×
Ad

ಮಾಯಸಂದ್ರ ನಾಡಕಚೇರಿ ಗ್ರಾಮ ಸಹಾಯಕನ ಲಂಚ ವ್ಯವಹಾರದ ವೀಡಿಯೊ ವೈರಲ್

ಸಮಗ್ರ ತನಿಖೆಗೆ ಆಗ್ರಹಿಸಿ ತಹಶೀಲ್ದಾರ್‌ಗೆ ಕೆಆರ್‌ಎಸ್ ನಿಯೋಗ ದೂರು

Update: 2026-07-09 23:45 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ತುರುವೇಕೆರೆ ತಾಲೂಕಿನ ಮಾಯಸಂದ್ರ ನಾಡಕಚೇರಿಯ ಗ್ರಾಮ ಸಹಾಯಕ ರಂಗಸ್ವಾಮಿ ಎಂಬಾತನ ವಿರುದ್ಧ ಸಾಲು, ಸಾಲು ಲಂಚದ ಆರೋಪಗಳು ಕೇಳಿಬಂದಿದ್ದು, ಅಲ್ಲದೆ, ಈತ ಖಾತೆ ಸಂಬಂಧ 3 ಲಕ್ಷ ರೂ. ಲಂಚದ ಅವ್ಯವಹಾರದಲ್ಲಿ ಕೆಆರ್‌ಎಸ್ ಕಾರ್ಯಕರ್ತನನ್ನು ಸಿಲುಕಿಸಲು ಯತ್ನಿಸುತ್ತಿರುವ ವೀಡಿಯೊ ವೈರಲ್ ಆದ ಹಿನ್ನೆಲೆ ಇದೆಲ್ಲದರ ಕುರಿತಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಕೆಆರ್‌ಎಸ್ ಪಕ್ಷದ ಎಸ್ಸಿಎಸ್ಟಿ ಘಟಕದ ರಾಜ್ಯ ಕಾರ್ಯದರ್ಶಿ ಸಿ.ಚನ್ನಯ್ಯ ಅವರ ನೇತೃತ್ವದ ನಿಯೋಗ ಗುರುವಾರ ತಹಶೀಲ್ದಾರ್‌ಗೆ ದೂರು ಸಲ್ಲಿಸಿದೆ.

ಗುರುವಾರ ಮಧ್ಯಾಹ್ನ ತುರುವೇಕೆರೆ ತಾಲೂಕು ಕಚೇರಿಗೆ ಭೇಟಿ ನೀಡಿ ತಹಶೀಲ್ದಾರ್ ಕುಂಇ ಅಹ್ಮದ್ ಅವರಿಗೆ ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಚನ್ನಯ್ಯ, ಮಾಯಸಂದ್ರ ಹೋಬಳಿಯ ನಾಡಕಚೇರಿಯಲ್ಲಿ ಗ್ರಾಮ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿರುವ ಮಲ್ಲೂರು ಗ್ರಾಮದ ರಂಗಸ್ವಾಮಿ ಎಂಬವರು ರೈತರ ಜಮೀನಿನ ಖಾತೆ ಸಂಬಂಧಿತ ಕೆಲಸಕ್ಕಾಗಿ 3 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದು ಹಾಗೂ ಈ ಪ್ರಕರಣದಲ್ಲಿ ನನಗೂ ಆಮಿಷವೊಡ್ಡಲು ಮುಂದಾಗಿರುವುದು ಆಡಿಯೋದಲ್ಲಿ ವ್ಯಕ್ತವಾಗಿದೆ ಎಂದು ತಿಳಿಸಿದರು.

ರೈತರೊಬ್ಬರ ಜಮೀನನ್ನು ಖಾತೆ ಮಾಡಿಸಿಕೊಡಲು ಲಕ್ಷಾಂತರ ರೂ ಲಂಚವನ್ನು ಪೀಕಲು ಯತ್ನಿಸುತ್ತಿರುವ ಆರೋಪಿ ರಂಗಸ್ವಾಮಿ, ಈ ಅವ್ಯವಹಾರದಲ್ಲಿ ನನ್ನ ಹೆಸರನ್ನು ದುರುದ್ದೇಶಪೂರ್ವಕವಾಗಿ ಎಳೆದು ತಂದು, ನನ್ನ ಘನತೆ ಮತ್ತು ಮಾನಹಾನಿಗೆ ಕಾರಣವಾಗುವ ರೀತಿಯಲ್ಲಿ ಮಾತನಾಡಿರುವುದು ಆಡಿಯೊ ಸಂಭಾಷಣೆಯಲ್ಲಿದೆ ಎಂದು ಸಿ.ಚನ್ನಯ್ಯ ಹೇಳಿದರು.

