ಗೆದ್ದವನ ಕಥೆಯಲ್ಲಿ ಸಂಕಷ್ಟಗಳೇ ಹೆಚ್ಚು
ಚಿತ್ರ: ಪೆಡ್ಡಿ
ನಿರ್ದೇಶನ: ಬುಚ್ಚಿ ಬಾಬು ಸನಾ
ನಿರ್ಮಾಣ: ವೆಂಕಟ ಸತೀಶ್, ಸುಕುಮಾರ್ ಮೊದಲಾದವರು
ತಾರಾಗಣ: ರಾಮ್ ಚರಣ್, ಶಿವರಾಜ್ ಕುಮಾರ್ ಮತ್ತು ಜಾಹ್ನವಿ
ಇದು ರಾಮ್ ಚರಣ್ ನಟನೆಯ ಬಹು ನಿರೀಕ್ಷಿತ ಸಿನೆಮಾ. ‘ಉಪ್ಪೇನ’ ಬಳಿಕ ಸಾಕಷ್ಟು ಸಮಯ ತೆಗೆದುಕೊಂಡು ಬುಚ್ಚಿಬಾಬು ನಿರ್ದೇಶಿಸಿದ ಚಿತ್ರ ಎನ್ನುವ ಕಾರಣದಿಂದ ಕೂಡ ನಿರೀಕ್ಷೆ ಇತ್ತು. ಕನ್ನಡಿಗರ ಪಾಲಿಗೆ ಶಿವರಾಜ್ಕುಮಾರ್ ವಿಶೇಷ ಪಾತ್ರ ಕೂಡ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಮೂರು ಗಂಟೆ ೯ ನಿಮಿಷಗಳ ಈ ಸಿನೆಮಾ ಅವೆಲ್ಲಕ್ಕೂ ತಣ್ಣೀರು ಎರಚುವಂತೆ ಮಾಡಿದೆ.
ಅದೊಂದು ಕಾಡಿನ ನಡುವೆ ಇರುವ ಹಳ್ಳಿ. ಅವರು ಕೆಲಸ ಮಾಡಬೇಕಾದರೆ ಬೆಟ್ಟದ ಮೇಲಿನ ವಿಜಯನಗರಕ್ಕೆ ಬರಬೇಕು. ಆ ಮಂದಿಗೆ ಕೂಲಿ ಮಾಡಿ ಸಣ್ಣ ಪ್ರಮಾಣದ ಹಣ ಪಡೆಯಲಷ್ಟೇ ಗೊತ್ತು. ಹೆಸರೇ ಇಲ್ಲದ ಆ ಊರಿನ ಮಂದಿಯನ್ನು ಬೆಟ್ಟದ ಕೆಳಗಿನವರು ಎಂದಷ್ಟೇ ಹೇಳುತ್ತಾರೆ. ಅವರ ನಡುವೆ ಪ್ರತಿಭೆಯಿಂದ ಗುರುತಿಸಿಕೊಂಡ ಏಕ ವ್ಯಕ್ತಿ ಅಂದರೆ ಅದು ಪೆದ್ದಿ. ಆದರೆ ಆತ ಕೂಡ ತನ್ನ ಕ್ರೀಡಾ ಪ್ರತಿಭೆಯನ್ನು ಹಣಕ್ಕೆ ಮೀಸಲಾಗಿಟ್ಟವನು.
ಆದರೆ ತನ್ನ ಹಾಗೂ ತಮ್ಮವರ ವಿರುದ್ಧ ವಿಜಯನಗರದವರು ನಡೆಸುವ ವಂಚನೆ ಪೆದ್ದಿಯನ್ನು ಬದಲಾಯಿಸುತ್ತದೆ. ತನ್ನ ಊರಿಗೆ ಒಂದು ಹೆಸರು ತರಲು ತಾನು ರಾಷ್ಟ್ರ ಮಟ್ಟದ ಕ್ರೀಡಾಪಟುವಾಗಬೇಕು ಎಂದು ಕನಸು ಕಾಣುತ್ತಾನೆ. ಪೆದ್ದಿ ತನ್ನ ಕನಸು ನನಸು ಮಾಡುವಲ್ಲಿ ತುಂಬಾ ಕಷ್ಟ ಪಡುತ್ತಾನೆ. ಆದರೆ ಪ್ರೇಕ್ಷಕರು ಕೂಡ ಅದನ್ನು ಕಷ್ಟದಿಂದ ನೋಡುವಂತೆ ಮಾಡಿರುವುದು ಅಕ್ಷಮ್ಯ. ವಿಪರ್ಯಾಸವೆಂದರೆ ಇದೇ ಸಂದರ್ಭದಲ್ಲಿ ಶಿವರಾಜ್ಕುಮಾರ್ ಸೇರಿದಂತೆ ಕನ್ನಡದ ಒಂದಷ್ಟು ಕಲಾವಿದರ ಪಾತ್ರಗಳು ಕೂಡ ಪರದೆಯ ಮೇಲಿರುತ್ತವೆ.
