×
Ad

ಆದ್ಯತೆ ಮೇರೆಗೆ ಭದ್ರಾ ಮೇಲ್ದಂಡೆ ಯೋಜನೆ ಮೊದಲ ಹಂತ ಪೂರ್ಣ : ಕೃಷ್ಣಬೈರೇಗೌಡ

Update: 2024-12-17 22:53 IST

ಬೆಳಗಾವಿ : ಮಧ್ಯ ಕರ್ನಾಟಕ ಭಾಗದ ಬಹುದಿನದ ಬೇಡಿಕೆಯಾದ ಭದ್ರಾ ಮೇಲ್ದಂಡೆ ಯೋಜನೆಯ ಮೊದಲನೇ ಹಂತವನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸುವುದಾಗಿ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಎಂ.ಚಂದ್ರಪ್ಪ ಚುಕ್ಕೆ ಗುರುತಿನ ಪ್ರಶ್ನೆಗೆ ಉಪ ಮುಖ್ಯಮಂತ್ರಿ ಪರವಾಗಿ ಅವರು ಉತ್ತರಿಸಿದರು.

2003ರಲ್ಲಿ ಯೋಜನೆಗೆ 2813 ಕೋಟಿ ರೂ. ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ನಂತರ 2015ರಲ್ಲಿ ಯೋಜನೆಯ ಪರಿಷ್ಕೃತ ಮೊತ್ತ 12340 ಕೋಟಿ ರೂ.ಗೆ ಸರಕಾರ ಅನುಮೋದನೆ ನೀಡಿದೆ. 2020 ರಲ್ಲಿ ಪರಿಷ್ಕೃತ ಯೋಜನೆ ಮೊತ್ತ 21473 ಕೋಟಿ ರೂ.ಗೆ ಏರಿಕೆಯಾಗಿದೆ. ಇದಕ್ಕೆ ತಕ್ಕಹಾಗೆ ಯೋಜನೆಯ ಮೂಲ ವ್ಯಾಪ್ತಿ ವಿಸ್ತೀರ್ಣ ಹಾಗೂ ಕುಡಿಯುವ ನೀರಿನ ಯೋಜನೆಗಳು ಸೇರ್ಪಡೆಯಾಗಿವೆ. 2027-28ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ಯೋಜನೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದ್ದು, ಇನ್ನೂ 11,358 ಕೋಟಿ ರೂ.ಅನುದಾನ ಬೇಕಾಗುತ್ತದೆ. ಕೇಂದ್ರ ಸರಕಾರ ಆಯವ್ಯಯದಲ್ಲಿ ಘೋಷಿಸಿದಂತೆ 5300 ಕೋಟಿ ರೂ. ಅನುದಾನವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಅನುದಾನ ಲಭಿಸಿದರೆ ಯೋಜನೆ ಪೂರ್ಣಗೊಳಿಸಲು ಸಹಾಯವಾಗಲಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

1957 ರಲ್ಲಿ ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪನವರು ಮಧ್ಯ ಕರ್ನಾಟಕ ಬರ ಪೀಡಿತ ಜಿಲ್ಲೆಗಳಿಗೆ ನೀರನ್ನು ನೀಡಲು ಮಹತ್ವಾಂಕ್ಷೆ ಭದ್ರಾ ಯೋಜನೆಯ ಬಗ್ಗೆ ಚಿಂತಿಸಿದ್ದರು. 2003ರಲ್ಲಿ ಅನುಮೊದನೆ ನೀಡಿದ ಯೋಜನಾ ವೆಚ್ಚ ಇಂದು 21473.67 ಕೋಟಿಗಳಷ್ಟು ಹೆಚ್ಚಾಗಿದೆ. ಇನ್ನೂ ತಡವಾದರೆ ಎಸ್.ಆರ್.ರೇಟ್ ಏರಿಕೆಯಾಗಿ ಯೋಜನೆ ವೆಚ್ಚವು ಇನ್ನೂ ಹೆಚ್ಚಾಗಲಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News