‘ಕಾಯಕ ಗ್ರಾಮ ಯೋಜನೆ’ : ದುರ್ಬಲ ಗ್ರಾ.ಪಂ.ಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಸಚಿವ ಪ್ರಿಯಾಂಕ್ ಖರ್ಗೆ ಕರೆ
ಬೆಂಗಳೂರು : ಜಿಲ್ಲೆಗಳಲ್ಲಿ ಅತ್ಯಂತ ದುರ್ಬಲವಾಗಿರುವ ಗ್ರಾಮ ಪಂಚಾಯತಿಯನ್ನು ಆರಿಸಿಕೊಂಡು ಅವುಗಳ ಸಮಗ್ರ ಅಭಿವೃದ್ಧಿ ಸಲುವಾಗಿ ರಾಜ್ಯದ ಎಲ್ಲ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ‘ಕಾಯಕ ಗ್ರಾಮ’ ಯೋಜನೆಯಡಿ ದತ್ತು ಸ್ವೀಕಾರ ಮಾಡಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕರೆ ನೀಡಿದರು.
ಗುರುವಾರ ನಗರದಲ್ಲಿ ಗ್ರಾಮೀಣ ನೀರು ಸರಬರಾಜು ಇಲಾಖೆ ‘ಗ್ರಾಮೀಣ ಕರ್ನಾಟಕದ ಕುಡಿಯುವ ನೀರು ಸರಬರಾಜು ಸ್ಥಿಗತಿ’ಗಳ ಕುರಿತು ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಂಜನಿಯರ್ಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಗ್ರಾಮಗಳಲ್ಲಿ ಸುಸ್ಥಿರ ಜಲ ಹಾಗೂ ಸುಸ್ಥಿರ ವಿದ್ಯುತ್ ಸರಬರಾಜು ಮಾಡುವ ಮಹತ್ತರ ಆಶಯವನ್ನು ಈ ಬಾರಿ ಕಾರ್ಯಗತಗೊಳಿಸಲು ಮೊದಲ ಹೆಜ್ಜೆ ಇರಿಸಲಾಗಿದ್ದು, ಗ್ರಾಮಗಳ ಸುಧಾರಣೆ, ಆರ್ಥಿಕ ಸುಸ್ಥಿರತೆಯ ಬಗ್ಗೆ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸ್ವತಂತ್ರವಾಗಿ ಯೋಚನೆ ಮಾಡಬೇಕು, ಪ್ರವಾಸಿ ಸ್ಥಳಗಳಲ್ಲಿನ ಗ್ರಾಮ ಪಂಚಾಯತಿ ಆಸ್ತಿಗಳನ್ನು ವರಮಾನ ಮೂಲ ಆಸ್ತಿಗಳನ್ನಾಗಿಸಬೇಕು ಎಂದು ಅವರು ಸಲಹೆ ನೀಡಿದರು.
ದೇಶದಲ್ಲಿನ ಪಂಚಾಯತ್ ಸಂಸ್ಥೆಗಳಲ್ಲಿ ಕರ್ನಾಟಕ ಅಳವಡಿಸಿಕೊಂಡಿರುವ ಪದ್ಧತಿಗಳನ್ನು ಗುರುತಿಸಿ ಕೇಂದ್ರ ಸರಕಾರ ಪ್ರಥಮ ಸ್ಥಾನ ನೀಡಿದೆ, ಈ ಬಾರಿ ಗ್ರಾಮ ಪಂಚಾಯತಿಗಳಲ್ಲಿ 1271 ಕೋಟಿ ರೂ.ಆಸ್ತಿ ತೆರಿಗೆ ಸಂಗ್ರಹಿಸುವ ಮೂಲಕ ಅತಿ ಹೆಚ್ಚು ಕರಸಂಗ್ರಹಣೆಯ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದ ಪ್ರಿಯಾಂಕ್ ಖರ್ಗೆ, ಈ ಎರಡೂ ಸಾಧನೆಗಳಿಗೆ ಸಾರಥ್ಯವಹಿಸಿದ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಶ್ಲಾಘಿಸಿದರು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ರಾಜ್ಯದಲ್ಲಿ ನದಿ ನೀರಿನ ಮೂಲಗಳನ್ನು ಅವಲಂಭಿಸಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಅನುμÁ್ಠನ ಮಾಡಲಾಗುತ್ತಿದ್ದು, ಮಳೆಗಾಲ ಹೊರತುಪಡಿಸಿ ಇತರೆ ಸಮಯದಲ್ಲಿ ನದಿಗಳಲ್ಲಿ ನದಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗುವ ಕಾರಣ ನಿರಂತರ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗುವ ಸಂಭವವಿರುತ್ತದೆ ಎಂದು ಹೇಳಿದರು.
