BELAGAVI | ಕುಟುಂಬದ ವಿರೋಧ ಹಿನ್ನೆಲೆ: ಅಂಬೇಡ್ಕರ್ ಪ್ರತಿಮೆ ಎದುರು ವಿವಾಹವಾದ ಪ್ರೇಮಿಗಳು
Update: 2026-01-03 10:52 IST
ಬೆಳಗಾವಿ: ಕುಟುಂಬಸ್ಥರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ನಗರದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಎದುರು ವಿವಾಹವಾಗಿರುವ ಘಟನೆ ಶುಕ್ರವಾರ ಬೆಳಗಾವಿಯಲ್ಲಿ ನಡೆದಿದೆ.
ನವಲಗುಂದ ತಾಲೂಕಿನ ಶಾನವಾಡ ಗ್ರಾಮದ ಬಸವರಾಜ ನಡುವಿನಮನಿ ಹಾಗೂ ಅಶ್ವಿನಿ ಮಾದರ ಈ ರೀತಿ ಸತಿಪತಿಗಳಾದ ಪ್ರೇಮಿಗಳು.
ಇವರಿಬ್ಬರು ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಬಸವರಾಜರ ಮನೆಯಲ್ಲಿ ಇವರ ವಿವಾಹಕ್ಕೆ ವಿರೋಧವಿತ್ತು. ಈ ಹಿನ್ನೆಲೆಯಲ್ಲಿ, ತಮ್ಮ ಸಂಬಂಧಕ್ಕೆ ಕಾನೂನುಬದ್ಧ ರೂಪ ನೀಡಲು ಇಬ್ಬರೂ ನಿರ್ಧರಿಸಿದರು.
ಅದರಂತೆ ಯುವ ಕರ್ನಾಟಕ ಭೀಮಸೇನೆ ನೇತೃತ್ವದಲ್ಲಿ ಬೆಳಗಾವಿಯ ಅಂಬೇಡ್ಕರ್ ಪ್ರತಿಮೆ ಎದುರು ಸರಳ ಹಾಗೂ ಸಾಂಪ್ರದಾಯಿಕವಾಗಿ ವಿವಾಹ ನೆರವೇರಿತು.
ವಿವಾಹ ಸಮಾರಂಭದಲ್ಲಿ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದು ನವದಂಪತಿಗೆ ಶುಭಾಶಯ ಕೋರಿದರು.