ಹೆಬ್ಬಾಳದ ಪಶು ವಿವಿ ಆವರಣದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ : ಬೈರತಿ ಸುರೇಶ್
ಬೆಂಗಳೂರು, ಸೆ.1: ಹೆಬ್ಬಾಳ ಕ್ಷೇತ್ರದ ನಾಗರಿಕರಿಗಾಗಿ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ ಆವರಣದಲ್ಲಿ ಸುಸಜ್ಜಿತವಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವ ಸಂಬಂಧ ಕ್ಷೇತ್ರದ ಶಾಸಕರೂ ಆಗಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಸೋಮವಾರ ಆಸ್ಪತ್ರೆಗೆ ನಿಗದಿಪಡಿಸುವ ಜಾಗದ ಪರಿಶೀಲನೆ ನಡೆಸಿದರು.
ಹಲವು ದಶಕಗಳಿಂದಲೂ ಕ್ಷೇತ್ರಕ್ಕೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಬೇಡಿಕೆ ಹೆಬ್ಬಾಳದ ನಾಗರಿಕರದ್ದಾಗಿತ್ತು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಚರ್ಚಿಸಿ ಸಭೆಗಳನ್ನೂ ನಡೆಸಲಾಗಿತ್ತು. ಕ್ಷೇತ್ರದ ಅಗತ್ಯತೆಯನ್ನು ಮನಗಂಡ ಮುಖ್ಯಮಂತ್ರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲು 200 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದ್ದಾರೆ ಎಂದು ಸಚಿವರು ತಿಳಿಸಿದರು.
ಕ್ಷೇತ್ರದ ಪ್ರತಿಯೊಬ್ಬ ಬಡ ಜನರಿಗೆ ಸುಲಭ ಮತ್ತು ಉಚಿತವಾಗಿ ಚಿಕಿತ್ಸೆಗಳು ದೊರೆಯಬೇಕೆಂಬುದು ಸರಕಾರದ ಆಶಯವಾಗಿದೆ. ಇಲ್ಲಿನ ಜನರು ಹೆಚ್ಚಿನ ಚಿಕಿತ್ಸೆಗಾಗಿ ಕಿದ್ವಾಯಿ, ಜಯದೇವದಂತಹ ದೂರವಿರುವ ಹಲವಾರು ಸರಕಾರಿ ಆಸ್ಪತ್ರೆಗಳಿಗೆ ಹೋಗಬೇಕಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ಷೇತ್ರಕ್ಕೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭವಾಗಲಿದೆ ಎಂದು ಅವರು ತಿಳಿಸಿದರು.
ಶೀಘ್ರದಲ್ಲೇ ಶಿಲಾನ್ಯಾಸ: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಎಲ್ಲ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಆವರಣದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಸುತ್ತಮುತ್ತಲಿನ ಎಲ್ಲ ವರ್ಗದ ಜನರಿಗೆ ಈ ಜಾಗ ಹತ್ತಿರವಾಗಲಿದೆ. ಈ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಸದ್ಯದಲ್ಲೆ ಶಿಲಾನ್ಯಾಸ ನೆರವೇರಲಿದ್ದು, ಹಂತಹಂತವಾಗಿ ಆಸ್ಪತ್ರೆ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಬೈರತಿ ಸುರೇಶ್ ಹೇಳಿದರು.
ಅತ್ಯುತ್ತಮ ಗುಣಮಟ್ಟದಲ್ಲಿ ಆಸ್ಪತ್ರೆ ಕಟ್ಟಡವನ್ನು ನಿರ್ಮಾಣ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಯಾವುದೇ ಲೋಪವಾಗದ ರೀತಿಯಲ್ಲಿ ಕಾಮಗಾರಿಯನ್ನು ಕೈಗೊಂಡು ರಾಜ್ಯದಲ್ಲಿ ಅತ್ಯುತ್ತಮ ಮತ್ತು ಅತ್ಯತ್ಕøಷ್ಠ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮಾಡಲು ಸಂಕಲ್ಪ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಏನೆಲ್ಲಾ ಸೌಲಭ್ಯ?: ಈ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸಾ ಯಂತ್ರೋಪಕರಣಗಳು, ಡಯಾಲಿಸಿಸ್, ಹೃದ್ರೋಗ, ಮಹಿಳಾ ಮತ್ತು ಮಕ್ಕಳ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ, ತಜ್ಞ ವೈದ್ಯರು ಮತ್ತು ಶುಶ್ರೂಕರ ತಂಡ ಸೇರಿದಂತೆ ಹತ್ತು ಹಲವಾರು ಚಿಕಿತ್ಸಾ ಸೌಲಭ್ಯಗಳು ಕ್ಷೇತ್ರದ ಜನತೆಗೆ ದೊರೆಯಲಿವೆ ಎಂದು ಸುರೇಶ್ ಹೇಳಿದರು.