ಕುಂದಾಪುರ: ಕೊರಗ ಕುಟುಂಬಗಳಿಗೆ ಭೂಮಿ ನೀಡುವಂತೆ ಆಗ್ರಹಿಸಿ ಧರಣಿ ಸತ್ಯಾಗ್ರಹ
ಗ್ರಾಪಂ ಎದುರೇ ಅಡುಗೆ, ಮಗುವಿಗೆ ತೊಟ್ಟಿಲು..!
ಕುಂದಾಪುರ, ಜೂ.14: ಡಾಕ್ಟರ್ ಮುಹಮ್ಮದ್ ಪೀರ್ ವರದಿಯಂತೆ ಪ್ರತಿ ಕೊರಗ ಕುಟುಂಬಗಳಿಗೆ ಭೂಮಿಯನ್ನು ನೀಡುವಂತೆ ಹಾಗೂ ನಾಡ ಗ್ರಾಮದ ಪಡುಕೋಣೆ ಕೊರಗ ಸಮುದಾಯದ ಭೂಮಿಗೆ ಸಂಬಂಧಿಸಿದ ವಿವಾದ ಗಳು, ಸಮಸ್ಯೆಗಳನ್ನು ಇತ್ಯರ್ಥ ಪಡಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಕೊರಗ ಸಂಘಟನೆಗಳು ಹಾಗೂ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಘಟನಾ ಸಮಿತಿ ನೇತೃತ್ವದಲ್ಲಿ ನಾಡ ಗ್ರಾಮ ಪಂಚಾಯತ್ ಎದುರು ಇಂದಿನಿಂದ ಧರಣಿ ಸತ್ಯಾಗ್ರಹ ಆರಂಭಗೊಂಡಿದೆ.
ಧರಣಿಯನ್ನುದ್ದೇಶಿಸಿ ಮಾತನಾಡಿದ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ ಶ್ರೀಧರ ನಾಡ, ಮೂಲನಿವಾಸಿಗಳಾದ ಪರಿಶಿಷ್ಟ ಪಂಗಡದ ಕೊರಗ ಸಮುದಾದ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ತೀವ್ರಗತಿ ಯಲ್ಲಿ ಕಡಿಮೆಯಾಗಿ ಅಳಿವಿನಂಚಿಗೆ ಸಾಗುತ್ತಿದೆ. ಸಮುದಾಯವನ್ನು ಉಳಿಸುವ ನಿಟ್ಟಿನಲ್ಲಿ ಸರಕಾರ ಕೊರಗ ಸಮುದಾಯದ ಮೇಲೆ ವಿಶೇಷ ಗಮನ ನೀಡುವುದು ಅಗತ್ಯವಿದೆ ಎಂದರು.
ಕೊರಗ ಸಮುದಾಯದ ಸಮಗ್ರ ಅಭಿವೃದ್ಧಿಗೆ ಸರಕಾರ 1994ರಲ್ಲಿ ಡಾ. ಮಹಮ್ಮದ್ ಪೀರ್ ಆಯೋಗದ ವರದಿ ಅಂಗೀಕರಿಸಿದೆ. ಆದರೆ ಈ ವರದಿ ಜಾರಿಗೆ ತರುವಲ್ಲಿ ಸರಕಾರ ವಿಫಲವಾಗಿದೆ. ವರದಿ ಅನ್ವಯ ಪ್ರತಿ ಕೊರಗ ಕುಟುಂಬಗಳಿಗೆ 2.50 ಎಕರೆ ಭೂಮಿಯನ್ನು ನೀಡಬೇಕು. ನಾಡ ಗ್ರಾಪಂ ವ್ಯಾಪ್ತಿಯ ಕೊರಗ ಸಮುದಾಯದ ಭೂಮಿಗೆ ಸಂಬಂಧಿಸಿದ ವಿವಾದಗಳು, ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರಮುಖ ಬೇಡಿಕೆಗಳು
ಡಾ.ಮಹಮದ್ ಪೀರ್ ವರದಿ ಪ್ರಕಾರ ಪ್ರತಿ ಕೊರಗ ಸಮುದಾಯದ ಕುಟುಂಬಗಳಿಗೆ ತಲಾ 2.50 ಎಕರೆ ಭೂಮಿಯನ್ನು ನೀಡಬೇಕು. ಅನಾಧಿಕಾಲದಿಂದ ಕೊರಗ ಸಮುದಾಯದ ಸ್ವಾಧೀನ ಇರುವ ಪಡುಕೋಣೆ ಕೊರಗ ಕುಟುಂಬಗಳ ಭೂಮಿಯ ವಿವಾದ ಬಗೆಹರಿಸಿ ಭೂಮಿಯ ಸಂಪೂರ್ಣ ಹಕ್ಕು ನೀಡಬೇಕು. ಕೊರಗರ ಕಂದಾಯ ಅದಾಲತ್ನಲ್ಲಿ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ ಹಕ್ಕುಪತ್ರ ನೀಡಬೇಕು.
