ಚಿಕ್ಕಮಗಳೂರು| ಗಿರಿ ಪ್ರದೇಶದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಕ್ರಮ; ಪ್ರತಿದಿನ 2 ಸ್ಲಾಟ್ಗಳಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ
ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಭಾಗದಲ್ಲಿ ಇತ್ತೀಚಿಗೆ ವಾರಾಂತ್ಯದಲ್ಲಿ ವಾಹನಗಳ ದಟ್ಟಣೆ ನಿಯಂತ್ರಿಸಲು ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗುತ್ತಿದ್ದು, ಎರಡು ಸ್ಲಾಟ್ಗಳಲ್ಲಿ ಪ್ರತಿದಿನ ವಾಹನಗಳನ್ನು ಗಿರಿಭಾಗಕ್ಕೆ ಬಿಡಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ತಿಳಿಸಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಿರಿಗೆ ವಾಹನಗಳ ದಟ್ಟಣೆಯನ್ನು ತಡೆಯುವ ಸಲುವಾಗಿ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12ರವರೆಗೆ 600 ವಾಹನಗಳನ್ನು ಹಾಗೂ ಮಧ್ಯಾಹ್ನ 1 ಗಂಟೆಯಿಂದ ಸಂಜೆ 6 ಗಂಟೆವರೆಗೆ 600 ವಾಹನಗಳನ್ನು ಎರಡು ಸ್ಲಾಟ್ಗಳಲ್ಲಿ ಬಿಡಲಾಗುವುದು ಎಂದು ತಿಳಿಸಿದ ಅವರು, ಮಧ್ಯಾಹ್ನ ಬಿಡುವು ನೀಡಲಾಗುವ ಒಂದು ಗಂಟೆ ಅವಧಿಯಲ್ಲಿ ಮೇಲೆ ತೆರಳುವ ವಾಹನಗಳು ಮರಳಿ ಬರಲು ಅವಕಾಶ ಕಲ್ಪಿಸಲಾಗುವುದು. ಮುಳ್ಳಯ್ಯನಗಿರಿಗೆ ತೆರಳುವ ಪ್ರವಾಸಿಗರಿಗೆ ಸೀತಾಳಯ್ಯನಗಿರಿಯಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲಿಸಿ ಪ್ರವಾಸಿಗರು ಚಾರಣ ಮುಖಾಂತರ, ಇಲಾಖೆಯಿಂದ ಅನುಮತಿಸಿದ ಜೀಪುಗಳು ಇಲಾಖೆಯಿಂದ ನಿಯೋಜಿಸಲಾದ ಟಿ.ಟಿ. ಹಾಗೂ ತೂಫಾನ್ ವಾಹನಗಳಿಗೆ ಅವಕಾಶ ನೀಡಲಾಗುವುದು ಎಂದರು.
ವಾಹನಗಳಿಗೆ ಮುಂಗಡ ಬುಕ್ಕಿಂಗ್ ವ್ಯವಸ್ಥೆಯೂ ಇರಲಿದೆ. ರೆಡ್ ಅಲರ್ಟ್ ಸಂದರ್ಭ ಹಾಗೂ ಪೊಲೀಸರಿಂದ ಸೂಚನೆಗಳೇನಾದರೂ ಇದ್ದಲ್ಲಿ ಅಥವಾ ಸ್ಥಳೀಯವಾಗಿ ಸೀತಾಳಯ್ಯನಗಿರಿ ಇರಬಹುದು ಇಲ್ಲವೇ ಐ.ಡಿ. ಪೀಠ ಇರಬಹುದು ಜಾತ್ರೆಯ ಸಂದರ್ಭಗಳು ಇದ್ದಲ್ಲಿ ಪ್ರವಾಸಿಗರಿಗೆ ಬುಕ್ಕಿಂಗ್ ಅವಕಾಶ ಇರುವುದಿಲ್ಲ. ಜಾತ್ರೆಯ ಸಂದರ್ಭದಲ್ಲಿ ಉಚಿತವಾಗಿ ಭಕ್ತರು ಹಾಗೂ ಸ್ಥಳೀಯರಿಗೆ ತೆರಳಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
ಕಳೆದ ಆರು ತಿಂಗಳಿನಿಂದ ಎರಡೂವರೆ ಲಕ್ಷದಷ್ಟು ವಾಹನಗಳ ಸಂಚಾರ ಗಿರಿಮಾರ್ಗದಲ್ಲಿ ಕಂಡುಬಂದಿದೆ. ಎಪ್ರಿಲ್, ಮಾರ್ಚ್ ತಿಂಗಳಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ಸಮಯವಾದ್ದರಿಂದ ವಾಹನಗಳ ಸಂಖ್ಯೆ ಕಡಿಮೆಯಿತ್ತು. ಸುದೀರ್ಘ ವಾರಾಂತ್ಯದ ಸಮಯದಲ್ಲಿ ಟಿ.ಟಿ. ವಾಹನಗಳು, ಮಿನಿ ಬಸ್ಗಳ ದಟ್ಟಣೆ ಹೆಚ್ಚುತ್ತಿದೆ. ಗಿರಿ ರಸ್ತೆ ಅತ್ಯಂತ ಕಿರು ಮಾರ್ಗವಾಗಿರುವುದರಿಂದ ಸಮಸ್ಯೆಯಾಗುತ್ತಿದೆ. ಭೂಗರ್ಭ ಶಾಸ್ತ್ರಜ್ಞರು ಇತ್ತೀಚೆಗೆ ಆಗಮಿಸಿ ಗಿರಿಭಾಗವನ್ನು ವೀಕ್ಷಿಸಿದ ವೇಳೆ ಭೂಕುಸಿತದ ಬಗ್ಗೆ ಮಾಹಿತಿ ನೀಡಲಾಗಿತ್ತು. ಈ ಮಾರ್ಗದಲ್ಲಿ ಹೆಚ್ಚು ವಾಹನಗಳ ಸಂಚಾರ ಸೂಕ್ತವಲ್ಲ. ಇದು ಭೂಕುಸಿತ ಹೆಚ್ಚಾಗಬಹುದು ಎಂದು ವರದಿ ನೀಡಿದ್ದರು ಎಂದು ಹೇಳಿದರು.
