ತಂತ್ರಜ್ಞಾನದಲ್ಲಿ ನೈತಿಕತೆ ಮುಖ್ಯ: ಪತ್ರಕರ್ತ ನಂಜುಂಡಪ್ಪ

23ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ; ‘ಮಾಧ್ಯಮ ಸೇವಾ ರತ್ನ’ ಪ್ರಶಸ್ತಿ ಪ್ರದಾನ

Update: 2026-07-26 22:03 IST

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ವ್ಯಾಪಕವಾಗಿ ಬೆಳೆಯುತ್ತಿದೆ. ಅದರಲ್ಲೂ ಪ್ರಮುಖವಾಗಿ ಕೃತಕ ಬುದ್ದಿಮತ್ತೆ (ಎಐ) ನಮ್ಮೆಲ್ಲರನ್ನೂ ಆವರಿಸಿಕೊಳ್ಳುತ್ತಿದೆ. ತಂತ್ರಜ್ಞಾನದಲ್ಲಿ ನಮಗೆ ನೈತಿಕತೆ ಮುಖ್ಯ. ಯಾವುದೇ ತಂತ್ರಜ್ಞಾನ ಬಂದರೂ, ನೈತಿಕ ನೆಲೆಗಟ್ಟಿನಲ್ಲಿ ಬಳಕೆ ಮಾಡಿದಾಗ ಮಾತ್ರ ಅದಕ್ಕೆ ಅರ್ಥ ಬರುತ್ತದೆ ಎಂದು ಹಿರಿಯ ಪತ್ರಕರ್ತ ನಂಜುಂಡಪ್ಪ ವಿ. ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ನಯನ ಸಭಾಂಗಣದಲ್ಲಿ ಇದು ನಿಮ್ಮ ವಾಹಿನಿ ಕಲಾ ವೇದಿಕೆ ಮತ್ತು ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಸಹಯೋಗದಲ್ಲಿ ವೈದ್ಯ, ಪತ್ರಿಕೋದ್ಯಮ ಮತ್ತು ಕಾರ್ಗಿಲ್ ವಿಜಯ್ ದಿವಸ್ ಪ್ರಯುಕ್ತ ಹಮ್ಮಿಕೊಂಡಿದ್ದ 23ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಕ್ಕಳು ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕೇ ಹೊರತು ದುರ್ಬಳಕೆ ಮಾಡಿಕೊಳ್ಳಬಾರದು. ಈಗಿನ ತಲೆಮಾರಿನವರು ಹೆಚ್ಚಿನ ಸಮಯ ಮೊಬೈಲ್‍ನಲ್ಲಿ ಕಳೆಯುತ್ತಿರುವುದನ್ನು ನೋಡುತ್ತಿದ್ದೇವೆ. ಹಾಗೆ ಮಾಡದೇ, ತಂತ್ರಜ್ಞಾನವನ್ನು ಅಧ್ಯಯನಕ್ಕೆ ಬಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿ ಸಮುದಾಯ ವಯುಕ್ತಿಕ ಮತ್ತು ದೇಶದ ಶ್ರೇಯೋಭಿವೃದ್ಧಿಗೆ ಬಳಸಬೇಕು. ಮನುಷ್ಯನಿಗೆ ಯಾವತ್ತೇ ಆದರೂ ದೇಶ ಮೊದಲು, ರಾಷ್ಟ್ರಾಭಿಮಾನದ ನಂತರವೇ ಬೇರೆಲ್ಲವೂ. ರಾಷ್ಟ್ರ ಪ್ರೇಮ, ರಾಷ್ಟ್ರ ಗೀತೆಗೆ ನಾವೆಲ್ಲರೂ ಗೌರವ ಕೊಡಬೇಕು. ಇದು ನಮ್ಮ ಪ್ರಧಾನ ಆದ್ಯತೆ ಆಗಬೇಕು ಎಂದು ಅವರು ತಿಳಿಸಿದರು.