ನೀರಿನ ಸೋರಿಕೆಯಿಂದಾಗಿ ನೀರು ಕಲುಷಿತವಾಗುವ ಸಂಭವ ಹೆಚ್ಚಿರುತ್ತದೆ, ಇದರಿಂದ ಜನರಲ್ಲಿ ಆನಾರೋಗ್ಯ ಆಗುವ ಕಾರಣ ನಿಯಮಿತವಾಗಿ ನೀರನ್ನು ಪರೀಕ್ಷೆ ಮಾಡಿ ಸರಬರಾಜು ಮಾಡಬೇಕು, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಿಯಮಿತವಾಗಿ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಕಾರ್ಯಗಾರವನ್ನು ಉದ್ದೇಶಿಸಿ ಪ್ರಾಸ್ತವಿಕವಾಗಿ ಮಾತನಾಡಿದ ಮುಖ್ಯ ಎಂಜಿನಿಯರ್ ಏಜಾಝ್ ಹುಸೇನ್, ರಾಜ್ಯದಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಅನುಷ್ಠಾನ ಮತ್ತು ಪ್ರಗತಿ ಕುರಿತು ಮಾಹಿತಿ ನೀಡಿದರು.
ಡಿಎಸ್ಎಸ್(ಡಿಶಿಷನ್ ಸಪೊರ್ಟ್ ಸಿಸ್ಟಂ) ಅನುಷ್ಠಾನ ಮತ್ತು ಕಾರ್ಯಾಚರಣೆ ತರಬೇತಿ ಮತ್ತು ಮುಂದಿನ ಹಂತಗಳಿಂದ ಒಳನೋಟಗಳ ಕುರಿತು ಅಮೆರಿಕ ಆಕ್ಸ್ಪರ್ಡ್ ವಿಶ್ವವಿದ್ಯಾಲಯದ ಪ್ರೊ.ರಾಬರ್ಟ್ ಹೊಪ್ ವಿಷಯ ಮಂಡನೆ ಮಾಡಿದರು. ನಿರ್ವಹಣಾ ಕ್ರಮಗಳು ಮತ್ತು ಒಪ್ಪಂದದ ಮೇಲ್ವಿಚಾರಣೆಗಾಗಿ ಡಿಎಸ್ಎಸ್ ಮತ್ತು ಬಳಕೆಯ ಡೇಟಾ ಅಗತ್ಯತೆಗಳು ಮತ್ತು ವರದಿ ಮಾಡುವ ಪ್ರಕ್ರಿಯೆ ಕುರಿತು ಟೆಕ್ನಿಕಲ್ ಲೀಡ್ ಆಫ್ ಟೈಮ್ ಗ್ಲೊಬಲ್ ಡಂಕನ್ ಮ್ಯಾಕ್ನಿಕ್ಹೊಲ್ ವಿಷಯ ಮಂಡಿಸಿದರು.
ದಾವಣಗೆರೆ ಸಿಇಒ ಡಾ.ಸುರೇಶ್ ಬಿ.ಇತ್ನಾಳ್, ಮಂಡ್ಯ ಸಿಇಒ ಕೆ.ಆರ್.ನಂದಿನಿ, ಗದಗ ಸಿಇಒ ಎಸ್.ಭರತ್, ಬೆಳಗಾವಿ ಸಿಇಒ ಶಿಂಧೆ, ಗ್ರಾಮೀಣ ನೀರು ಸರಬರಾಜು ಕುರಿತಂತೆ ವಿವಿಧ ವಿಷಯಗಳ ಬಗ್ಗೆ ವಿಷಯ ಮಂಡಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಝ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.