×
Ad

ಕಂದಾಯ, ಅರಣ್ಯ ಭೂಮಿ ಸಮಸ್ಯೆ ಪರಿಹಾರಕ್ಕೆ ಶೀಘ್ರ ಅರಣ್ಯ ಸಚಿವರೊಂದಿಗೆ ಚರ್ಚಿಸಿ ಕ್ರಮ : ಸಚಿವ ಕೃಷ್ಣಭೈರೇಗೌಡ

Update: 2025-06-26 19:37 IST

ಚಿಕ್ಕಮಗಳೂರು : ಕಂದಾಯ-ಅರಣ್ಯ ಭೂಮಿ ಸಮಸ್ಯೆ ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿದೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಶೀಘ್ರ ಅರಣ್ಯ ಸಚಿವರೊಂದಿಗೆ ಜನಪ್ರತನಿಧಿಗಳು, ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಚರ್ಚೆ ನಡೆಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ಗುರುವಾರ ನಗರದ ಜಿಲ್ಲಾ ಪಂಚಾಯತ್ ಕಚೇರಿಯ ಅಬ್ದುಲ್ ನಝೀರ್‌ ಸಾಬ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ, ಅರಣ್ಯ ಭೂಮಿ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ ಜಿಲ್ಲಾಧಿಕಾರಿ ಮೀನಾನಾಗರರಾಜ್, 2002ರಲ್ಲಿ 1.25ಸಾವಿರ ಎಕರೆ ಭೂಮಿಯನ್ನು ಡಿಸಿ ರಿಸರ್ವ್ ಎಂದು ಘೋಷಣೆ ಮಾಡಲಾಗಿತ್ತು. ಈ ಪೈಕಿ 10 ಸಾವಿರ ಎಕರೆ ಭೂಮಿಯನ್ನು ಕಂದಾಯ ಇಲಾಖೆಗೆ ಹಿಂಪಡೆಯಲಾಗಿತ್ತು. ಡಿಸಿ ರಿಸರ್ವ್ ಭೂಮಿಯಲ್ಲಿನ ಸಾರ್ವಜನಿಕರು, ರೈತರ ಸಮಸ್ಯೆಗಳ ಪಟ್ಟಿ ಮಾಡಲು ಟಾಸ್ಕ್ ಪೋರ್ಸ್ ಸಮಿತಿ ರಚನೆ ಮಾಡಲಾಗಿತ್ತು, ಆದರೆ ಕಮಿಟಿ ನಿಷ್ಕ್ರೀಯಗೊಂಡಿದ್ದರಿಂದ ಸಮಸ್ಯೆ ಹಾಗೆಯೆ ಉಳಿದಿದೆ. ಸದ್ಯ ಜಿಲ್ಲೆಯಲ್ಲಿ 400ರಷ್ಟು ಅರಣ್ಯ ಬ್ಲಾಕ್‍ಗಳನ್ನು ಪಟ್ಟಿ ಮಾಡಲಾಗಿದ್ದು, ಈ ಬ್ಲಾಕ್‍ಗಳ ಮೇಲೆ ಹಲವು ಬಾರಿ ಅಧಿಸೂಚನೆ ಹೊರಡಿಸಿದ್ದರಿಂದ ಸಮಸ್ಯೆ ಇನ್ನೂ ಜೀವಂತವಾಗಿ ಉಳಿದುಕೊಂಡಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಕೃಷ್ಣಭೈರೇಗೌಡ, ಕಂದಾಯ, ಅರಣ್ಯ ಭೂಮಿ ಹಾಗೂ ಡೀಮ್ಡ್ ಅರಣ್ಯ ಸಮಸ್ಯೆಗಳಿಂದಾಗಿ ರೈತರು, ಸಾರ್ವಜನಿಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳ ಪರಿಹಾರಕ್ಕೆ ಜಂಟಿ ಸರ್ವೆಗೆ ಚಾಲನೆ ನೀಡಿದ್ದರೂ ಸರ್ವೆ ಕೆಲಸದ ಪ್ರಗತಿ ನಿರೀಕ್ಷಿತ ಪಗ್ರತಿ ಕಂಡಿಲ್ಲ. ಈ ಹಿನ್ನೆಲೆಯಲ್ಲಿ ಅರಣ್ಯ, ಕಂದಾಯ ಸಚಿವರು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು, ಕಂದಾಯ, ಅರಣ್ಯಾಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗುವುದು ಎಂದರು.