ದೇಶದ ರಕ್ಷಣೆಯಲ್ಲಿ ಸೈನಿಕರ ಪಾತ್ರ ಪ್ರಮುಖವಾದದು. ಅವರು ಯುದ್ಧಕಾಲದಲ್ಲೂ, ಶಾಂತಿ ಕಾಲದಲ್ಲೂ ಸದಾ ರಾಷ್ಟ್ರ ಹಾಗೂ ನಮ್ಮ ರಕ್ಷಣೆಗೆ ಬೆನ್ನೆಲುಬಾಗಿ ಇರುತ್ತಾರೆ. ಅವರೆಲ್ಲರನ್ನೂ ನಾವು ಗೌರವಿಸಬೇಕು. ವೈದ್ಯರ ಸೇವೆಯೂ ಬಹಳ ಮುಖ್ಯವಾದದ್ದು. ಸೈನಿಕ, ವೈದ್ಯ, ಪತ್ರಿಕೋದ್ಯಮ ಈ ಮೂರು ಸಂಗಮದಂತೆ ಇದೆ. ಪತ್ರಿಕೋದ್ಯಮ ಸಾಕಷ್ಟು ಸಂಕಷ್ಟಗಳ, ಕವಲುದಾರಿಲಿ ಇದ್ದರೂ ಪತ್ರಿಕೋದ್ಯಮ ದೇಶದ ಪ್ರಜಾತಂತ್ರ ವ್ಯವಸ್ಥೆಗೆ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದು ನಂಜುಂಡಪ್ಪ ಹೇಳಿದರು.

ಈ ವೇಳೆಯಲ್ಲಿ ವಾರ್ತಾಭಾರತಿ ಹಿರಿಯ ಪತ್ರಕರ್ತ ಅಮ್ಜದ್ ಖಾನ್ ಎಂ., ಶರಣಯ್ಯ ಬಿ.ಒಡೆಯರ್, ಶಿವರಾಜ್ ಮೌರ್ಯ, ಶಿವಕುಮಾರ್ ಬೆನ್ನೂರು, ನಿಂಗಪ್ಪ ಗುದಿಗೇರ, ಗಿರೀಶ್ ಕೆ.ಆರ್, ವೆಂಕಟೇಶ ಸ್ವಾಮಿ, ಮುರಳಿ ಜಿ., ಸಿದ್ದನಗೌಡ ಎಚ್.ಪಾಟೀಲ್, ಅಮರೇಶ ಬಿ.ಕಲ್ಲೂರ, ವಿಜಯ್‍ಕುಮಾರ್ ವಿ, ರಾಘವೇಂದ್ರ ಅಡಿಗ ಎಚ್.ಎಸ್., ಚಂದ್ರಶೇಖರ್ ಜಿ., ಡಾ.ಪರ್ವಿಜ್ ಪಾಷಾ, ಟಿ.ಎಸ್.ಕೃಷ್ಣಮೂರ್ತಿ, ದರ್ಶನ್ ಹುಣಸೂರು, ನಟರಾಜ್ ಬಿ.ಪಿ, ಮೋಹನ್ ಕುಮಾರ್ ಎ.ವಿ, ವೆಂಕಟೇಶ್ ಪೈ, ಸೈಯದ್ ಅಸಾದುಲ್ಲಾ, ಮಲ್ಲಿಕಾರ್ಜುನ್, ಅಬ್ದುಲ್ ಹಲೀಮ್ ಮನ್ಸೂರ್, ಸತೀಶ್ ಕೃಷ್ಣ, ಸುಬೇಧಾರ್ ಶಾಂತಶೀಲನ್ ಎಂ, ಲೇಡಿ ಮಾಸ್ಟರ್ ಜಿ.ಸಾಯಿಪ್ರಭ, ಕಿರಣ್ ಪ್ರಸಾದ ಜೆ., ಧನ್ವೀರ್ ಕೆ.ಭಟ್ ಅವರನ್ನು ‘ಮಾಧ್ಯಮ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸುಬೇಧಾರ್ ಡಾ.ಕುಮಾರಸ್ವಾಮಿ, ಪತ್ರಕರ್ತ ಗಂಡಸಿ ಸದಾನಂದಸ್ವಾಮಿ, ಕ್ಷೀರಜ ಹಿರಿಯ ನಾಗರಿಕ ಮಹಿಳಾ ಸಮಾಜದ ಅಧ್ಯಕ್ಷೆ ಸುನೀತಾ ನಾಗೇಶ್, ನಟರಾದ ಸ್ವರಾಜ್ ಶೆಟ್ಟಿ, ಅಂಕಿತ, ಪತ್ರಕರ್ತೆ ರೂಪಾ, ಆಯೋಜಕ ಕಿಶೋರ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News