ಆ.3ರಿಂದ ಬೆಂಗಳೂರಿನಲ್ಲಿ ಇಂಡಿಯಾ ನ್ಯಾನೋ ಸಮಾವೇಶ : ಸಚಿವ ಪ್ರಿಯಾಂಕ್ ಖರ್ಗೆ

Update: 2026-07-25 20:03 IST

ಬೆಂಗಳೂರು : ನ್ಯಾನೋ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ದೇಶದ ಅತಿದೊಡ್ಡ ಹಾಗೂ ಸಮಗ್ರ ಸ್ವರೂಪದ ಅಂತಾರಾಷ್ಟ್ರೀಯ ಸಮ್ಮೇಳನ ಮತ್ತು ಪ್ರದರ್ಶನವಾಗಿರುವ ಬೆಂಗಳೂರು ಇಂಡಿಯಾ ನ್ಯಾನೋ ಸಮಾವೇಶದ 14ನೆ ಆವೃತ್ತಿಯು ಆ.3ರಿಂದ ಮೂರು ದಿನಗಳ ಕಾಲ ನಗರದ ದಿ ಲಲಿತ್ ಹೋಟೆಲ್‍ನಲ್ಲಿ ನಡೆಯಲಿದೆ ಎಂದು ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನ್ಯಾನೋ ತಂತ್ರಜ್ಞಾನವು ಕೃತಕ ಬುದ್ಧಿಮತ್ತೆ ಸೇರಿದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳ ಜೊತೆಗೆ ವೇಗವಾಗಿ ಬೆರೆಯುತ್ತಿರುವ ಹೊಸ ಬೆಳವಣಿಗೆಯನ್ನು ಇದು ಸೂಚಿಸುತ್ತದೆ. ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯ ಪ್ರಮುಖ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ದೇಶ ವಿದೇಶಗಳ ಖ್ಯಾತ ವಿಜ್ಞಾನಿಗಳು, ಕೈಗಾರಿಕಾ ವಲಯದ ಪ್ರಮುಖರು, ನವೋದ್ಯಮ ಸಂಸ್ಥೆಗಳು, ಹೂಡಿಕೆದಾರರು, ನೀತಿ ನಿರೂಪಕರು ಹಾಗೂ ತಂತ್ರಜ್ಞಾನ ಕ್ಷೇತ್ರದ ಪರಿಣಿತರು ಒಂದೇ ವೇದಿಕೆಯಡಿ ಚಿಂತನ-ಮಂಥನ ನಡೆಸಲಿದ್ದಾರೆ ಎಂದರು.

ಆ.3ರಂದು ಸಮ್ಮೇಳನ ಪೂರ್ವ ವಿಶೇಷ ಕಾರ್ಯಾಗಾರಕ್ಕೆ ಚಾಲನೆ ದೊರೆಯಲಿದೆ. ಈ ದಿನ ನ್ಯಾನೋ ತಯಾರಿಕೆ, ನ್ಯಾನೋ ವಿಶ್ಲೇಷಣೆ ಹಾಗೂ ಜೈವಿಕ ವಿಜ್ಞಾನದಲ್ಲಿ ನ್ಯಾನೋ ತಂತ್ರಜ್ಞಾನದ ಬಳಕೆ ಕುರಿತು ತಜ್ಞರ ಮಾರ್ಗದರ್ಶನದಲ್ಲಿ ಪ್ರಾಯೋಗಿಕ ತರಬೇತಿ ಕಾರ್ಯಾಗಾರಗಳು ನಡೆಯಲಿವೆ. ಆ.4 ಮತ್ತು 5ರಂದು ಮುಖ್ಯ ಸಮ್ಮೇಳನ ನಡೆಯಲಿದ್ದು, ನ್ಯಾನೋ ತಂತ್ರಜ್ಞಾನದ ಸಂಶೋಧನೆ ಹಾಗೂ ವಾಣಿಜ್ಯೀಕರಣದ ಅತ್ಯಂತ ಭರವಸೆಯ ಮೂರು ಪ್ರಮುಖ ಕ್ಷೇತ್ರಗಳಾದ ಸೆಮಿಕಂಡಕ್ಟರ್, ಕೃಷಿ ಮತ್ತು ಆರೋಗ್ಯ ಮತ್ತು ಇಂಧನ ಮತ್ತು ಪರಿಸರ ಕ್ಷೇತ್ರಗಳಲ್ಲಿ ನ್ಯಾನೋ ತಂತ್ರಜ್ಞಾನ ಎಂಬ ವಿಷಯಗಳ ಮೇಲೆ ವಿಶೇಷ ಗಮನ ಹರಿಸಲಾಗುತ್ತದೆ. ಸಮಾವೇಶದ ಧ್ಯೇಯವಾಗಿರುವ ನಾವೀನ್ಯತೆಗಳ ವಾಣಿಜ್ಯೀಕರಣಕ್ಕೆ ಅನುಗುಣವಾಗಿ, ನವೋದ್ಯಮ ಸಂಸ್ಥೆಗಳು ಹಾಗೂ ತಂತ್ರಜ್ಞಾನ ಉದ್ಯಮಿಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ಕಾರ್ಯಕ್ರಮದ ಮೂಲಕ ನವೋದ್ಯಮ ಸಂಸ್ಥೆಗಳು ತಮ್ಮ ಅತ್ಯಾಧುನಿಕ ಆವಿಷ್ಠಾರಗಳನ್ನು ಪ್ರದರ್ಶಿಸುವುದರ ಜೊತೆಗೆ, ಹೂಡಿಕೆದಾರರನ್ನು ಭೇಟಿ ಮಾಡುವ, ಕೈಗಾರಿಕಾ ವಲಯದ ಪ್ರಮುಖರೊಂದಿಗೆ ಸಂಪರ್ಕ ಬೆಳೆಸುವ ಹಾಗೂ ವಾಣಿಜ್ಯೀಕರಣ ಮತ್ತು ಸಹಭಾಗಿತ್ವದ ಅವಕಾಶಗಳನ್ನು ಅನ್ವೇಷಿಸುವ ಅವಕಾಶ ಪಡೆಯಲಿವೆ ಎಂದ ಅವರು, ಪರಸ್ಪರ ಸಹಭಾಗಿತ್ವ ಉತ್ತೇಜಿಸುವುದರ ಜೊತೆಗೆ, ಅತ್ಯಾಧುನಿಕ ಸಂಶೋಧನೆಗಳನ್ನು ಪರಿಚಯಿಸಿ, ನ್ಯಾನೋ ತಂತ್ರಜ್ಞಾನ ಆಧಾರಿತ ಆವಿಷ್ಠಾರಗಳ ವಾಣಿಜ್ಯೀಕರಣಕ್ಕೆ ವೇಗ ನೀಡುವುದಕ್ಕೆ ಈ ಸಮಾವೇಶವು ಕಾರ್ಯನಿರ್ವಹಿಸಲಿದೆ ಎಂದೂ ಉಲ್ಲೇಖಿಸಿದರು.

