ರಾಯಚೂರಿನಲ್ಲಿ 2419 ಮನೆಗಳನ್ನು ನಿರ್ಮಿಸಿ ಬಡವರಿಗೆ ವಿತರಣೆ: ಸಚಿವ ಭೈರತಿ ಸುರೇಶ್
ರಾಯಚೂರು: ಜಿ+3 ಮಾದರಿಯಲ್ಲಿ ಅನುಮೋದನೆಗೊಂಡು, ಪ್ರಧಾನಮಂತ್ರಿ ಆವಾಸ್ ಯೋಜನೆಯ ಉಪ ಘಟಕ ಎಎಚ್ಪಿ ಯೋಜನೆಯಡಿ ನಿರ್ಮಾಣ ಹಂತದಲ್ಲಿರುವ 2419 ವಸತಿ ಸಮುಚ್ಛಯದ ಸ್ಥಳಕ್ಕೆ ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ್ ಅವರು ಭೇಟಿ ನೀಡಿದರು.
ವಸತಿ ಸಮುಚ್ಛಯ ಸ್ಥಳಕ್ಕೆ ಆಗಮಿಸಿ ಕಾಮಗಾರಿಯ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವ ಭೈರತಿ ಸುರೇಶ್, ಮನೆಗಳನ್ನು ಬಡಜನತೆಗೆ ವಿತರಿಸಲು ಅಗತ್ಯ ಕ್ರಮವಹಿಸುವಂತೆ ಸೂಚನೆ ನೀಡಿದರು. ಜಿ+3 ಸಮುಚ್ಛಯ ನಿರ್ಮಾಣ ಕಾರ್ಯವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಲ್ಲಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ನಡೆಯುತ್ತಿದೆ. ಬಡವರಿಗೆ ಮನೆಗಳನ್ನು ನಿರ್ಮಿಸಿ ಕೊಡುವ ಈ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ದಾಖಲೆಯ 2419 ಮನೆಗಳನ್ನು ನಿರ್ಮಿಸಿ ಕಡುಬಡವರಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಾಮಾನ್ಯ ವರ್ಗದ ಹಾಗೂ ಹಿಂದುಳಿದ ವರ್ಗದ ಜನತೆಗೆ ನೀಡುತ್ತಿರುವುದು ರಾಯಚೂರಿನ ಇತಿಹಾಸದಲ್ಲಿ ಮೊದಲು ಎಂದು ಹೇಳಿದರು.
ರಾಯಚೂರು ವಿಮಾನ ನಿಲ್ದಾಣದ ಬಳಿಯಲ್ಲಿ ನಿರ್ಮಾಣವಾಗುತ್ತಿರುವ ಜಿ+3 ವಸತಿ ಸಮುಚ್ಚಯಕ್ಕೆ ಬೇಕಿರುವ ರಸ್ತೆ ಸಂಪರ್ಕ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಾರ್ಯಕ್ಕೆ ಬೇಕಾಗಿರುವ ಹೆಚ್ಚುವರಿ ಅನುದಾನವನ್ನು ನಗರಾಭಿವೃದ್ಧಿ ಇಲಾಖೆಯಿಂದ ನೀಡುವುದಾಗಿ ಸಚಿವರು ಇದೇ ವೇಳೆ ತಿಳಿಸಿದರು.
ಈ ಮನೆಗಳನ್ನು 44 ಎಕರೆ ಜಾಗದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮನೆಗಳ ನಿರ್ಮಾಣ ಕಾರ್ಯ ವಿವಿಧ ಹಂತಗಳಲ್ಲಿದೆ. ಪರಿಶಿಷ್ಟ ಜಾತಿಗೆ 951 ಮನೆಗಳು, ಪರಿಶಿಷ್ಟ ಪಂಗಡಕ್ಕೆ 1053 ಮನೆಗಳು, ಸಾಮಾನ್ಯ ವರ್ಗಕ್ಕೆ 228 ಮನೆಗಳು ಮತ್ತು ಹಿಂದುಳಿದ ವರ್ಗಕ್ಕೆ 187 ಮನೆಗಳು ಅನುಮೋದನೆಯಾಗಿವೆ. ಈ ಯೋಜನೆಯ ಅಂದಾಜು ವೆಚ್ಚ 9 ಲಕ್ಷ ಇರುತ್ತದೆ. ಎಸ್ಎಸಿ ಮತ್ತು ಎಸ್ಟಿ ಅವರಿಗೆ ಕೇಂದ್ರ ಮತ್ತು ರಾಜ್ಯದಿಂದ ಸಬ್ಸಿಡಿ ಅನುದಾನ ರಾಜ್ಯ ಸರ್ಕಾರದಿಂದ 2 ಲಕ್ಷ ರೂ ಹಾಗೂ ಕೇಂದ್ರ ಸರ್ಕಾರದ 1.5 ಲಕ್ಷ ರೂ ಅನುದಾನ ಸೇರಿ ಒಟ್ಟು 3.50 ಲಕ್ಷ ರೂ ನಿಗದಿಪಡಿಸಲಾಗಿದೆ. ಬ್ಯಾಂಕ್ನಿಂದ ಲೋನ್ ಪಡೆದು ಬಾಕಿ ಉಳಿದ ಅನುದಾನವನ್ನು ಫಲಾನುಭವಿಗಳೇ ಭರಿಸಬೇಕಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ ಹಾಗೂ ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ ಅವರು ಸಚಿವರಿಗೆ ಮಾಹಿತಿ ನೀಡಿದರು.
ಈ ವೇಳೆ ಮಸ್ಕಿ ಶಾಸಕರಾದ ಬಸನಗೌಡ ತುರವಿಹಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜಶೇಖರ ರಾಮಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ, ಏಗನೂರ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.