ಬೆಳಗಾವಿ | ಎಂಇಎಸ್ ಸಭೆ ನಡೆಸಲಿರುವ ಸ್ಥಳಕ್ಕೆ ನುಗ್ಗಲು ಯತ್ನಿಸಿದ 50 ಕ್ಕೂ ಹೆಚ್ಚು ಕನ್ನಡ ಹೋರಾಟಗಾರರು ವಶಕ್ಕೆ
Update: 2025-11-01 14:50 IST
ಬೆಳಗಾವಿ: ಕರಾಳ ದಿನಾಚರಣೆ ಹಿನ್ನೆಲೆಯಲ್ಲಿ, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಶನಿವಾರ ಮಧ್ಯಾಹ್ನ ಸಭೆ ನಡೆಸಲಿರುವ ಸ್ಥಳಕ್ಕೆ ನುಗ್ಗಲು ಯತ್ನಿಸಿದ ಸುಮಾರು 50 ಕ್ಕೂ ಹೆಚ್ಚು ಕನ್ನಡ ಕಾರ್ಯಕರ್ತರನ್ನು ಪೊಲೀಸರು ತಡೆದು ವಶಕ್ಕೆ ಪಡೆದಿದ್ದಾರೆ.
ಮಹಾದೇವ ತಳವಾರ ಮತ್ತು ವಾಜೀದ್ ಹಿರೇಕೋಡಿ ನೇತೃತ್ವದಲ್ಲಿ ಕಾರ್ಯಕರ್ತರು ಗೋಗಟೆ ವೃತ್ತದ ಮೂಲಕ ಸಭಾ ಸ್ಥಳದ ಕಡೆಗೆ ತೆರಳಲು ಮುಂದಾದಾಗ, ಪೊಲೀಸರು ಮಾರ್ಗ ಮಧ್ಯೆ ತಡೆಗಟ್ಟಿದರು. ಈ ವೇಳೆ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಸ್ವಲ್ಪ ಹೊತ್ತು ನೂಕಾಟ ನಡೆದಿದೆ ಎಂದು ತಿಳಿದು ಬಂದಿದೆ.
ಘಟನೆಯ ನಂತರ ಹೆಚ್ಚುವರಿ ಪೊಲೀಸ್ ಪಡೆ ಸ್ಥಳಕ್ಕೆ ನಿಯೋಜಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯೋತ್ಸವ ದಿನದಂದೇ ಈ ಘಟನೆ ನಡೆದಿರುವುದರಿಂದ ನಗರದಲ್ಲಿ ಉದ್ವಿಗ್ನತೆ ನಿರ್ಮಾಣವಾಗಿದೆ.