ಇಲಾಖೆಯ ಕಾರ್ಯದರ್ಶಿ ಡಾ.ಮಂಜುಳಾ ಮಾತನಾಡಿ, ನ್ಯಾನೋ ನಾವೀನ್ಯತೆ ಪ್ರಶಸ್ತಿಯ ಮೂಲಕ ಭರವಸೆಯ ನವೋದ್ಯಮಗಳು ಹಾಗೂ ನ್ಯಾನೋ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸತನದ ಕೊಡುಗೆ ನೀಡುತ್ತಿರುವ ಸಾಧಕರನ್ನು ಸಮಾವೇಶದಲ್ಲಿ ಗೌರವಿಸಲಾಗುವುದು. ಜತೆಗೆ, ಯುವಕರಿಗಾಗಿ ನ್ಯಾನೋ ಕಾರ್ಯಕ್ರಮ, ನ್ಯಾನೋ ತಂತ್ರಜ್ಞಾನ ರಸಪ್ರಶ್ನೆ ಹಾಗೂ ಬಹು ನಿರೀಕ್ಷಿತ ಸಂಶೋಧನೆಯ ಪಥ’ ಸಂಶೋಧನಾ ಪ್ರಬಂಧ ಮಂಡನೆ ಮೂಲಕ ಉದಯೋನ್ಮುಖ ಸಂಶೋಧಕರಿಗೆ ತಮ್ಮ ಹೊಸ ಆಲೋಚನೆಗಳನ್ನು ಮಂಡಿಸುವ, ಪರಿಣಾಮಕಾರಿ ಸಂಶೋಧನೆಗಳನ್ನು ಪ್ರದರ್ಶಿಸುವ ಹಾಗೂ ಶೈಕ್ಷಣಿಕ ವಲಯ ಮತ್ತು ಕೈಗಾರಿಕಾ ಕ್ಷೇತ್ರದ ತಜ್ಞರೊಂದಿಗೆ ನೇರವಾಗಿ ಸಂವಾದ ನಡೆಸುವ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಸಮಾವೇಶದಲ್ಲಿ 26ಕ್ಕೂ ಹೆಚ್ಚು ಸಭೆಗಳು, 200ಕ್ಕೂ ಹೆಚ್ಚು ವೈಜ್ಞಾನಿಕ ಸಂಶೋಧನಾ ಪ್ರಬಂಧಗಳ ಪ್ರದರ್ಶನ, 80ಕ್ಕೂ ಹೆಚ್ಚು ತಜ್ಞ ಭಾಷಣಕಾರರು, 1,000ಕ್ಕೂ ಹೆಚ್ಚು ಪ್ರತಿನಿಧಿಗಳು, 10ಕ್ಕೂ ಹೆಚ್ಚು ದೇಶಗಳ ಭಾಗವಹಿಸುವಿಕೆ, 50ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News