ಕುಮಟಾ: ರಸ್ತೆ ಅಪಘಾತಕ್ಕೆ ಓರ್ವ ಬಲಿ, 8 ಮಂದಿಗೆ ಗಾಯ

Update: 2023-06-05 05:25 GMT

ಕುಮಟಾ, ಜೂ.5: ತೂಫಾನ್ ವಾಹನವು ಬೈಕೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟ ಘಟನೆ ಪಟ್ಟಣದ ಹೊನ್ಮಾವರ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ಇಳಿಜಾರಿನಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಘಟನೆಯಲ್ಲಿ ತೂಫಾನ್ ವಾಹನದ ಚಾಲಕ ಸೇರಿದಂತೆ 8 ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪಟ್ಟಣದ ಸಿದ್ದನಬಾವಿ ನಿವಾಸಿ ಲಂಬೋದರ ನಾಗೇಶ ಉಪ್ಪಾರ(28) ಸ್ಥಳದಲ್ಲೇ ಮೃತಪಟ್ಟ ಬೈಕ್ ಸವಾರ, ಇವರು  ಅಳ್ವೆಕೋಡಿಯಿಂದ ಕುಮಟಾ ಕಡೆ ತೆರಳುತ್ತಿದ್ದ ವೇಳೆ ಗದಗದಿಂದ ಮಂಗಳೂರಿಗೆ ತೆರಳುತ್ತಿದ್ದ ತೂಫಾನ್ ವಾಹನ ಢಿಕ್ಕಿ ಹೊಡೆದಿದೆ. ಬಳಿಕ ಹೆದ್ದಾರಿ ಪಕ್ಕದಲ್ಲಿ ಉರುಳಿ ಬಿದ್ದ ರಭಸಕ್ಕೆ ತೂಫಾನ್ ವಾಹನದಲ್ಲಿದ್ದ ಇಳಕಲ್, ಬಾದಾಮಿ, ಗಜೇಂದ್ರಗಡ, ಕುಷ್ಠಗಿ ಹಾಗೂ ಗದಗ ನಿವಾಸಿಗಳಾದ ಸಂಗಪ್ಪ ಗುಗ್ಗರಿ (38), ಸಂತೋಷ ಶಂಕರಗುಡಿ (34), ಸುಭಾಷ್ (21), ಶರಣಮ್ಮ ಕಂಚೇರ (32), ಯಶ್ವಂತ ಕಂಚೇರ (9), ಸ್ವಂದನಾ ಗುಗ್ಗರಿ (6), ದುರ್ಗೇಶ ಕಂಚೇರ (23), ಶ್ರೀನಿವಾಸ ರಾಠೋಡ (15), ಶ್ರೀಕಾಂತ ಜಾಲಿಹಾಲ (25) ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News