ಕಳಸ | ಭದ್ರಾ ನದಿಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತ್ಯು
Update: 2025-03-16 16:19 IST
ಕಳಸ : ಭದ್ರಾ ನದಿಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಇಂದು ಮಧ್ಯಾಹ್ನ ಸಂಜೀವ ಮೆಟ್ಟಿಲಿನ ವಶಿಷ್ಟಾಶ್ರಮದ ತೂಗುಸೇತುವೆ ಬಳಿ ನಡೆದಿದೆ.
ಬೆಂಗಳೂರಿನಲ್ಲಿ ಚಿನ್ನದ ಕೆಲಸ ಮಾಡುವ ರಾಜಸ್ತಾನ ಮೂಲದ ಯುವಕರಾದ ಜಗದೀಶ್ (33) ಮತ್ತು ಚೋಟಾ ಸಿಂಗ್ (28) ಮೃತ ಪಟ್ಟವರು ಎಂದು ಗುರುತಿಸಲಾಗಿದೆ.
ಹೋಳಿ ರಜೆ ಕಾರಣಕ್ಕೆ 2 ಕಾರಿನಲ್ಲಿ ಶನಿವಾರ ಕಳಸಕ್ಕೆ ಬಂದಿದ್ದ 12 ಯುವಕರು ವಶಿಷ್ಟಾಶ್ರಮದ ತೂಗುಸೇತುವೆ ನೋಡಲು ಹೋಗಿದ್ದಾರೆ. 10 ಗೆಳೆಯರು ತೂಗುಸೇತುವೆ ನೋಡಲು ಹೋದಾಗ ಇಬ್ಬರು ಯುವಕರು ನೀರಿನಲ್ಲಿಈಜಾಡಲು ಇಳಿದಿದ್ದಾರೆ. ಈಜು ಬಾರದ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇಬ್ಬರ ಮೃತದೇಹವನ್ನು ನೀರಿನಿಂದ ಮೇಲಕ್ಕೆ ಎತ್ತಲಾಗಿದೆ. ಮೃತದೇಹವನ್ನು ಮೇಲೆತ್ತಲು ಮುಳುಗುತಜ್ಞ ಭಾಸ್ಕರ್ ನೆರವು ನೀಡಿದ್ದಾರೆ.
ಈ ಕುರಿತು ಕಳಸ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.