ಡೀಮ್ಡ್ ಫಾರೆಸ್ಟ್ ಪ್ರದೇಶದಲ್ಲಿ ರೈತರು ಸಾಗುವಳಿ ಮಾಡಿದ್ದರೆ, ಅಂತಹ ಕೃಷಿ ಭೂಮಿ ರೈತರಿಗೆ ಮಂಜೂರಾಗಬೇಕು, ಸಾಗುವಳಿ ಇಲ್ಲದ ಭೂಮಿಯನ್ನು ಅರಣ್ಯಕ್ಕೆ ಸೇರಿಸಬೇಕು, ಅರಣ್ಯ ಇಲಾಖೆ ಅಧಿಕಾರಿಗಳು ಈ ವಿಚಾರದಲ್ಲಿ ಉದ್ಧಟತನ ಮೆರೆಯಬಾರದು, ರೈತರಿಗೂ ಜಮೀನು ಸಿಗಬೇಕು, ಅರಣ್ಯ ಪ್ರದೇಶವೂ ಉಳಿಯಬೇಕು. ಅಧಿಕಾರಿಗಳು ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳಬೇಕು, ರೈತರಿಗೆ ತೊಂದರೆ ನೀಡಬಾರದು ಎಂದು ಸಚಿವ ಕೃಷ್ಣಭೈರೇಗೌಡ ಸೂಚಿಸಿದರು.

ಪ್ಲಾಂಟೇಶನ್ ಭೂಮಿಯನ್ನು ಗುತ್ತಿಗೆಗೆ ನೀಡುವ ಯೋಜನೆಗೆ ಅರ್ಜಿ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ನೀಡಲಾಗಿದೆ. ಜಂಟಿ ಸರ್ವೇ ಪೂರ್ಣಗೊಂಡು ಅರಣ್ಯ ಮತ್ತು ಕಂದಾಯ ಭೂಮಿಯ ನಿಖರ ಮಾಹಿತಿ ಲಭ್ಯವಾದ ಬಳಿಕ ಅರ್ಜಿ ವಿಲೇವಾರಿ ಪ್ರಕ್ರಿಯೆಯನ್ನು ಅಭಿಯಾನದ ಮಾದರಿಯಲ್ಲಿ ಕೈಗೊಳ್ಳಲಾಗುವುದು. ಬಹಳ ದಿನಗಳಿಂದ ಜಂಟಿ ಸರ್ವೇ ಆಗದೆ ಬಾಕಿ ಉಳಿದಿದೆ. ಇದೀಗ ಜಂಟಿ ಸರ್ವೇ ಕೈಗೊಳ್ಳಲು ಅರಣ್ಯ ಇಲಾಖೆಯೊಂದಿಗೆ ಸೇರಿ ನಿಯಮಾವಳಿಗಳನ್ನು ರೂಪಿಸಿ, ಸುತ್ತೋಲೆಗಳನ್ನು ಹೊರಡಿಸಿ, ಹಿಂದಿನಿಂದಲೂ ಉಳಿದಿದ್ದ ಕೆಲಸಕ್ಕೆ ಚಾಲನೆ ನೀಡಲಾಗಿದೆ ಎಂದರು.

