ಖಾಲಿಸ್ತಾನ್ ಪರ ಹೋರಾಟಗಾರ ಅವತಾರ್ ಸಿಂಗ್ ಖಾಂಡಾ ಇಂಗ್ಲೆಂಡ್ ಆಸ್ಪತ್ರೆಯಲ್ಲಿ ನಿಧನ
ಲಂಡನ್: ವಾರಿಸ್ ಪಂಜಾಬ್ ಡಿ ಮುಖ್ಯಸ್ಥ ಅಮೃತಪಾಲ್ ಸಿಂಗ್ ಪಂಜಾಬ್ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದಾಗ ಆತನಿಗೆ ಸಹಾಯ ಮಾಡಿದ್ದ ಇಂಗ್ಲೆಂಡ್ ಮೂಲದ ಖಾಲಿಸ್ತಾನ್ ಪರ ಹೋರಾಟಗಾರ ಅವತಾರ್ ಸಿಂಗ್ ಖಾಂಡಾ ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಮ್ನ ಆಸ್ಪತ್ರೆಯಲ್ಲಿ ಗುರುವಾರ ಕೊನೆಯುಸಿರೆಳೆದಿದ್ದಾನೆ.
ಶಿರೋಮಣಿ ಅಕಾಲಿ ದಳ ಅಮೃತಸರದೊಂದಿಗೆ ಸಂಬಂಧ ಹೊಂದಿದ್ದ ಖಾಂಡಾನನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಖಾಂಡಾ ಸಾವಿಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲವಾದರೂ, ಕೆಲವು ವರದಿಗಳು ವಿಷಾಹಾರ ಸೇವನೆ ಇದಕ್ಕೆ ಕಾರಣ ಎನ್ನುತ್ತಿವೆ. ಇನ್ನು ಕೆಲವು ವರದಿಗಳು ಆತ ರಕ್ತದ ಕ್ಯಾನ್ಸರ್ಗೆ ಬಲಿಯಾಗಿದ್ದಾಗಿ ಹೇಳಿವೆ.
ಅಮೃತಪಾಲ್ ಸಿಂಗ್ ಪ್ರಕರಣದ ತನಿಖೆ ನಡೆಸಿದ ತನಿಖಾ ಸಂಸ್ಥೆಗಳ ಪ್ರಕಾರ, ಖಾಲಿಸ್ತಾನ್ ಪರ ಬೋಧಕ ಅಮೃತಪಾಲ್ ಬೆಳವಣಿಗೆಯ ಹಿಂದೆ ಖಾಂಡಾ ಇದ್ದ. ಅಮೃತಪಾಲ್ ಸಿಂಗ್ ಪರಾರಿಯಾಗಿದ್ದಾಗ ಪಂಜಾಬ್ ಪೊಲೀಸರು ಖಾಂಡಾ ಅವರ ತಾಯಿ ಹಾಗೂ ಸಹೋದರಿಯನ್ನು ಬಂಧಿಸಿದ್ದರು. ಅಮೃತಪಾಲ್ ಬಂಧನದಿಂದ ತಪ್ಪಿಸಿಕೊಳ್ಳುವಾಗ ಖಾಂಡಾ, ಅಮೃತಪಾಲ್ನೊಂದಿಗೆ ಸಂಪರ್ಕದಲ್ಲಿದ್ದ ಎಂದು ನಂಬಲಾಗಿದೆ.