ಐದು ವರ್ಷ ನಾನೇ ಸಿಎಂ ಆಗಿರಬೇಕೆಂದು ಜನರು ಆಶೀರ್ವಾದ ಮಾಡಿದ್ದಾರೆ : ಸದನದಲ್ಲಿ ಸಿದ್ದರಾಮಯ್ಯ ಮಾತು
► "140 ಶಾಸಕರು ನಮ್ಮೊಂದಿಗಿದ್ದು, ವಿರೋಧಪಕ್ಷದವರು ಹುಳಿಹಿಂಡುವ ಅಗತ್ಯವಿಲ್ಲ" ► "ರಾಜ್ಯದಲ್ಲಿ ಬಿಜೆಪಿ ಹಿಂಬಾಗಿಲಿಂದ ಅಧಿಕಾರ ಪಡೆಯಿತೇ ಹೊರತು ಜನಾರ್ಶೀವಾದದಿಂದಲ್ಲ"
ಸಿದ್ದರಾಮಯ್ಯ
ಬೆಳಗಾವಿ : 2023ರಂತೆ 2028ರಲ್ಲಿಯೂ ಜನಾರ್ಶೀವಾದದೊಂದಿಗೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದ್ದು, ಬಿಜೆಪಿಯವರು ಸದಾ ವಿರೋಧಪಕ್ಷದ ಸ್ಥಾನದಲ್ಲಿಯೇ ಇರಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಸಭಾ ಕಲಾಪದಲ್ಲಿ, ವಿರೋಧಪಕ್ಷದವರ ಪ್ರಶ್ನೆಗೆ ಉತ್ತರಿಸುತ್ತಾ ಮಾತನಾಡಿದರು.
ಉರಿಯುವುದರ ಮೇಲೆ ಉಪ್ಪು ಹಾಕಬಾರದೆಂಬ ಎಂಬ ಗಾದೆ ಮಾತಿದೆ. ವಿರೋಧಪಕ್ಷದವರು ಇರುವುದೇ ಉರಿಯುವುದರ ಮೇಲೆ ಉಪ್ಪು ಸುರಿಯಲು ಎಂದರು. ವಿರೋಧಪಕ್ಷದವರು ಏನೇ ಪ್ರಚೋದನೆ ಮಾಡಿದರೂ, ನಮ್ಮ ಶಾಸಕರಾರೂ ಪ್ರಚೋದಿತರಾಗುವುದಿಲ್ಲ. ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿರಬೇಕೆಂದು ಜನರು ಆಶೀರ್ವಾದ ಮಾಡಿ ಕಳಿಸಿದ್ದಾರೆ. 140 ಶಾಸಕರು ನಮ್ಮೊಂದಿಗಿದ್ದಾರೆ. ವಿರೋಧಪಕ್ಷದವರು ಇದರಲ್ಲಿ ಹುಳಿ ಹಿಂಡುವ ಅಗತ್ಯವಿಲ್ಲ ಎಂದರು.
ಜನರ ನಾಡಿಮಿಡಿತ ಕಾಂಗ್ರೆಸ್ ಸರಕಾರಕ್ಕೆ ತಿಳಿದಿದೆ :
2023ರಲ್ಲಿ ಜನರು ಆಶೀರ್ವಾದ ಮಾಡಿದಂತೆ 2028 ರಲ್ಲಿಯೂ ಕಾಂಗ್ರೆಸ್ ಸರಕಾರವೇ ಆಡಳಿತಕ್ಕೆ ಬರಲಿದೆ. ಜನರ ನಾಡಿಮಿಡಿತ ಸರಕಾರಕ್ಕೆ ತಿಳಿದಿದೆ. ಕರ್ನಾಟಕದ ಜನ ಬಿಜೆಪಿಗೆ ಎಂದಿಗೂ ಅಧಿಕಾರಕ್ಕೆ ತರುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಎರಡು ಬಾರಿ ಅಧಿಕಾರ ನಡೆಸಿದರೂ, ಒಂದು ಬಾರಿಯೂ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿಲ್ಲ. 2008 , 2018 ರಲ್ಲಿ ಆಪರೇಷನ್ ಕಮಲ ಮಾಡಿ, ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ. ರಾಜ್ಯದ ಜನ ಬಿಜೆಪಿಗೆ ಆಶೀರ್ವಾದ ಮಾಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. 2019 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದೆಂಬ ಉದ್ದೇಶದಿಂದ ಜೆಡಿಎಸ್ ನೊಂದಿಗೆ ಸರಕಾರ ರಚಿಸಲಾಯಿತು. ಆದರೆ ಬಿಜೆಪಿಯವರು , ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಉದ್ದೇಶದ ಬಗ್ಗೆ ಪ್ರಶ್ನಿಸಿದರು.
ಐದು ವರ್ಷ ಸುಭದ್ರ ಸರಕಾರ ನೀಡುತ್ತೇವೆ :
ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಮಾತು ಅಂತಿಮವಾಗಿರುತ್ತದೆ. ಆದರೆ ಬಿಜೆಪಿಯ ಅಧ್ಯಕ್ಷಗಿರಿ ಆಯ್ಕೆಯಲ್ಲಿ ಒಮ್ಮತ ಸಾಧಿಸಿಲ್ಲ. ಬಿಜೆಪಿಯವರಿಗೆ ಅಸೂಯೆ ಕಾಡುತ್ತಿದೆ. ಐದು ವರ್ಷ ಸುಭದ್ರ ಸರಕಾರ ನೀಡುತ್ತೇವೆ ಹಾಗೂ ಮತ್ತೆ ಚುನಾವಣೆ ಎದುರಿಸಿ 2028 ರಲ್ಲಿಯೂ ಕಾಂಗ್ರೆಸ್ ಸರಕಾರವೇ ಅಧಿಕಾರಕ್ಕೆ ಬರಲಿದೆ. 2013 ರಲ್ಲಿ 2023 ರಲ್ಲಿಯೂ ಕಾಂಗ್ರೆಸ್ ಗೆ ಜನರು ಆಶೀರ್ವಾದ ಮಾಡಿದ್ದಾರೆ, ಆದರೆ ಬಿಜೆಪಿಯವರಿಗೆ ಒಮ್ಮೆಯೂ ಜನಾದೇಶ ದೊರೆತಿಲ್ಲ ಹಾಗೂ ಭವಿಷ್ಯದಲ್ಲಿಯೂ ದೊರೆಯುವುದಿಲ್ಲ. ಬಿಜೆಪಿಯವರು ಸದಾ ವಿರೋಧಪಕ್ಷದ ಸ್ಥಾನದಲ್ಲಿಯೇ ಇರಲಿದೆ. “‘ನಾನು’ ಹೋದರೆ ಹೋದೇನು” ಅಂತ ಕನಕದಾಸರು ಹೇಳಿದ್ದರು. “ಇದು ನನ್ನ ಸರಕಾರವಲ್ಲ, ನಮ್ಮ ಸರಕಾರ”. ಈಗಲೂ ನಾನೇ ಮುಖ್ಯಮಂತ್ರಿ. ಹೈಕಮಾಂಡ್ ಹೇಳುವ ತನಕವೂ ನಾನೇ ಮುಖ್ಯಮಂತ್ರಿ ಎಂದು ತಿಳಿಸಿದರು.