ಮಾರ್ಚ್ನಲ್ಲಿ ಮಳೆ ಪ್ರಾರಂಭವಾದಾಗ ಅಲ್ಲಲ್ಲಿ ಸಣ್ಣ ಮಟ್ಟದ ಭೂಕುಸಿತಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಮೂರು ಭಾಗವಾಗಿ ವಾಹನಗಳ ದಟ್ಟಣೆಯನ್ನು ನಿಯಂತ್ರಿಸಬೇಕು ಎಂದು ಜಿಲ್ಲಾಮಟ್ಟದ ಸಮಿತಿಯಲ್ಲಿ ಸದಸ್ಯರ ತೀರ್ಮಾನದಂತೆ ಕ್ರಮ ಕೈಗೊಳ್ಳಲಾಗುವುದು. ಕೈಮರಾ ಚೆಕ್ ಪೋಸ್ಟ್ ಅನ್ನು ಎನ್ಎಂಡಿಸಿ ಸರ್ಕಲ್ಗೆ ಬದಲಾವಣೆ ಮಾಡಲಾಗುತ್ತಿದೆ. ಈ ಹಿಂದೆ ಇದ್ದ ಕೈಮರಾ ಚೆಕ್ ಪೋಸ್ಟ್ ಅನ್ನು ಪೊಲೀಸ್ ಚೌಕಿಯನ್ನಾಗಿ ಮಾಡಲಾಗುವುದು. ಒಂದು ವೇಳೆ ಹೆಚ್ಚಿನ ಪ್ರವಾಸಿಗರು ಬಂದಲ್ಲಿ ತರೀಕೆರೆ ರಸ್ತೆಯ ಮೂಲಕ ಇತರೆ ಪ್ರವಾಸಿ ತಾಣಗಳಿಗೆ ತೆರಳಲು ಅನುವು ಮಾಡಿಕೊಡಲಾಗುವುದು. ಎನ್ಎಂಡಿಸಿ ಸರ್ಕಲ್ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಸರ್ಕಲ್ ಆಗಲಿದೆ ಎಂದರು.
ಈಗಾಗಲೇ ಗಿರಿ ರಸ್ತೆ ಅಗಲೀಕರಣ ಮಾಡಲಾಗಿದ್ದರೂ ಮಳೆ ಹಿನ್ನೆಲೆಯಲ್ಲಿ ಡಾಂಬರೀಕರಣ ಮಾಡಲು ಸಾಧ್ಯವಾಗಿಲ್ಲ. ಹೀಗಿದ್ದರೂ ಲೋಕೋಪಯೋಗಿ ಇಲಾಖೆಯಿಂದ ಅಂದಾಜು ಪಟ್ಟಿ ಪಡೆದುಕೊಂಡು, ಒಂದು ವೇಳೆ 15-20 ದಿನಗಳ ಕಾಲ ವಾತಾವರಣ ತಿಳಿಯಾದಲ್ಲಿ ಅದನ್ನು ಡಾಂಬರೀಕರಣಗೊಳಿಸಲಾಗುವುದು ಎಂದು ತಿಳಿಸಿದರು.
ಸೀತಾಳಯ್ಯನಗಿರಿಯಲ್ಲಿ ಶೌಚಾಲಯಗಳನ್ನು ಸಂಪೂರ್ಣವಾಗಿ ನವೀಕರಣ ಮಾಡಲಾಗುವುದು. ಸೀತಾಳಯ್ಯನಗಿರಿ ಹಾಗೂ ಮುಳ್ಳಯ್ಯನಗಿರಿ ಭಾಗದಲ್ಲಿ ಹಿಂದೆ ಗ್ರಾಮ ಪಂಚಾಯಿತಿಯಿಂದ 35 ಅಂಗಡಿಗಳಿಗೆ ಲೈಸೆನ್ಸ್ ನೀಡಲಾಗಿತ್ತು. ಅವುಗಳನ್ನು ಗಮನದಲ್ಲಿಟ್ಟುಕೊಂಡು ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲೆಗೆ ಬಂದಿರುವ ಅನುದಾನವನ್ನು ಆಧರಿಸಿ ಸ್ಥಳದಲ್ಲಿ ಫುಡ್ಕೋರ್ಟ್ ಮಾದರಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸ್ಥಳೀಯರಿಗೆ ಅನುಕೂಲವಾಗುವಂತೆ ನಿಗದಿಪಡಿಸಿದ ದಾಖಲಾತಿಗಳನ್ನು ಪ್ರವಾಸೋದ್ಯಮ ಇಲಾಖೆಗೆ ನೀಡಿ ಪಾಸುಗಳನ್ನು ಪಡೆದುಕೊಳ್ಳುವುದು ಅಗತ್ಯ. ಹಾಗಿದ್ದಾಗ ಈ ಮಾರ್ಗದಲ್ಲಿ ಸಂಚರಿಸಲು ಸ್ಥಳೀಯರಿಗೆ ಸಮಸ್ಯೆಯಾಗದು ಎಂದು ಮಾಹಿತಿ ನೀಡಿದರು.
ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಆರ್.ಲೋಹಿತ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.