ಧರ್ಮಸ್ಥಳ ಪ್ರಕರಣ | ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯಿಂದ ಆಗ್ರಹ
ಬೀದರ್ : ಧರ್ಮಸ್ಥಳದಲ್ಲಿ ಸೌಜನ್ಯಳ ಕೊಲೆಯಾಗಿ ಇಂದಿಗೆ 13 ವರ್ಷ ಕಳೆಯಿತು. ಆದರೆ ಸೌಜನ್ಯಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಗಳನ್ನು ಶಿಕ್ಷೆ ನೀಡಲಿಲ್ಲ. ಅಲ್ಲಿನ ಅಸಹಜ ಸಾವುಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯಿಂದ ಆಗ್ರಹಿಸಲಾಯಿತು.
ಇಂದು ಬೀದರ್ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಧರ್ಮಸ್ಥಳದಲ್ಲಿ ನೂರಾರು ಅಸಹಜ ಸಾವು, ಕೊಲೆ, ಅತ್ಯಾಚಾರವಾಗಿದ್ದು, ಅಲ್ಲಿನ ದಲಿತರಿಗೆ ಸೇರಿದ ಭೂಮಿ ಕಬಳಿಕೆ ಮಾಡಲಾಗಿದೆ. ಸೌಜನ್ಯಳಿಗೆ ಅತ್ಯಾಚಾರವೆಸಗಿ ಕೊಲೆ ಮಾಡಿ ಇಂದಿಗೆ 13 ವರ್ಷ ತುಂಬಿವೆ. ಆದರೆ ಸೌಜನ್ಯ ಪ್ರಕರಣದಲ್ಲಿ ಸಂತೋಷರಾವ್ ಎನ್ನುವ ನೀರ್ದೋಷಿಯನ್ನು ಬಂಧಿಸಿ ಖುಲಾಸೆಗೊಳಿಸಲಾಗಿತ್ತು. ಇನ್ನು ಕೂಡ ಸೌಜನ್ಯಳಿಗೆ ಅತ್ಯಾಚಾರವೆಸಗಿ ಕೊಲೆ ಮಾಡಿದ ನೈಜ ಆರೋಪಿಗಳನ್ನು ಬಂಧಿಸುವಲ್ಲಿ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ ಎಂದು ಆರೋಪಿಸಲಾಗಿದೆ.
ಸೌಜನ್ಯಳ ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷಿ ನಾಶ ಮಾಡಿ ತಪ್ಪೆಸಗಿದ ವೈದ್ಯ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತವಾದ ಕ್ರಮ ಕೈಗೊಳ್ಳಬೇಕು. ನಿಜವಾದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಸೌಜನ್ಯ, ಪದ್ಮಲತಾ, ವೇದವಲ್ಲಿ, ಮಾವುತ ನಾರಾಯಣ, ಯಮುನಾ ಕೊಲೆ ಪ್ರಕರಣ ಸೇರಿದಂತೆ ಭೂ ಕಬಳಿಕೆ, ಮೈಕ್ರೋ ಫೈನಾನ್ಸ್ ದೌರ್ಜನ್ಯಗಳು, ದಲಿತರ ಮೀಸಲು ಭೂಮಿ ಕಬಳಿಕೆ ಹಾಗೂ ಆರ್ಥಿಕ ಅಪರಾಧದ ಆರೋಪದ ಪ್ರಕರಣಗಳನ್ನು ಇವಾಗ ರಚಿಸಿರುವ ಎಸ್ಐಟಿ ಗೆ ವಹಿಸಲು ಸಮಸ್ಯೆಗಳಿದ್ದಲ್ಲಿ ಅದಕ್ಕಾಗಿಯೇ ಪ್ರತ್ಯೇಕವಾದ ವಿಶೇಷ ತನಿಖಾ ತಂಡ ರಚಿಸಿ ಸೂಕ್ತವಾದ ತನಿಖೆಗೆ ಒಳಪಡಿಸಬೇಕು ಎಂದು ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ರೇಷ್ಮಾ, ಮಾರುತಿ ಬೌದ್ದೆ, ಓಂಪ್ರಕಾಶ್ ರೊಟ್ಟೆ, ನಿಜಾಮುದ್ದಿನ್, ವಿನಯ್ ಮಾಳಗೆ, ಮಹೇಶ್ ಗೊರನಾಳಕರ್, ಜಗದೀಶ್ವರ್ ಬಿರಾದಾರ್, ಬಸವರಾಜ್ ಮಾಳಗೆ, ರುಕ್ಮಿಣಿ ಕಮಠಾಣ, ಜಗದೇವಿ, ಮಹಾದೇವಿ ಹಾಗೂ ಸಂತೋಷ್ ಜೋಳದಾಪಕೆ ಸೇರಿದಂತೆ ಇತರರು ಇದ್ದರು.