ಬೆಳಗಾವಿ ಅಧಿವೇಶನ | ಬಿಮ್ಸ್ ಆಸ್ಪತ್ರೆಯ ಪ್ರಕರಣವೊಂದು ಮೇಲ್ಮನೆಯಲ್ಲಿ ಭಾರೀ ಚರ್ಚೆಗೆ ಗ್ರಾಸ
ರೋಗಿಯ ಶಸ್ತ್ರಚಿಕಿತ್ಸೆಯ ವೇಳೆ ವೈದ್ಯರಿಂದ ಯಾವುದೇ ನಿರ್ಲಕ್ಷ್ಯವಿಲ್ಲ: ಡಾ.ಶರಣಪ್ರಕಾಶ ಪಾಟೀಲ್
ಬೆಳಗಾವಿ(ಸುವರ್ಣವಿಧಾನಸೌಧ) : ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ಓರ್ವ ರೋಗಿಯ ಹೊಟ್ಟೆಯ ಗಡ್ಡೆ ಬದಲಿಗೆ ಕರುಳನ್ನು ತೆಗೆದು ಹಾಕಲಾಗಿದೆ ಎಂಬ ಪ್ರಕರಣವೊಂದು ಸೋಮವಾರ ವಿಧಾನ ಪರಿಷತ್ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು.
ಪ್ರಶ್ನೆ ಸಂಖ್ಯೆ 13(139)ರ ಮೇಲಿನ ಚರ್ಚೆಯ ವೇಳೆ ಕಾಂಗ್ರೆಸ್ ಸದಸ್ಯ ಎಂ.ನಾಗರಾಜು ಈ ವಿಷಯವನ್ನು ಪ್ರಸ್ತಾಪಿಸಿ, ತಪ್ಪಿತಸ್ಥ ವೈದ್ಯರು ಮತ್ತು ಆಡಳಿತ ಮಂಡಳಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪಟ್ಟುಹಿಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಬಿಮ್ಸ್ ಸಂಸ್ಥೆಯಲ್ಲಿ ರೋಗಿಯ ಶಸ್ತ್ರಚಿಕಿತ್ಸೆಯ ವೇಳೆ ವೈದ್ಯರಿಂದ ಯಾವುದೇ ನಿರ್ಲಕ್ಷ್ಯ ಆಗಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರ ನಿರ್ಲಕ್ಷ್ಯದಿಂದ ಓರ್ವ ರೋಗಿಯ ಹೊಟ್ಟೆಯ ಗಡ್ಡೆ ಬದಲಿಗೆ ಕರುಳನ್ನು ತೆಗೆದು ಹಾಕಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವುದು ಸರಕಾರದ ಗಮನಕ್ಕೆ ಬಂದಿದೆ. ಈ ಪ್ರಕರಣದ ಬಗ್ಗೆ ಪರಿಶೀಲಿಸಲಾಗಿ, ರೋಗಿಯು ದೀರ್ಘಕಾಲದ ಮದ್ಯವ್ಯಸನಿ ಹಾಗೂ ತಂಬಾಕು ಅಗಿಯುವವನಾಗಿದ್ದು, ರೋಗಿಗೆ ಕರುಳಿನಲ್ಲಿ ರಂಧ್ರ ಇರುವುದು ತಾಲೂಕು ಆಸ್ಪತ್ರೆಯಿಂದ ನೀಡಿದ ಶಿಫಾರಸ್ಸು ಪತ್ರದಲ್ಲಿ ನಮೂದಿಸಲಾದ ಕಾರಣ, ಈ ರೋಗಿಗೆ ನಿಯಮಿತ ತನಿಖೆಗಳು, ಯುಎಸ್ಜಿ ಪರೀಕ್ಷೆ, ಸೋನಾಗ್ರಾಫಿ ಪರೀಕ್ಷೆಗಳನ್ನು ನಡೆಸಿದಾಗ ಅಪೇಂಡಿಕ್ಯೂಲರ್ ರಂಧ್ರ ಇರುವುದು ಕಂಡುಬಂದಿದೆ ಎಂದು ಡಾ.ಶರಣಪ್ರಕಾಶ ಪಾಟೀಲ್ ತಿಳಿಸಿದರು.
2025ರ ಜೂನ್ 20ರಂದು ಈ ರೋಗಿಗೆ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಲ್ಯಾಪ್ರೋಟಮಿ ನಡೆಸಲಾಗಿದ್ದು, ಅಪೇಂಡಿಕ್ಸ್ ತುದಿಯಲ್ಲಿ ಉಬ್ಬಿಕೊಂಡಿರುವುದು ಕಂಡುಬಂದ ನಿಮಿತ್ತ ಅಪೇಂಡಿಸೆಕ್ಟಮಿ ಮಾಡಲಾಗಿದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಕರುಳನ್ನು ಪರೀಕ್ಷಿಸಿದ್ದು, ಕರುಳು ಸಾಮಾನ್ಯವಾಗಿದ್ದುದರಿಂದ ತೆಗೆದಿರುವುದಿಲ್ಲವೆಂದು ಸಂಸ್ಥೆಯು ವರದಿಯಲ್ಲಿ ಸಲ್ಲಿಸಿದೆ. ಕಾಲಕಾಲಕ್ಕೆ ರೋಗಿಗೆ ಚಿಕಿತ್ಸೆ/ಪರೀಕ್ಷೆ ನಡೆಸುತ್ತಿದ್ದಾಗ್ಯೂ ವೈದ್ಯಕೀಯ ಸಲಹೆಯ ವಿರುದ್ಧವಾಗಿ ರೋಗಿಯನ್ನು, ಅವರ ಸಂಬಂಧಿಕರು ಜೂನ್ 22ರಂದು ಬಿಮ್ಸ್ ಸಂಸ್ಥೆಯಿಂದ ಕರೆದೊಯ್ಯಲಾಗಿದೆ. ರೋಗಿಗೆ ಬಿಮ್ಸ್ ಸಂಸ್ಥೆಯಲ್ಲಿ ಶಸ್ತ್ರಚಿಕಿತ್ಸೆಯ ವೇಳೆಯಲ್ಲಿ ವೈದ್ಯರಿಂದ ಯಾವುದೇ ನಿರ್ಲಕ್ಷ್ಯತೆ ನಡೆದಿಲ್ಲ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಖಚಿತಪಡಿಸಿದರು.