Mysuru| ನಾಲೆಯಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿ ಮುಳುಗಿ ಸಾವು
ಸಾಂದರ್ಭಿಕ ಚಿತ್ರ
ಮೈಸೂರು : ಹುಲ್ಲಹಳ್ಳಿ ನಾಲೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನಲ್ಲಿ ನಡೆದಿರುವುದು ವರದಿಯಾಗಿದೆ.
ದರ್ಶನ್ (21) ಮೃತ ವಿದ್ಯಾರ್ಥಿ. ಈತ ಮೈಸೂರಿನ ಕಾವೇರಿ ಕಾಲೇಜಿನಲ್ಲಿ ಡಿ.ಫಾರ್ಮ ವಿದ್ಯಾಭ್ಯಾಸ ಮಾಡುತ್ತಿದ್ದ ಎನ್ನಲಾಗಿದೆ.
ರವಿವಾರ ರಜಾ ಇರುವ ಕಾರಣ ತನ್ನ ನಾಲ್ವರು ಸ್ನೇಹಿತರೊಂದಿಗೆ ನಂಜನಗೂಡು ಸಮೀಪದಲ್ಲಿರುವ ದೇಬೂರು ಗ್ರಾಮದ ಬಳಿಯ ಕಬಿನಿ ಹುಲ್ಲಹಳ್ಳಿ ನಾಲೆಯಲ್ಲಿ ಮಧ್ಯಾಹ್ನ ಈಜಲು ಹೋಗಿದ್ದಾರೆ. ಈ ವೇಳೆ ದರ್ಶನ್ ನೀರಿನಲ್ಲಿ ಮುಳುಗಿದವನು ಮತ್ತೆ ಮೇಲೆ ಬರಲಿಲ್ಲ ಎನ್ನಲಾಗಿದೆ. ಜೊತೆಯಲ್ಲಿದ್ದ ಸ್ನೇಹಿತರು ಗಾಬರಿಯಾಗಿ ಅಕ್ಕಪಕ್ಕದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದವರಿಗೆ ವಿಷಯ ಮುಟ್ಟಿಸಿದ್ದಾರೆ. ಅಷ್ಟರಲ್ಲಾಗಲೆ ದರ್ಶನ್ ಸಾವನ್ನಪ್ಪಿರುವುದು ತಿಳಿದು ಬಂದಿದೆ.
ಬಳಿಕ ಕುಟುಂಬದವರು ಆಗಮಿಸಿ ಅಗ್ನಿಶಾಮಕ ಸಿಬ್ಬಂದಿ ಮತ್ತು ನುರಿತ ಈಜುಗಾರರ ಸಹಾಯದಿಂದ ಮೃತದೇಹವನ್ನು ಮೇಲೆತ್ತಲಾಗಿದೆ.
ಮೃತ ದರ್ಶನ್ ನಂಜನಗೂಡು ನಗರದ ಚಾಮಲಾಪುರ ಹುಂಡಿ ಬಳಿಯ ಎನ್ಜಿಒ ಕಾಲನಿ ನಿವಾಸಿ ನೆಸ್ಲೆ ಕಂಪೆನಿ ನೌಕರ ಯೋಗೀಶ ಮತ್ತು ಪ್ರೇಮಾ ದಂಪತಿಯ ಪುತ್ರನಾಗಿದ್ದಾನೆ.
ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.