ಇದಲ್ಲದೆ, ಮಲ್ಲೂರು ಗ್ರಾಮದ ಸರಕಾರಿ ಅಮಾನಿಕೆರೆಯಲ್ಲಿ ಅಕ್ರಮವಾಗಿ ಮಣ್ಣು ಹೊಡೆಯುವವರೊಂದಿಗೆ ಆರೋಪಿ ರಂಗಸ್ವಾಮಿ ಶಾಮೀಲಾಗಿ ಹಣ ಪಡೆದು, ಈ ಭ್ರಷ್ಟಾಚಾರ ಕೂಟದಲ್ಲಿ ಪಾಲ್ಗೊಂಡು ಅಕ್ರಮವೆಸಗಿರುವ ವಿಡಿಯೋ ಹಾಗೂ ಆಡಿಯೋ ಸಹಿತ ದಾಖಲೆಗಳು ಲಭ್ಯವಿದೆ. ರಂಗಸ್ವಾಮಿಯ ಲಂಚಗುಳಿತನಕ್ಕೆ ಸಿಲುಕಿ ಮಾಯಸಂದ್ರ ಹೋಬಳಿ ವ್ಯಾಪ್ತಿಯ ಅನೇಕ ಸಂತ್ರಸ್ತ ರೈತರು ನೊಂದಿದ್ದು, ಈಗೀಗ ದೂರುಗಳನ್ನು ನೀಡುತ್ತಿದ್ದಾರೆ ಎಂದು ಸಿ.ಚನ್ನಯ್ಯ ತಿಳಿಸಿದರು.

ಆದ್ದರಿಂದ, ಈ ಪ್ರಕರಣದ ಕುರಿತು ಸಮಗ್ರ ಹಾಗೂ ನಿಷ್ಪಕ್ಷ ತನಿಖೆ ನಡೆಸಿ, ಆಡಿಯೋ ಸಂಭಾಷಣೆ ಹಾಗೂ ಲಭ್ಯವಿರುವ ವೀಡಿಯೊ ದಾಖಲೆಗಳ ಸತ್ಯಾಸತ್ಯತೆ ಪರಿಶೀಲಿಸಿ, ಆರೋಪಗಳು ದೃಢಪಟ್ಟಲ್ಲಿ ಗ್ರಾಮ ಸಹಾಯಕ ರಂಗಸ್ವಾಮಿ ವಿರುದ್ಧ ಸೂಕ್ತ ಕ್ರಿಮಿನಲ್ ಪ್ರಕರಣ ದಾಖಲಿಸಿ, ಸರಕಾರಿ ಸೇವಾ ನಿಯಮಾನುಸಾರ ಇಲಾಖಾ ಶಿಸ್ತು ಕ್ರಮ ಕೈಗೊಂಡು ಸೇವೆಯಿಂದ ವಜಾಗೊಳಿಸುವಂತೆ ತಹಶೀಲ್ದಾರ್‌ಗೆ ಒತ್ತಾಯಿಸಿದ್ದೇವೆ ಎಂದು ಸಿ.ಚನ್ನಯ್ಯ ತಿಳಿಸಿದರು.

ದೂರನ್ನು ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಕುಂಇ ಅಹ್ಮದ್, ಕೂಡಲೇ ಪ್ರಕರಣವನ್ನು ತನಿಖೆಗೆ ಸೂಚಿಸಿ ತಪ್ಪಿತಸ್ಥನ ವಿರುದ್ಧ ಕ್ರಮ ಜರುಗಿಸುತ್ತೇನೆ ಎಂದು ಭರವಸೆ ನೀಡಿದರು.

ಈ ವೇಳೆ ಕೆಆರ್‌ಎಸ್ ಪಕ್ಷದ ತುರುವೇಕೆರೆ ತಾಲೂಕು ಅಧ್ಯಕ್ಷ ಸುರೇಶ್, ತುಮಕೂರು ಗ್ರಾಮಾಂತರ ತಾಲೂಕು ಅಧ್ಯಕ್ಷ ಗೋವಿಂದರಾಜು, ಕಾರ್ಯಕರ್ತರಾದ ಅರುಣ್‌ಕುಮಾರ್, ಭಾಗ್ಯಮ್ಮ, ತಿಮ್ಮಪ್ಪ, ಕೀರ್ತಿಕುಮಾರ್, ಹರೀಶ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News