ಬೀದರ್ | ಮಾ.5ರಿಂದ ಗೋರ ಬಂಜಾರ ಸಮುದಾಯದ ಜನ ಜಾಗೃತಿ ರಥ ಯಾತ್ರೆ : ಗೋವಿಂದ್ ಮಹಾರಾಜ್
ಬೀದರ್ : ಮಾ.5 ರಿಂದ 10 ರವರೆಗೆ ಗೋರಸೇನಾ ರಾಷ್ಟ್ರೀಯ ಸಂಘಟನೆಯ ರಾಜ್ಯ ಘಟಕದ ವತಿಯಿಂದ ಗೋರ ಬಂಜಾರ ಸಮುದಾಯದ ಜನ ಜಾಗೃತಿ ಹಾಗೂ ಜನಾಂದೋಲನ ರಥ ಯಾತ್ರೆ ಕೈಗೊಳ್ಳಲಾಗಿದೆ ಎಂದು ಸೇವಾನಗರ ತಾಂಡಾದ ಶಿವಶಕ್ತಿ ಪೀಠದ ಪೂಜ್ಯ ಗೋವಿಂದ್ ಮಹಾರಾಜ್ ಅವರು ಹೇಳಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಗೋರ ಬಂಜಾರ ಜನಾಂಗ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಈ ಜನಜಾಗೃತಿ ಮತ್ತು ಜನಾಂದೋಲನ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಇದು ಬೀದರ್ ನಗರದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ ಸತತ 6 ದಿನಗಳು ನಡೆಯಲಿದೆ. ರಾಜ್ಯದ 15 ಜಿಲ್ಲೆಗಳು ಒಳಗೊಂಡಂತೆ ಒಟ್ಟು 1,250 ಕಿ.ಮೀ. ವರೆಗಿನ ರಥಯಾತ್ರೆ ಇದಾಗಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ರಾಜ್ಯದಲ್ಲಿ ಸುಮಾರು 3,500 ಕ್ಕಿಂತ ಹೆಚ್ಚು ತಾಂಡಗಳಿದ್ದು, ಇಲ್ಲಿಯವರೆಗೆ ಈ ಎಲ್ಲ ತಾಂಡಾಗಳ ಜನಸಂಖ್ಯೆ ಕುರಿತಂತೆ ಯಾವುದೇ ವೈಜ್ಞಾನಿಕ ಅಧ್ಯಯನ ಆಗಿರುವುದಿಲ್ಲ. ಪ್ರಸ್ತುತ ಮೀಸಲಾತಿ ಹಂಚಿಕೆ ಸಂಬಂಧ ರಚನೆಯಾಗಿರುವ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಏಕ ಸದಸ್ಯ ಆಯೋಗಕ್ಕೆ ಸಮರ್ಪಕ ದತ್ತಾಂಶದ ಕೊರತೆ ಎದುರಾಗಹುದು ಎಂಬ ಆತಂಕ ನಮ್ಮ ಸಮಾಜಕ್ಕೆ ಇದೆ. ಹಾಗಾಗಿ ಸರ್ಕಾರ ರಾಜ್ಯದಾದ್ಯಂತ ಇರುವ ಗೋರ ಬಂಜಾರ ಜನಾಂಗದ ಸಂಪೂರ್ಣ ವೈಜ್ಞಾನಿಕ ದತ್ತಾಂಶ ಸಂಗ್ರಹಣೆ ಮಾಡುವ ಆವಶ್ಯಕತೆ ಇದೆ ಎಂದರು.
ನಮ್ಮ ಸಮಾಜದಲ್ಲಿ ನಾಯಕತ್ವ ದುರ್ಬಲವಾಗುತ್ತಿದ್ದು, ಅದನ್ನು ಗಟ್ಟಿಗೊಳಿಸುವುದು ಅತೀ ಅವಶ್ಯಕವಾಗಿದೆ. ತಾಂಡದ ಜನರ ಏಳಿಗೆ, ಬೆಳವಣಿಗೆ ಮತ್ತು ಮುಖ್ಯ ವಾಹಿನಿಯಲ್ಲಿ ಭಾಗವಹಿಸುವಂತೆ ಮಾಡುವ ಜವಾಬ್ದಾರಿ ನಮ್ಮದಾಗಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಒಂದು ಒಗ್ಗಟ್ಟಿನ ಕೂಗು ಆತಿ ಅವಶ್ಯಕ ಎಂದು ನಮಗೆ ಕಂಡುಬಂದಿದೆ. ಹಾಗಾಗಿ ರಾಜ್ಯಾದ್ಯಂತ ಒಮ್ಮತದ ಜನಜಾಗೃತಿಗೆ ಕರೆ ನೀಡುತ್ತಿದ್ದು, ಮಾ.5 ರಂದು ಜಿಲ್ಲೆಯಿಂದ ಈ ಜನ ಜಾಗೃತಿ ರಥ ಯಾತ್ರೆಗೆ ಚಾಲನೆ ನೀಡುತ್ತಿದ್ದೇವೆ ಎಂದು ಹೇಳಿದರು.
