ಸುನಿಲ್ ಕುಮಾರ್ ಹೇಳಿಕೆ ಹಿಂದೆ ಖಾಸಗಿ ಬಸ್ ಮಾಫಿಯಾ: ಅನಿತಾ ಡಿಸೋಜ

Update: 2023-06-03 11:53 GMT

ಉಡುಪಿ, ಜೂ.3: ಖಾಸಗಿ ಬಸುಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶ ನೀಡಬೇಕು ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಸರಕಾರವನ್ನು ಒತ್ತಾಯಿಸುತ್ತಿದ್ದಂತೆ, ಅವರ ಹೇಳಿಕೆ ಬೆಂಬಲಿಸಿ ರಾಜ್ಯ ಖಾಸಗಿ ಬಸ್ ಮಾಲಕರ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮತ್ತು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿಕೆಯು ಖಾಸಗಿ ಬಸ್ಸು ಮಾಫಿಯಕ್ಕೆ ಲಾಭ ಮಾಡಿಕೊಡುವ ಹುನ್ನಾರ ಇದೆ ಎಂದು ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಅನಿತಾ ಡಿಸೋಜ ಆರೋಪಿಸಿದ್ದಾರೆ.

ಮಾಜಿ ಮಂತ್ರಿ ಹಾಲಿ ಶಾಸಕ ಸುನಿಲ್ ಕುಮಾರ್ ಹೇಳಿಕೆ ಬೆನ್ನಲ್ಲೇ ಕುಯಿಲಾಡಿ ಸುರೇಶ್ ಕುಮಾರ್ ಹೇಳಿಕೆ ಬಸ್ ಮಾಫಿಯಾಗೆ ಸರಕಾರದ ಪೆಟ್ರೋಲ್, ಡೀಸೆಲ್ ಸಬ್ಸಿಡಿ ಅಥವಾ ಉಚಿತ ಟಿಕೆಟ್‌ಗಾಗಿ ಇಂತಿಷ್ಟು ಅನುದಾನವನ್ನು ಕೊಡಿಸಿ ಖಾಸಗಿ ಬಸ್ ಮಾಫಿಯಾಕ್ಕೆ ಲಾಭ ಮಾಡಿಕೊಡುವ ಹುನ್ನಾರದಿಂದಲೇ ಶಾಸಕ ಸುನಿಲ್ ಕುಮಾರ್ ಈ ಹೇಳಿಕೆ ನೀಡಿದ್ದಾರೆ ಎಂಬ ಸಂಶಯ ಮೂಡುತ್ತಿದೆ.

ಶಾಸಕ ಸುನಿಲ್ ಕುಮಾರ್ ರವರಿಗೆ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ತನ್ನ ಜಿಲ್ಲೆಯ ಜನರಿಗೂ ಸಿಗಬೇಕು ಎಂಬ ಪ್ರಾಮಾಣಿಕ ಕಾಳಜಿ ಇದ್ದಿದ್ದರೆ, ಕರಾವಳಿಯಲ್ಲಿ ಖಾಸಗಿಯಷ್ಟೇ ಪ್ರಮಾಣದ ಸರಕಾರಿ ಬಸ್‌ ಗಳು ಓಡಿಸುವಂತೆ ಸರಕಾರವನ್ನು ಒತ್ತಾಯಿಸುತ್ತಿದ್ದರು. ಜಿಲ್ಲೆಯ ಇಬ್ಬರು ಬಿಜೆಪಿ ನಾಯಕರುಗಳು ಖಾಸಗಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅಗ್ರಹಿಸು ತ್ತಿರುವುದು ಜನಪರವಾದ ಕಾಳಜಿಯಿಂದ ಅಲ್ಲ. ಬದಲಾಗಿ ಇದರ ಹಿಂದೆ ದೊಡ್ಡ ಹುನ್ನಾರವೇ ಇದೆ ಎಂದು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

Similar News