ಮೂಡಿಗೆರೆ: ಸಹೋದರನ ಅತ್ತೆಯನ್ನು ಕೊಂದ ಆರೋಪಿ ಆತ್ಮಹತ್ಯೆ
Update: 2025-02-18 11:56 IST
ಶಶಿಧರ ಪೂಜಾರಿ
ಚಿಕ್ಕಮಗಳೂರು: ಸಹೋದರನ ಅತ್ತೆಯ ಕೊಲೆ ಮಾಡಿದ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡಿಗೆರೆ ತಾಲೂಕಿನ ಭಾರತಿ ಬೈಲ್ ನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಭಾರತಿ ಬೈಲ್ ನ ಶಶಿಧರ ಪೂಜಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೂಡಿಗೆರೆ ತಾಲೂಕಿನ ಕಣತಿ ಗ್ರಾಮದ ಯಮುನಾ ಎನ್ನುವವರು ಆರು ತಿಂಗಳಿನಿಂದ ಪುತ್ರಿಯ ಮನೆ ಭಾರತಿ ಬೈಲ್ ಗ್ರಾಮಕ್ಕೆ ಬಂದು ನೆಲೆಸಿದ್ದರು. ರವಿವಾರ ಕೂಲಿ ಕೆಲಸಕ್ಕೆ ಹೋಗಿ ಸಂಜೆ ಮಗಳ ಮನೆಗೆ ಬಂದಿದ್ದರು. ಆಗ ಮನೆಯಲ್ಲಿ ಕುಡಿದು ಜಗಳವಾಡುತ್ತಿದ್ದ ಮಗಳ ಗಂಡನ ಅಣ್ಣ ಶಶಿಧರ ಪೂಜಾರಿಗೆ ಯಮುನಾ ಬುದ್ದಿವಾದ ಹೇಳಿದ್ದಾರೆ.
ಇದೇ ಕಾರಣಕ್ಕೆ ಶಶಿಧರ ಪೂಜಾರಿ ಸುತ್ತಿಗೆಯಿಂದ ಯಮುನಾ ಅವರ ತಲೆಗೆ ಹೊಡೆದಿದ್ದು, ಯಮುನಾ ಸ್ಥಳದಲ್ಲಿ ಕುಸಿದು ಸಾವನ್ನಪ್ಪಿದ್ದಾರೆ. ಬಳಿಕ ತಲೆ ಮರೆಸಿಕೊಂಡಿದ್ದ ಶಶಿಧರ ಪೂಜಾರಿ ಇದೀಗ ಭಾರತಿ ಬೈಲು ಕಾಫಿ ತೋಟ ಒಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.