ಬೀದರ್ | ಮಹಿಳೆ ಜಗತ್ತಿನ ಅದ್ಭುತ ಶಕ್ತಿ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಬೀದರ್ : ಮಹಿಳೆ ಜಗತ್ತಿನ ಅದ್ಭುತ ಶಕ್ತಿಯಾಗಿದ್ದು, ಸರಕಾರಿ ಸೇವೆ ಮಾಡುವ ಮಹಿಳೆಯರು ಕುಟುಂಬ ಹಾಗೂ ಕಚೇರಿ ಎರಡನ್ನು ಸರಿದೂಗಿಸಿಕೊಂಡು ಹೋಗುತ್ತಾರೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅಭಿಪ್ರಾಯಪಟ್ಟರು.
ಇಂದು ನಗರದ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಏರ್ಪಡಿಸಲಾದ ವಿಶೇಷ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೇದಿಕೆ ಮೇಲೆ ಎಲ್ಲರೂ ಮಹಿಳೆಯರೇ ಸ್ಥಾನ ಅಲಂಕರಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. ಮುಂಬರುವ ಎಲ್ಲ ದಿನಮಾನಗಳಲ್ಲಿ ಎಲ್ಲ ಕಾರ್ಯಕ್ರಮಗಳಲ್ಲಿ ಶೇ.50 ರಷ್ಟು ಮಹಿಳೆಯರು ವೇದಿಕೆಯಲ್ಲಿ ಉಪಸ್ಥಿತರಿರಬೇಕು ಎಂದು ಹೇಳಿದರು.
ಕೆಲಸ ಮಾಡುವ ಮಹಿಳೆಯರು ಕಚೇರಿಗೆ ಬರುವ ಮುನ್ನ ಮನೆಯಲ್ಲಿನ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಿ ಕಚೇರಿಗೆ ಹಾಜರಾಗುತ್ತಾರೆ. ಸರಕಾರಿ ಸೇವೆಯ ಮಾಸಿಕ ವೇತನ ಆರ್ಥಿಕತೆಯ ದೃಷ್ಟಿಯಿಂದ ಪರಿಗಣಿಸಲಾಗುತ್ತದೆ ಆದರೂ ಅವರ ಕೌಟುಂಬಿಕ ಮನೆ ಕೆಲಸ ಲೆಕ್ಕಕ್ಕೆ ಬರುವುದಿಲ್ಲ. ಮನೆ ಕೆಲಸ ಮಾಡಿ ಕಚೇರಿಗೆ ಬರುವ ಮಹಿಳೆಯರ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮನೆಯವರು ಗಂಡು, ಹೆಣ್ಣಿನಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡದೇ ಸರಿಸಮಾನವಾಗಿ ಪರಿಗಣಿಸಿದರೆ ಮುಂಬರುವ ದಿನಮಾನಗಳಲ್ಲಿ ಪ್ರತಿ ಕ್ಷೇತ್ರದಲ್ಲಿ ಶೇ.50 ರಷ್ಟು ಮಹಿಳಾ ಪ್ರತಿನಿಧಿಗಳನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.
ವೇದಿಕೆ ಮೇಲೆ ಅಲ್ಲದೇ ಇಡೀ ರಂಗಮಂದಿರದ ತುಂಬೆಲ್ಲ ಮಹಿಳೆಯರೇ ಕಾಣುತ್ತಿದ್ದದ್ದು ವಿಶೇಷವಾಗಿತ್ತು. ಅಲ್ಲಿ ಮುಕ್ತವಾಗಿ ಚರ್ಚೆ ನಡೆದವು. ಮಹಿಳಾ ದಿನಾಚರಣೆ ನಿಮಿತ್ತ ಜಿಲ್ಲಾಧಿಕಾರಿಗಳು ಕೇಕ್ ಕಟ್ ಮಾಡಿದರು.
ಈ ಸಂದರ್ಭದಲ್ಲಿ ಹಂಸಾ ಗಿರೀಶ್ ಬದೋಲೆ, ಶೈನಿ ಪ್ರದೀಪ್ ಗುಂಟಿ, ಗೀತಾ ಶಿವಕುಮಾರ್ ಶೀಲವಂತ್, ಬೀದರ ವಿಶ್ವವಿದ್ಯಾಲಯದ ಕುಲಸಚಿವೆ ಸುರೇಖಾ, ಜಿಲ್ಲಾ ಸಹಕಾರ ಸಂಘಗಳ ಉಪನಿರ್ದೇಶಕಿ ಮಂಜುಳಾ ಸಿ.ಎಸ್. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಶಿಂಧು ಎಸ್. ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ಸುರೇಖಾ ಮುನ್ನಳ್ಳಿ, ತಹಸೀಲ್ದಾರ್ ಅಂಜುಮ್, ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯರ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಸುವರ್ಣಾ, ಹಿ.ವ.ಕಲ್ಯಾಣ ಇಲಾಖೆಯ ಸುಜಾತಾ, ಮೀನುಗಾರಿಕೆ ಇಲಾಖೆಯ ಜಾನವಿ, ಅಂಚೆ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಗಲಾ ಭಾಗವತ್, ಎ ಡಿ ಎಲ್ ಆರ್ ಗಳಾದ ಶ್ವೇತಾ, ರಾಜೇಶ್ವರಿ, ಸಾಹಿತಿ ಪಾರ್ವತಿ ಸೋನಾರೆ, ಸ್ತ್ರೀ ರೋಗ ತಜ್ಞೆ ಉಮಾ ದೇಶಮುಖ್ ಹಾಗೂ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಮಹಿಳಾ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆಯ ಮಹಿಳಾ ಸಿಬ್ಬಂದಿ ಉಪಸ್ಥಿತರಿದ್ದರು.