Bengaluru | ಪ್ರತಿಭಟನೆ ವೇಳೆ ಉಮರ್ ಖಾಲಿದ್ ಪರ ಭಿತ್ತಿಪತ್ರ ಪ್ರದರ್ಶನ: ಯುವತಿ ವಿರುದ್ಧ ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
ಬೆಂಗಳೂರು : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ನಗರದ ಫ್ರೀಡಂ ಪಾರ್ಕ್ನಲ್ಲಿ ನಡೆದ ಪ್ರತಿಭಟನೆ ವೇಳೆ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಪರ ಭಿತ್ತಿಪತ್ರ ಪ್ರದರ್ಶಿಸಿದ್ದ ಯುವತಿ ವಿರುದ್ಧ ಇಲ್ಲಿನ ಉಪ್ಪಾರಪೇಟೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜು.24ರಂದು ಪ್ರತಿಭಟನೆಯ ವೇಳೆ ಭದ್ರತಾ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ಯುವತಿಯ ವಿರುದ್ಧ ‘ಗಲಭೆ ಉದ್ದೇಶದಿಂದ ಪ್ರಚೋದನೆ’ ನೀಡುವ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಯುವತಿಯು ಪ್ರದರ್ಶಿಸಿದ್ದ ಭಿತ್ತಿಪತ್ರ, ಅಲ್ಲಿದ್ದ ಪೊಲೀಸರ ಗಮನ ಸೆಳೆದಿತ್ತು. ತಕ್ಷಣವೇ ಪೊಲೀಸರು ಭಿತ್ತಿಪತ್ರ ವಶಪಡಿಸಿಕೊಂಡಿದ್ದರು. ಇದೇ ವೇಳೆ ಅಲ್ಲಿದ್ದ ಕೆಲ ವಿದ್ಯಾರ್ಥಿಗಳು ಆಕೆಯ ನಡೆಯನ್ನು ಖಂಡಿಸಿ, ಪ್ರತಿಭಟನಾ ಸ್ಥಳದಿಂದ ಕಳುಹಿಸಿದ್ದರು ಎಂದು ವರದಿಯಾಗಿತ್ತು. ಸದ್ಯ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಪರ ಭಿತ್ತಿಪತ್ರ ಪ್ರದರ್ಶಿಸಿದ್ದ ಯುವತಿ ವಿರುದ್ಧ ಪ್ರಕರಣ ದಾಖಲಾಗಿದೆ.