ಜಂಟಿ ಸರ್ವೇ ಆಗದೆ ಅರ್ಜಿ ವಿಲೇವಾರಿ ಮಾಡಲು ಸಾಧ್ಯವಿಲ್ಲ. ಅರಣ್ಯ ಮತ್ತು ಕಂದಾಯ ಜಮೀನಿನ ನಿಖರತೆ ತಿಳಿಯದಿದ್ದಲ್ಲಿ ಅರ್ಜಿ ವಿಲೇವಾರಿ ಪ್ರಕ್ರಿಯೆ ಸಾಧ್ಯವಾಗದು. ಹಿಂದೆ ಆಗಿರುವಂತೆ ಕಂದಾಯ ಜಮೀನೆಂದು ಅರಣ್ಯ ಭೂಮಿಯನ್ನು ಮಂಜೂರು ಮಾಡಿರುವಂತಹ ತಪ್ಪುಗಳು ಪುನರಾವರ್ತನೆಯಾಗಬಹುದು. ಹೀಗಾಗಿ ಜಂಟಿ ಸರ್ವೇ ಪೂರ್ಣಗೊಂಡ ಬಳಿಕವಷ್ಟೇ ಪ್ಲಾಂಟೇಶನ್ ಭೂಮಿ ಗುತ್ತಿಗೆಗೆ ನೀಡುವ ಕುರಿತ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತದೆ. ಎರಡು ವರ್ಷಗಳಲ್ಲಿ ಸಾಕಷ್ಟು ಕಾರ್ಯಗಳು ನಡೆದಿದ್ದು, ಇನ್ನೂ ಸಾಕಷ್ಟು ಕೆಲಸಗಳು ಆಗದೆ ಬಾಕಿ ಉಳಿದಿವೆ. ಹಿಂದೆ ಭೂಮಿ ಮಂಜೂರಾದ ಪ್ರಕರಣಗಳಲ್ಲಿ ಕಾಲ ಕಾಲಕ್ಕೆ ದಾಖಲಾತಿಗಳನ್ನು ನೀಡುವ ಕಾರ್ಯ ನಡೆದಿದ್ದಲ್ಲಿ ಇಷ್ಟೊಂದು ಸಮಸ್ಯೆಯಾಗುತ್ತಿರಲಿಲ್ಲ ಎಂದರು.

ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಭದ್ರಾ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾದ ಗ್ರಾಮಗಳ ಜನರ ಪುನರ್ವಸತಿಗೆ ಬೇರೆಡೆ ಜಾಗ ನೀಡಲಾಗಿದೆ. ಆದರೆ ಈ ಜಾಗ ಅರಣ್ಯ ಪ್ರದೇಶವಾಗಿರುವುದರಿಂದ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ಇಂದಿಗೂ ಸಮಸ್ಯೆಯಲ್ಲಿ ದಿನ ಕಳೆಯುತ್ತಿವೆ. ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಸಚಿವರ ಬಳಿ ಮನವಿ ಮಾಡಿದಾಗ, ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಸಮಸ್ಯೆ ಪರಿಹಾರಕ್ಕಾಗಿ ಅರಣ್ಯ ಇಲಾಖೆಯಿಂದ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಬೇಕಿದೆ. ಈ ಸಮಸ್ಯೆ ಪರಿಹಾರಕ್ಕೆ ಇದೊಂದೇ ಮಾರ್ಗ. ಈ ಸಂಬಂಧ ಅರಣ್ಯ ಇಲಾಖೆ ಅಗತ್ಯ ಕ್ರಮವಹಿಸಬೇಕೆಂದು ಸೂಚಿಸಿದರು. ಈ ವೇಳೆ ಮಾತನಾಡಿದ ಅರಣ್ಯ ಇಲಾಖೆ ಹಿರಿಯ ಅಧಿಕಾರಿ, ಮಲೆನಾಡು ಭಾಗದಲ್ಲಿ ಹೆಚ್ಚು ಮರಗಳು ಇರುವ ಪ್ರದೇಶವನ್ನು ಅರಣ್ಯ ಎಂದು ಅರಣ್ಯ ಕಾಯ್ದೆಯಲ್ಲಿ ಹೇಳಲಾಗಿದೆ. ಮಲೆನಾಡು ಭಾಗ ಎಂದರೇ ಹೆಚ್ಚು ಮರಗಳು ಇರುವ ಪ್ರದೇಶವಾಗಿದೆ. ಕಾಯ್ದೆಯ ಪ್ರಕಾರ ನಿರ್ದಿಷ್ಟ ಸಂಖ್ಯೆಯ ಮರಗಳು ಇರುವ ಪ್ರದೇಶದಲ್ಲಿನ ಸಾಗುವಳಿಯನ್ನು ಮಂಜೂರು ಮಾಡಲು ಅರಣ್ಯ ಇಲಾಖೆಯ ಅಭಿಪ್ರಾಯ ಅತ್ಯಗತ್ಯವಾಗಿದೆ. ಮರಗಳು ಇಲ್ಲದ ಸಾಗುವಳಿಯನ್ನು ಮಂಜೂರು ಮಾಡಲು ಕಾನೂನಿನಲ್ಲಿ ಅವಕಾಶವಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಶಾಸಕ ಹಾಗೂ ಕ್ರೆಡಿಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ, ಕೆ.ಎಸ್.ಆನಂದ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು, ಭದ್ರಾವತಿ ಉಪವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಲ್.ನಂದೀಶ್ ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ, ಉಪವಿಭಾಗಾಧಿಕಾರಿಗಳಾದ ಕಾಂತರಾಜ್, ಸುದರ್ಶನ್ ಬಿ.ಕೆ., ಎಲ್ಲಾ ತಾಲೂಕುಗಳ ತಹಶೀಲ್ದಾರರು ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಮೂಡಿಗೆರೆ, ಕಡೂರು ತಾಲೂಕುಗಳ ವ್ಯಾಪ್ತಿಯಲ್ಲಿ ಅನುಭವ ಇಲ್ಲದ ಸರಕಾರಿ ಜಾಗವನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ. ಅನುಭವ ಇಲ್ಲದ ಜಾಗವನ್ನು ಮಂಜೂರು ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಸಚಿವರು, ಇಂತಹ ಜಾಗವನ್ನು ಸರಕಾರದ ವಶಕ್ಕೆ ಪಡೆದು ಸಾರ್ವಜನಿಕರ ಉದ್ದೇಶಗಳಿಗೆ ಕಾಯ್ದಿರಿಸಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

ಜಿಲ್ಲೆಯಲ್ಲಿರುವ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ, ಉಪಗ್ರಾಮಗಳನ್ನಾಗಿ ಪರಿವರ್ತಿಸಬೇಕಾದ ವಿಷಯದ ಬಗ್ಗೆ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ಎನ್.ಆರ್.ಪುರ ತಾಲೂಕಿನಲ್ಲಿ 372 ದಾಖಲೆ ರಹಿತ ಜನವಸತಿ ಪ್ರದೇಶ ಇದ್ದು, ಈ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮ, ಉಪ ಗ್ರಾಮಗಳನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು, ಆದರೆ ಈ ಕೆಲಸವನ್ನು ತಹಶೀಲ್ದಾರ್ ಹಾಗೂ ಎಡಿಎಲ್‍ಆರ್ ಮಾಡಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ಪಡೆದ ಸಚಿವರು, ಶಾಸಕ ಟಿ.ಡಿ.ರಾಜೇಗೌಡ ಅವರ ವಿರುದ್ಧವೂ ಗರಂ ಆಗಿ, ಹೀಗಾದರೇ ಹೇಗೆ ಗೌಡ್ರೇ, ಅಲ್ಲಿನ ಜನತೆ ನಿಮಗೆ ಮತ ನೀಡಿ ಗೆಲ್ಲಿಸಿದ್ದಾರೆ, ನೀವು ಅಧಿಕಾರಿಗಳ ಮೂಲಕ ಓಟು ನೀಡಿದವರ ಕೆಲಸ ಮಾಡಿಸಬೇಕು, ಕೆಲಸ ಮಾಡದಿದ್ದರೇ ಮುಂದೆ ನಿಮಗೆ ಓಟು ನೀಡುತ್ತಾರಾ? ಎಂದು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News