ನಾಡಗ್ರಾಮದ ಸರ್ವೇ ನಂಬರ್ 183/11 ರಲ್ಲಿ ವಾಸವಿರುವ ಕೊರಗ ಸಮುದಾಯದಲ್ಲಿ ಭೂಮಿಯ ಆರ್.ಟಿ.ಸಿ ಇದ್ದರು ಸಹ ಇದುವರೆಗೆ 1 ರಿಂದ 5 ಮಾಡಿ ನಕ್ಷೆ ಕಟ್ ಆಗಿರುವುದಿಲ್ಲ. ಆದರಿಂದ ನಕ್ಷೆ ಮಾಡಲು ಕ್ರಮ ವಹಿಸಬೇಕು. ಈ ಎಲ್ಲಾ ಬೇಡಿಕೆಗಳ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೊರಗ ಸಮುದಾಯದ ಮುಖಂಡರು ಮತ್ತು ಪಡುಕೋಣೆ ಕೊರಗ ಸಮುದಾಯದ ಭೂಮಿಗೆ ಸಂಬಂಧಿಸಿದ ವಿವಾದದ ಎದುರುದಾರರ ಜೊತೆಗೆ ಜಂಟಿ ಸಭೆಯನ್ನು ಕರೆದು ಸಮಸ್ಯೆ ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗಳನ್ನು ಧರಣಿನಿರತರು ಮುಂದಿಟ್ಟಿದ್ದಾರೆ.
ಮನವಿ ಸ್ವೀಕಾರ
ಇದೇ ಸಂದರ್ಭ ಧರಣಿ ಸ್ಥಳಕ್ಕೆ ಆಗಮಿಸಿದ ಬೈಂದೂರು ತಹಶಿಲ್ದಾರ್ ಶ್ರೀಕಾಂತ್ ಹೆಗ್ಡೆ ಧರಣಿನಿರತರಿಂದ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ವಿಚಾರ ತರುವುದಾಗಿ ಭರವಸೆ ನೀಡಿದರು. ನಾಡ ಗ್ರಾಪಂ ಅಭಿವೃದ್ಧಿ ಅಧಿಕಾರಿ ಹರೀಶ್, ಗ್ರಾಪಂ ಅಧ್ಯಕ್ಷ ದಿನೇಶ್ ಶೆಟ್ಟಿ ಇದ್ದರು.
ಅದೇ ರೀತಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆಯ ಯೋಜನಾ ಸಮನ್ವಯ ಅಧಿಕಾರಿ ದುದ್ಫೀರ್, ಕುಂದಾಪುರ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ರಾಘವೇಂದ್ರ ವರ್ಣೆಕರ್ ಭೇಟಿ ನೀಡಿ ಮನವಿ ಸ್ವೀಕರಿಸಿದರು.
ಕೊರಗ ಶ್ರೆಯೋಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಗಣೇಶ ವಿ.ಕೊರಗ, ಕೊರಗ ಸಂಘಟನೆ ಜಿಲ್ಲಾಧ್ಯಕ್ಷೆ ಗೌರಿ ಕೆಂಜೂರು, ಬೈಂದೂರು ತಾಲೂಕು ಸಿಐಟಿಯು ಬೆಂಬಲಿತ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ರಾಜು ಪಡುಕೋಣೆ, ಕೃಷಿಕೂಲಿಗಾರರ ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್ ಕೋಣಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಬೈಂದೂರು ತಾಲೂಕು ಕೃಷಿಕೂಲಿಗಾರರ ಸಂಘದ ಕಾರ್ಯದರ್ಶಿ ನಾಗರತ್ನ ನಾಡ, ಸುಶಿಲಾ, ಪ್ರಮುಖರಾದ ಚಂದ್ರಶೇಖರ, ಶೋಭಾ, ಸುನೀತಾ, ಮಮತಾ, ಹೊನ್ನಮ, ಮಹಾಬಲ ಮೊದಲಾದವರು ಉಪಸ್ಥಿತರಿದ್ದರು.
ಗ್ರಾಪಂ ಎದುರೇ ಅಡುಗೆ, ಮಗುವಿಗೆ ತೊಟ್ಟಿಲು..!