ಈ ರಥಯಾತ್ರೆಯು ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಒಳಗೊಂಡಂತೆ ಸುಮಾರು 15 ಜಿಲ್ಲೆಗಳಿಂದ ಹಾದು ಹೋಗಿ ಮಾ.10 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಗೆ ತಲುಪಿ ಈ ಚಳುವಳಿಗೆ ಯಶಸ್ಸು ತರುವುದಾಗಿ ಶಪಥ ಮಾಡಿದ್ದೇವೆ. ಫ್ರೀಡಂ ಪಾರ್ಕ್ ಲ್ಲಿ ಮುಖ್ಯಮಂತ್ರಿ ಅಥವಾ ಸಂಬಂಧಪಟ್ಟ ಸಚಿವರಿಗೆ ಮನವಿ ಪತ್ರ ಸಲ್ಲಿಸುವುದಾಗಿ ತಿಳಿಸಿದರು.
ಗೋರ ಶಿಖವಾಡಿ ಜಿಲ್ಲಾಧ್ಯಕ್ಷ ಗೋವರ್ಧನ್ ರಾಠೋಡ್ ಮಾತನಾಡಿ, ಗೋರ ಬಂಜಾರ ಸಮಾಜದ ಜನ ಹೊಟ್ಟೆ ಪಾಡಿಗಾಗಿ ಹೊರ ರಾಜ್ಯಗಳಿಗೆ ಗುಳೆ ಹೋಗುತ್ತಿದ್ದಾರೆ. ಇದರಿಂದಾಗಿ ತಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ನಮ್ಮ ಸಮಾಜದ ಜನ ಹೆಚ್ಚಿನ ಸಂಖ್ಯೆಯಲ್ಲಿ ಮೂಢನಂಬಿಕೆಯಲ್ಲಿ ತೊಡಗಿಕೊಂಡು ತನ್ಮೂಲಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಮ್ಮ ಜನರಲ್ಲಿನ ಬಡತನ, ಅಜ್ಞಾನ, ಅನಕ್ಷರತೆಯ ಲಾಭ ಪಡೆಯಲು ಆನೇಕ ಕುತಂತ್ರಿಗಳು ಹವಣಿಸುತ್ತಿದ್ದು, ನಮ್ಮ ಸಮಾಜವನ್ನು ಮತಾಂತರಕ್ಕೆ ತಳ್ಳುತ್ತಿದ್ದಾರೆ. ಇದರಿಂದಾಗಿ ನಮ್ಮ ಸಮಾಜದ ಜನ ಒಗ್ಗಟ್ಟಾಗುತ್ತಿಲ್ಲ. ನಮಗೆ ಒಂದು ಬಲಿಷ್ಠವಾದ ಸಂಘಟನೆಯ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ರಥಯಾತ್ರೆಯು ಭಾಲ್ಕಿ ತಾಲ್ಲೂಕಿನ ಸೇವಾನಗರ ತಾಂಡಾದಿಂದ ಖಾನಾಪುರ ಮಾರ್ಗವಾಗಿ ಬೀದರ್ ಗೆ ಬಂದು ನಗರದ ಅಂಬೇಡ್ಕರ್ ವೃತ್ತ, ಬಸವೇಶ್ವರ್ ವೃತ್ತ, ಬೊಮ್ಮಗೊಂಡೇಶ್ವರ್ ವೃತ್ತ ಮಾರ್ಗವಾಗಿ ಬಗದಲ್ ತಾಂಡಾ, ಮನ್ನಾಎಖ್ಖೇಳ್ಳಿ ಮಾರ್ಗವಾಗಿ ಕಮಲಾಪುರದಿಂದ ಕಲಬುರಗಿಗೆ ತೆರಳಲಿದೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗೋರಸೇನಾ ಜಿಲ್ಲಾಧ್ಯಕ್ಷ ರಮೇಶ್ ಜಾಧವ್, ಸವಿತಾಬಾಯಿ ರಾಠೋಡ್, ಬಾಬು ಜಾಧವ್, ನೀಲಕಂಠ ರಾಠೋಡ್, ಸುಧಾಕರ್ ರಾಠೋಡ್, ಅರವಿಂದ್ ರಾಠೋಡ್ ಹಾಗೂ ಕೃಷ್ಣ ರಾಠೋಡ್ ಸೇರಿದಂತೆ ಇತರರು ಉಪಸ್ಥಿತರಿದ್ದರು.