×
Ad

ಮೂಡಿಗೆರೆ: ಕಾಡಾನೆ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Update: 2025-08-06 12:34 IST

ಮೂಡಿಗೆರೆ: ಮುತ್ತಿಗೆಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದ ಕಾಡಾನೆ ದಾಳಿಯಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರಿಗೆ ಗಂಭೀರ ಗಾಯಗಳಾಗಿವೆ.

ಮುತ್ತಿಗೆಪುರ ನಿವಾಸಿ ಫಿಲಿಪ್ ಕ್ಯಾಸ್ಟೋಲಿನಾ (63) ಎಂಬ ವ್ಯಕ್ತಿ ಕಾಡಾನೆ ದಾಳಿಯಿಂದ ತೀವ್ರ ಗಾಯಗೊಂಡಿದ್ದಾರೆ. ಮಧ್ಯರಾತ್ರಿ ವೇಳೆ ಮನೆಯ ಸಮೀಪ ನಾಯಿ ಬೊಗಳಿದಾಗ  ಏನೋ ಶಬ್ದವಾಗುತ್ತಿರುವುದನ್ನು ಗಮನಿಸಿ ಜಾನುವಾರುಗಳು ಬಂದಿರಬಹುದು ಎಂದು ಮನೆಯ ಹೊರಗೆ ಬಂದಿದ್ದಾರೆ.  ಈ ವೇಳೆ  ಮನೆಯ ಸಮೀಪವೆ ಬಂದ ಕಾಡಾನೆ ಏಕಾಏಕಿ ಫಿಲಿಪ್ ಅವರನ್ನಯ ಸೊಂಡಿಲಿನಿಂದ ಫಿಲಿಪ್ ಅವರನ್ನು ಎತ್ತಿ ಎಸೆದಿದೆ. ಆನೆ ದಾಳಿಯಿಂದ ಕಾಲು, ಎದೆ ಹಾಗೂ ಕೈಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪತ್ನಿ ಹಾಗೂ ಮಗನೊಂದಿಗೆ ವಾಸವಾಗಿರುವ ಫಿಲಿಪ್ ಅವರು ಟ್ರಾಕ್ಟರ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಇದೀಗ ಅವರು ತೀವ್ರ ಗಾಯಗೊಂಡಿದ್ದು ಮುಂದಿನ ದಿನಗಳಲ್ಲಿ ದುಡಿದು ತಿನ್ನುವುದಕ್ಕೆ ಕಷ್ಟವಾಗಿದೆ. ಆನೆ ದಾಳಿಯಿಂದ ಅವರ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ಗ್ರಾಮದ ಕಾಫಿ ತೋಟಗಳಲ್ಲಿ ಕಳೆದ ಕೆಲವು ವಾರಗಳಿಂದ ಸುಮಾರು 35 ಕಾಡಾನೆಗಳು ವಾಸ್ತವ್ಯ ಹೂಡಿದ್ದು, ಅವು ನಿರಂತರವಾಗಿ ವಸತಿ ಪ್ರದೇಶಗಳಿಗೆ ನುಗ್ಗುತ್ತಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ತಾಲ್ಲೂಕಿನ ಮಾಕೋನಹಳ್ಳಿ, ಕಾರಬೈಲ್, ದುಂಡುಗ, ಹಳಸೆ, ಮುತ್ತಿಗೆಪುರ ಗ್ರಾಮಗಳ ಸುತ್ತ ಸಂಚರಿಸುತ್ತಾ ತೀವ್ರ ಉಪಟಳ ನೀಡುತ್ತಿವೆ ಎಂದು ತಿಳಿದು ಬಂದಿದೆ.

ಘಟನೆ ತಿಳಿಯುತ್ತಿದ್ದಂತೆಯೇ, ಮಧ್ಯರಾತ್ರಿ ಹೊತ್ತಿಗೆ ಮೂಡಿಗೆರೆ ಅರಣ್ಯ ಅಧಿಕಾರಿ ಕಾವ್ಯ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಪ್ರಸ್ತುತ ಕಾಡಾನೆಗಳು ಕುನ್ನಹಳ್ಳಿ ಹಳಸೆ ಭಾಗದಲ್ಲಿ ಬೀಡುಬಿಟ್ಟಿದ್ದು, ಕಾಫಿ ತೋಟ, ಶುಂಠಿ ಗದ್ದೆಗಳಿಗೆ ಲಗ್ಗೆ ಇಟ್ಟಿವೆ. ಕುನ್ನಹಳ್ಳಿ ಚಂದ್ರಶೇಖರ್ ಎಂಬವರ ಗದ್ದೆಯಲ್ಲಿ ನಾಟಿ ಮಾಡಿದ್ದ ಶುಂಠಿ ಬೆಳೆಯನ್ನು ತುಳಿದು ಸಂಪೂರ್ಣ ನಾಶಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News