ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಮೇಲೆ ಹಲ್ಲೆಗೆ ಯತ್ನ ಆರೋಪ; ಓರ್ವ ಪೊಲೀಸ್‌ ವಶಕ್ಕೆ

Update: 2024-04-01 06:53 GMT

Photo:fb.com

ರಾಯಚೂರು, ಎ. 1: ಮದ್ಯದ ಅಮಲಿನಲಿದ್ದ ವ್ಯಕ್ತಿಯೊಬ್ಬ ರಾಯಚೂರು ನಗರ ಕ್ಷೇತ್ರದ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಘಟನೆ ಇಲ್ಲಿನ ಗದ್ವಾಲ್ ರಸ್ತೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಹಲ್ಲೆ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಚಾಂದ್ ಪಾಷಾ ಎಂದು ಗುರುತಿಸಲಾಗಿದೆ. ಗದ್ವಾಲ್ ರಸ್ತೆಯ ಆಂಜನೇಯ ದೇವಸ್ಥಾನಕ್ಕೆ ಶಾಸಕ ಶಿವರಾಜ್ ಪಾಟೀಲ್ ತೆರಳಿದ್ದರು. ಈ ವೇಳೆ ಚಾಂದಪಾಷಾ, ಶಾಸಕರನ್ನು ನೋಡಿ ಅವರ ಬಳಿಗೆ ಹೋಗಿ ನಮ್ಮ ಮನೆಗೆ ನಲ್ಲಿ ಹಾಕಿಸಿಲ್ಲ ಏಕೆ ಎಂದು ಪ್ರಶ್ನಿಸಿದ್ದಾನೆ ಎನ್ನಲಾಗಿದೆ.

ಆದರೆ, ಇದಕ್ಕೆ ಶಾಸಕರು ಸರಿಯಾಗಿ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ  ಹಲ್ಲೆ ನಡೆಸಲು ಯತ್ನಿಸಿದ ಪಾಷಾನನ್ನು ಅಂಗರಕ್ಷಕರು ತಡೆದು ಮಾರ್ಕೆಟ್ ಯಾರ್ಡ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರು ವಿಚಾರಣೆ ನಡೆಸಿದಾಗ, ಹಲ್ಲೆ ಮಾಡಲು ಹೋಗಿರಲಿಲ್ಲ, ಅವರೊಂದಿಗೆ ಮಾತನಾಡಲು ಹೋಗಿದ್ದೆ ಎಂದು ಚಾಂದ್​ಪಾಷಾ ತಿಳಿಸಿದ್ದಾನೆ.

ಮಾರ್ಕೆಟ್ ಯಾರ್ಡ್ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News