚಾರಣೆಯು ಸಂದರ್ಭೋಚಿತವಾಗಿರಲಿಲ್ಲ, ಏಕೆಂದರೆ ಪ್ರಕರಣವು ಸೂಕ್ಷ್ಮವಾಗಿತ್ತು ಮತ್ತು ಕ್ಷಿಪಣಿ ಉಡಾವಣೆಗೆ ಸಂಬಂಧಿಸಿದ ಪ್ರಮುಖ ಪ್ರಾಯೋಗಿಕ ವಿವರಗಳನ್ನು ತಿಳಿದುಕೊಳ್ಳಲು ಅಂತರರಾಷ್ಟ್ರೀಯ ಸಮುದಾಯವು ಆಸಕ್ತಿಯನ್ನು ಹೊಂದಿತ್ತು ಎಂದು ಮಂಗಳವಾರ ಅಫಿಡವಿಟ್ನಲ್ಲಿ ಹೇಳಿರುವ ಕೇಂದ್ರವು, ಅರ್ಜಿದಾರರನ್ನು ಸೇವೆಯಿಂದ ವಜಾಗೊಳಿಸುವ ನಿರ್ಧಾರವು ವಸ್ತುನಿಷ್ಠ ಮತ್ತು ನ್ಯಾಯಯುತವಾಗಿದೆ ಎಂದು ತಿಳಿಸಿದೆ.

ಅರ್ಜಿದಾರರ ಕೃತ್ಯವು ಭಾರತೀಯ ವಾಯುಪಡೆ ಮತ್ತು ದೇಶದ ವರ್ಚಸ್ಸಿಗೆ ಹಾನಿಯನ್ನುಂಟು ಮಾಡಿತ್ತು ಮತ್ತು ಆಕಸ್ಮಿಕ ಉಡಾವಣೆಯಿಂದಾಗಿ ಸರಕಾರದ ಬೊಕ್ಕಸಕ್ಕೆ ನಷ್ಟವುಂಟಾಗಿತ್ತು. ಆಕಸ್ಮಿಕ ಉಡಾವಣೆಯಲ್ಲಿ ತನ್ನ ವೈಫಲ್ಯವು ಪ್ರಮುಖ ಪಾತ್ರವನ್ನು ಹೊಂದಿತ್ತು ಎನ್ನುವುದನ್ನೂ ತಿಳಿದೂ ಅರ್ಜಿದಾರರು ತನ್ನ ತಪ್ಪನ್ನು ಇತರ ಅಧಿಕಾರಿಗಳ ಮೇಲೆ ಹೊರಿಸಲು ಪ್ರಯತ್ನಿಸಿದ್ದು ನಿಜಕ್ಕೂ ವ್ಯಂಗ್ಯವಾಗಿದೆ ಎಂದು ಕೇಂದ್ರವು ತಿಳಿಸಿದೆ.

Similar News