ಕುಸ್ತಿಪಟುಗಳ ಮೇಲಿನ ದೌರ್ಜನ್ಯ ಖಂಡಿಸಿ ಕುಂದಾಪುರದಲ್ಲಿ ಧರಣಿ

Update: 2023-06-03 10:20 GMT

ಕುಂದಾಪುರ, ಜೂ.3: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಬಿಜೆಪಿ ಸಂಸದ, ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ ಸಿಂಗ್ ರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಕಿಸಾನ್ ಸಂಯುಕ್ತ ಮೋರ್ಚಾ ನೀಡಿದ ಕರೆಯಂತೆ ಕುಂದಾಪುರದ ಶಾಸ್ತ್ರಿ ವೃತ್ತದಲ್ಲಿ ಇಂದು ಧರಣಿ ನಡೆಸಲಾಯಿತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಲಿಂಪಿಕ್ಸ್ ಹಾಗೂ ಕಾಮನ್‌ವೆಲ್ತ್‌ಗಳಲ್ಲಿ ಸ್ಪರ್ಧಿಸಿ ಚಿನ್ನ ಹಾಗೂ ಅತ್ಯುನ್ನತ ಪ್ರಶಸ್ತಿ ಪಡೆದವರು ಇಂದು ನ್ಯಾಯಕ್ಕಾಗಿ ಬೀದಿಯಲ್ಲಿರುವುದು ದೇಶ ತಲೆತಗ್ಗಿಸುವಂತೆ ಮಾಡಿದೆ. ಸುಮಾರು 40ಕ್ಕೂ ಹೆಚ್ಚು ಗಂಭೀರ ಪ್ರಕರಣದ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಮೇಲೆ ಪೊಕ್ಸೋ ಕಾಯ್ದೆ ಇದ್ದರೂ ಕೇಂದ್ರ ಸರಕಾರ ರಕ್ಷಣೆ ಮಾಡುತ್ತಿರುವುದು ದೇಶದ ಕಾನೂನಿನ ಅಣಕವಾಗಿದೆ ಎಂದರು.

ಬಿಜೆಪಿಯ ಐಟಿ ಸೆಲ್ ನ್ಯಾಯ ಕೇಳುತ್ತಿರುವವರ ವಿರುದ್ಧ ಅಪಪ್ರಚಾರಗಳನ್ನು ಹರಿಯಬಿಟ್ಟು ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ. ಮಹಿಳೆಯರನ್ನು ಹೀನಾಯವಾಗಿ ಕಾಣುವ ಮನಸ್ಥಿತಿ ಇರುವ ಬಿಜೆಪಿ-ಆರೆಸ್ಸೆಸ್ ರಿಗೆ ಬೋಲೋ ಭಾರತ್ ಮಾತಾಕಿ ಎಂದು ಘೋಷಣೆ ಕೂಗುವ ನೈತಿಕತೆ ಇಲ್ಲ. ದೇಶದಲ್ಲಿ ಮಹಿಳೆಯರ ಮೇಲೆ ಅತೀ ಹೆಚ್ಚು ದೌರ್ಜನ್ಯ ನಡೆಸಿದ ಪಕ್ಷವೆಂದರೆ ಅದು ಬಿಜೆಪಿ ಎಂಬುವುದು ಈ ವಿಚಾರದಲ್ಲಿಯೂ ಸಾಬೀತಾಗಿದೆ ಎಂದರು.

ರೈತ ಮುಖಂಡ ಚಂದ್ರಶೇಖರ, ಕಾರ್ಮಿಕ ಮುಖಂಡ ಎಚ್.ನರಸಿಂಹ ಮಾತನಾಡಿದರು.

ಮುಖಂಡರಾದ ಕೆ.ಶಂಕರ್, ಮಹಾಬಲ ವಡೇರಹೋಬಳಿ, ಬಲ್ಕೀಸ್, ಶೀಲಾವತಿ, ನಾಗರತ್ನ ಕುಂದಾಪುರ, ರಾಜು ದೇವಾಡಿಗ, ರಮೇಶ್ ವಿ., ಸಂತೋಷ ಹೆಮ್ಮಾಡಿ ಉಪಸ್ಥಿತರಿದ್ದರು.ರಮೇಶ್ ಗುಲ್ವಾಡಿ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ವಡೇರ ಹೋಬಳಿ ವಂದಿಸಿದರು.

ಸಿಐಟಿಯು, ರೈತ ಸಂಘ, ಜನವಾದಿ ಮಹಿಳಾ ಸಂಘಟನೆ, ಡಿವೈಎಫ್‌ಐ, ದಲಿತ ಹಕ್ಕುಗಳ ಸಮಿತಿ, ಕೃಷಿಕೂಲಿಕಾರರ ಸಂಘದ ಕಾರ್ಯಕರ್ತರು ಭಾಗವಹಿಸಿದ್ದರು.

Similar News