ಕುಸ್ತಿಪಟುಗಳ ಪ್ರತಿಭಟನೆಗೆ ವಿದೇಶಿ ನೆರವು : ಸಚಿವೆ ಶೋಭಾ ಕರಂದ್ಲಾಜೆ ಆರೋಪ

Update: 2023-06-03 15:51 GMT

ಉಡುಪಿ, ಜೂ. 3: ದೇಶದ ರಾಜಧಾನಿ ಹೊಸದಿಲ್ಲಿಯಲ್ಲಿ ಕುಸ್ತಿಪಟುಗಳು ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ವಿರುದ್ಧ ತಿಂಗಳುಗಳಿಂದ ನಡೆಸುತ್ತಿರುವ ಪ್ರತಿಭಟನೆ ಕಾವು ಪಡೆಯುತ್ತಿರುವಂತೆಯೇ ಈ ಪ್ರತಿಭಟನೆಗೆ ಭಾರತ ವನ್ನು ಅಸ್ಥಿರಗೊಳಿಸಲು ಬಯಸುತ್ತಿರುವ ವಿದೇಶಿ ಶಕ್ತಿಗಳು ಆರ್ಥಿಕ ನೆರವು ನೀಡುತ್ತಿವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗಂಭೀರವಾದ ಆರೋಪ ಮಾಡಿದ್ದಾರೆ.

ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರವನ್ನು ಗುರಿಯಾಗಿರಿಸಿಕೊಂಡು ನಡೆಸುತ್ತಿರುವ ಪ್ರತಿಭಟನೆಗೆ ದೇಶದ ಪ್ರಜಾಪ್ರಭುತ್ವವನ್ನು ಅಲ್ಲೋಕಲ್ಲೋಲಗೊಳಿಸುವ ಸಲುವಾಗಿ ವಿದೇಶಿ ವ್ಯಕ್ತಿಗಳಿಂದ ಫಂಡಿಂಗ್ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಪ್ರತಿಭಟನೆಗೆ ಬೆಂಬಲ ನೀಡುತ್ತಿರುವ ವಿದೇಶಿ ವ್ಯಕ್ತಿಯ ಪ್ರತಿನಿಧಿ ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಎಂದೂ ಅವರು ಬಹಿರಂಗ ಪಡಿಸಿದರು.

ದೇಶವನ್ನು ಅಸ್ಥಿರಗೊಳಿಸುವ, ಪ್ರಜಾಪ್ರಭುತ್ವವನ್ನು ಅತಂತ್ರಗೊಳಿಸುವ ಹುನ್ನಾರ ಇದರ ಹಿಂದಿದೆ ಎಂದ ಅವರು ಕುಸ್ತಿಪಟುಗಳ ಆರೋಪದ ಬಗ್ಗೆ ಆಂತರಿಕ ತನಿಖೆ ನಡೆಯುತ್ತಿದೆ. ಕ್ರೀಡಾ ಸಚಿವ ಅನುರಾಗ ಠಾಕೂರ್ ಅವರ ನೇತೃತ್ವದಲ್ಲಿ  ಈ ಬಗ್ಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದರು. ಇಲ್ಲಿ ಯಾರನ್ನೂ ಬೆಂಬಲಿಸುವ, ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆ ಇರುವುದಿಲ್ಲ ಎಂದರು.

ಕಾಂಗ್ರೆಸ್ ಅಹಂಕಾರದ ಪ್ರದರ್ಶನ: ಸರಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಶೋಭಾ ಅವರಿಗೂ ಅವಕಾಶವಿದೆ ಎಂಬ ಕಾಂಗ್ರೆಸ್‌ನ ಆಹ್ವಾನವನ್ನು ತೀವ್ರವಾಗಿ ಖಂಡಿಸಿರುವ ಶೋಭಾ, ಇದು ಕಾಂಗ್ರೆಸ್‌ನ ಅಹಂಕಾರದ ಪ್ರದರ್ಶನವಾಗಿದ್ದು, ಇದಕ್ಕೆ ಮತದಾರರೇ ತಕ್ಕ ಮದ್ದು ನೀಡಲಿದ್ದಾರೆ ಎಂದು ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕಿಡಿಕಾರಿದ್ದಾರೆ.

ಉಚಿತ ಕೊಡುಗೆಗಳನ್ನು ನೀಡಿ ಈಗ ಸಾಲದ ಸುಳಿಯಲ್ಲಿ ಮುಳುಗಿರುವ  ಆಂದ್ರ ಪ್ರದೇಶದ ಉದಾಹರಣೆಯನ್ನು ನೀಡಿದ ಶೋಭಾ, ಆಂಧ್ರದಲ್ಲಿ ಇಂದು ತನ್ನ ನೌಕರರಿಗೆ ಸಂಬಳ ನೀಡಲೂ ಸರಕಾರದ ಖಜಾನೆಯಲ್ಲಿ ಹಣವಿಲ್ಲ. ಅಂಥ ಸ್ಥಿತಿಗೆ ಕರ್ನಾಟಕ ತಲುಪಬಾರದು. ಗ್ಯಾರಂಟಿಗಳ ಅನುಷ್ಠಾನಕ್ಕೆ ಆರ್ಥಿಕ ಮೂಲವನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರ ಬಹಿರಂಗ ಪಡಿಸಬೇಕು ಎಂದು ಶೋಭಾ ಒತ್ತಾಯಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಗೆಲುವು ತಂದಿತ್ತ ಗ್ಯಾರಂಟಿಗಳು ಮುಂಬರುವ ರಾಜಸ್ತಾನ ಹಾಗೂ ಮಧ್ಯಪ್ರದೇಶ ಹಾಗೂ ಮುಂದಿನ ವರ್ಷದ ಲೋಕಸಭಾ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ದೇಶದ ಜನ ವಿದ್ಯಾವಂತರೂ, ಬುದ್ಧಿವಂತರೂ ಆಗಿದ್ದಾರೆ. ದೇಶಭಕ್ತರಾಗಿರುವ ಅವರು ಭಾರತಕ್ಕೆ ವಿಶ್ವದಲ್ಲೇ ಮನ್ನಣೆ, ಗೌರವ ತಂದು ಕೊಟ್ಟ ಪ್ರಧಾನಿ ಮೋದಿ ಅವರ ಸರಕಾರಕ್ಕೆ ಮತ್ತೆ ಮತ ಹಾಕಲಿದ್ದಾರೆ ಎಂದು ಭವಿಷ್ಯ ನುಡಿದರು. ಪತ್ರಿಕಾಗೋಷ್ಠಿಯಲ್ಲಿ ಶೋಭಾ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಒಂಭತ್ತು ವರ್ಷಗಳ ಸಾಧನೆಯ ಪಕ್ಷಿನೋಟವನ್ನು ತೆರೆದಿಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಯಶಪಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಕಿರಣ್‌ ಕುಮಾರ್ ಕೊಡ್ಗಿ, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಉದಯಕುಮಾರ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ರಾಘವೇಂದ್ರ ಕಿಣಿ, ಕುತ್ಯಾರು ನವೀನ್ ಶೆಟ್ಟಿ ಉಪಸ್ಥಿತರಿದ್ದರು.

Similar News