ಪಠ್ಯದಲ್ಲಿ ಪ್ರಜಾಪ್ರಭುತ್ವದ ಆಶಯ ಕೈ ಬಿಟ್ಟಿರುವುದು ಖಂಡನೀಯ: ಎಐಡಿಎಸ್‌ಒ

Update: 2023-06-03 12:20 GMT

ಮಂಗಳೂರು: ಎನ್‌ಸಿಇಆರ್‌ಟಿ ಪಠ್ಯಕ್ರಮದಲ್ಲಿ ಪ್ರಜಾಪ್ರಭುತ್ವದ ಆಶಯವುಳ್ಳ, ವೈಜ್ಞಾನಿಕ ಚಿಂತನೆಗೆ ಪೂರಕ ವಾದ ಪಾಠಗಳನ್ನು ತೆಗೆದುಹಾಕಿರುವ ಬೆಳವಣಿಗೆಯು ಆತಂಕಕಾರಿಯಾಗಿದೆ ಮತ್ತು ಇದು ಖಂಡನೀಯ ಎಂದು ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

10ನೇ ತರಗತಿಯ ಪಠ್ಯಕ್ರಮದಿಂದ ಆವರ್ತಕ ಕೋಷ್ಟಕವನ್ನು ತೆಗೆದುಹಾಕಲಾಗಿದೆ. ಇದರಡಿ ಬರುವ ಪರಿಸರ ಸುಸ್ಥಿರತೆ, ಇಂಧನ ಮೂಲಗಳು ಹಾಗೂ ರಾಜ್ಯಶಾಸ್ತ್ರ ಪಠ್ಯಪುಸ್ತಕದಿಂದ ಪ್ರಜಾಪ್ರಭುತ್ವ ರಾಜಕೀಯ-1ರಡಿ ಮಹತ್ವದ ಸಂಘರ್ಷಗಳು ಮತ್ತು ಚಳುವಳಿಗಳು, ಪ್ರಜಾಪ್ರಭುತ್ವದ ಸವಾಲುಗಳು, ರಾಜಕೀಯ ಪಕ್ಷಗಳು ಅಧ್ಯಾಯಗಳನ್ನೂ ಕೈಬಿಡಲಾಗಿದೆ. ಇದು  ವೈಜ್ಞಾನಿಕ ಮತ್ತು ಪ್ರಜಾಸತ್ತಾತ್ಮಕ ಶಿಕ್ಷಣದ ಮೇಲಿನ ದಾಳಿಯಾಗಿದೆ. ಸರಕಾರವು ತನ್ನ ಸಿದ್ಧಾಂತಕ್ಕೆ ಅನುಗುಣವಾಗಿ ಪಾಠಗಳನ್ನು ಕೈಬಿಡುತ್ತಿರುವುದನ್ನು ದೇಶದ ಜನರು ಗಮನಿಸುತ್ತಿ ದ್ದಾರೆ. ಈ ಹಿಂದೆ ವಿಕಾಸವಾದ ಸಿದ್ಧಾಂತದ ಪಾಠವನ್ನು ಸಹ ಕೈಬಿಡಲಾಗಿತ್ತು. ವಿದ್ಯಾರ್ಥಿಗಳ ಶೈಕ್ಷಣಿಕ ಹೊರೆ ಕಡಿಮೆಗೊಳಿಸುವ ಹೆಸರಿನಲ್ಲಿ ಕೇಂದ್ರ ಸರಕಾರದ ಬೆಂಬಲಿತ ‘ಎನ್‌ಸಿಇಆರ್‌ಟಿ’ಯು ವಿದ್ಯಾರ್ಥಿ ಸಮೂಹದ ಜ್ಞಾನಾರ್ಜನೆಯ ಮೇಲೆ ದಾಳಿ ಮುಂದುವರಿಸಿದೆ ಎಂದು ತಿಳಿಸಿದ್ದಾರೆ.

Similar News