ಬೆಳಿಗ್ಗೆ 11 ಗಂಟೆ ಹೊತ್ತಿಗೆ ಪಡುಕೋಣೆ ಕೊರಗ ಸಮುದಾಯದ ನಿವಾಸ ದಿಂದ ಸಾಂಪ್ರದಾಯಿಕ ವಾದನಗಳಾದ ಡೋಲು, ಕೊಳಲು ನಾದದೊಂದಿಗೆ ನೂರಾರು ಮಂದಿ ಕೊರಗರು ನಾಡ ಗ್ರಾ.ಪಂ ಕಚೇರಿ ತನಕ ಆಗಮಿಸಿದರು. ಜಿಲ್ಲಾಧಿಕಾರಿ ಸ್ಥಳಕ್ಕಾಗಮಿಸಿ ತಮ್ಮ ಅಹವಾಲು ಸ್ವೀಕರಿಸಿ ಕ್ರಮವಹಿಸಬೇಕು ಎಂದು ಧರಣಿನಿರತರು ಒತ್ತಾಯಿಸಿದರು.
ಡಿಸಿ ಆಗಮನ ವಿಳಂಭವಾಗುವ ಮಾಹಿತಿ ಸಿಗುತ್ತಿದ್ದಂತೆಯೇ ಧರಣಿನಿರತರು ಅನಿರ್ಧಿಷ್ಟಾವಧಿ ಧರಣಿ ಮುಂದುವರೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಗ್ಯಾಸ್ ಒಲೆ ತರಿಸಿ, ಗ್ರಾಪಂ ಎದುರೆ ಗಂಜಿ ಊಟ ತಯಾರಿಸಿ ಮಧ್ಯಾಹ್ನ ಊಟ ಮಾಡಿದರು. ಮಧ್ಯಾಹ್ನದ ನಂತರವೂ ಧರಣಿ ಮುಂದುವರೆದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಪಂಚಾಯಿತಿ ಎದುರಲ್ಲೇ ತೊಟ್ಟಿಲು(ಸೀರೆ ಜೋಲಿ) ಕಟ್ಟಿ ಮಗುವನ್ನು ಮಲಗಿಸಿದರು.
‘ನಾಡ ಗ್ರಾಪಂ ವ್ಯಾಪ್ತಿಯಲ್ಲಿ ಭೂಮಿಯಿಲ್ಲದಿರುವ 40 ಕುಟುಂಬಗಳಿವೆ. ಮಹಮ್ಮದ್ ಫಿರ್ ವರದಿಯಂತೆ ಕೊರಗರಿಗೆ ಭೂಮಿ ನೀಡಿ ಕೃಷಿಗೆ ಉತ್ತೇಜಿಸಿ ಸ್ವಾವಲಂಬಿ ಬದುಕು ಸಾಗಿಸಲು ಅವಕಾಶ ಕಲ್ಪಿಸಬೇಕೆಂದಿದೆ. ಈ ಹಿಂದೆ ಜಿಲ್ಲೆಯಲ್ಲಿ ಹಲವೆಡೆ ಭೂಮಿ ನೀಡಿದ್ದು ನಾಡದಲ್ಲಿ ಕೊರಗರಿಗೆ ಭೂಮಿ ನೀಡದೆ ವಂಚಿಸಲಾಗಿದೆ. ಭೂಮಿ ಸಮಸ್ಯೆ, ಕೊರಗರ ಆರೋಗ್ಯ ಭದ್ರತೆ ವಿಚಾರದಲ್ಲಿ ಸರಕಾರ, ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕು’
-ಗಣೇಶ ವಿ.ಕೊರಗ, ಅಧ್ಯಕ್ಷರು,
ಕೊರಗ ಶ್ರೆಯೋಭಿವೃದ್ಧಿ ಸಂಘ, ಕುಂದಾಪುರ ತಾಲೂಕು
‘ಭೂಮಿ, ಪಡಿತರ ಚೀಟಿ, ಜಾತಿ ಸರ್ಟಿಫಿಕೇಟ್ ಪಡೆಯಲು ಸಹಿತ ಎಲ್ಲಾ ಅಗತ್ಯ ಸೌಕರ್ಯ ಪಡೆಯಲು ಕೊರಗರ ಸಮುದಾಯ ಹೋರಾಟ ಮೂಲಕವೇ ಪಡೆದುಕೊಳ್ಳಬೇಕಾಗಿದೆ. ಯಾರೊಂದಿಗೂ ಘರ್ಷಣೆ ಮಾಡದೆ ಶಾಂತಿ ಯುತವಾಗಿ ಕೇಳುತ್ತಿದ್ದೇವೆ. ಸಮುದಾಯದ ಬಂಧುಗಳು ಶಕ್ತಿಯುತವಾಗಿ ಹೋರಾಟ ಮಾಡುತ್ತೇವೆ’
-ಗೌರಿ ಕೆಂಜೂರು, ಅಧ್ಯಕ್ಷರು, ಉಡುಪಿ ಜಿಲ್ಲಾ ಕೊರಗ ಸಂಘಟನೆ