ನಮ್ಮ ದೇಶದಲ್ಲಿ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲಬಲ್ಲ ಕ್ರೀಡಾಳುಗಳ ಕೊರತೆ ಇದೆ. ಅದಕ್ಕಾಗಿ ಹಳ್ಳಿಗಳಲ್ಲಿರುವ ಪ್ರತಿಭೆಗಳನ್ನು ಹುಡುಕಲು ಅಧಿಕಾರಿ ಒಬ್ಬರು ಮುಂದೆ ಬರುತ್ತಾರೆ. ಅವರಿಗೆ ಹೇಳುವ ಕತೆಯಾಗಿ ಇಡೀ ಚಿತ್ರ ಮೂಡಿ ಬಂದಿದೆ.
ಪೆದ್ದಿಗೆ ಕುಸ್ತಿ ಕಲಿಸುವ ಹಿಂದ್ ಕೇಸರಿ ಉಸ್ತಾದ್ ಗೌರ್ ನಾಯ್ಡು ಪಾತ್ರದಲ್ಲಿ ಶಿವಣ್ಣನದು ಗೌರವ ಮೂಡಿಸುವ ಪಾತ್ರ. ಪೆದ್ದಿಯ ಪೆದ್ದುತನಕೆ ಮದ್ದು ನೀಡುವ ಶಿಕ್ಷಕ. ಆದರೆ ಜೈಲರ್ನಂತೆ ಶಿವಣ್ಣನ ಕಣ್ಣುಗಳನ್ನು ಇಲ್ಲಿ ಬಳಸಿಲ್ಲ. ಕುಸ್ತಿ ಪಟುವಾಗಿ ದೇಹದಾರ್ಢ್ಯತೆ ಪ್ರದರ್ಶಿಸುವ ಪರಿಸ್ಥಿತಿಯಲ್ಲಿ ಶಿವಣ್ಣನೂ ಇಲ್ಲ.
ಶಿವಣ್ಣನ ಫ್ಲ್ಯಾಷ್ ಬ್ಯಾಕ್ ದೃಶ್ಯಗಳಲ್ಲಿ ಬೇರೆ ಕಲಾವಿದರನ್ನು ಬಳಸಲಾಗಿದೆ. ಚಿತ್ರದಲ್ಲಿ ಕಮಲಹಾಸನ್ ಪುತ್ರಿ ಶ್ರುತಿ ಸ್ಪೆಷಲ್ ಡಾನ್ಸ್ ಇದೆ. ಈ ಸಂದರ್ಭದಲ್ಲಿ ಚಿರಂಜೀವಿ ಪುತ್ರ ರಾಮ್ ಚರಣ್, ಶ್ರೀದೇವಿ ಪುತ್ರಿ ಜಾಹ್ನವಿ ಕೂಡ ಕುಣಿಯುತ್ತಾರೆ. ಅದೇ ಫ್ರೇಮ್ನಲ್ಲಿದ್ದ ರಾಜ್ ಕುಮಾರ್ ಪುತ್ರ ಶಿವಣ್ಣ ನಿಂದಲೂ ಎರಡು ಹೆಜ್ಜೆ ಹಾಕಿಸಿದ್ದರೆ ಅಭಿಮಾನಿಗಳ ಪಾಲಿಗೆ ಹಬ್ಬವಾಗಿರುತ್ತಿತ್ತು.
ಪೆದ್ದಿಯಾಗಿ ರಾಮ್ ಚರಣ್ ಜೀವಿಸಿದ್ದಾರೆ. ಪಾತ್ರಕ್ಕಾಗಿ ದೇಹ ಮಾತ್ರವಲ್ಲ, ದೇಹಭಾಷೆಯನ್ನೇ ಬದಲಾಯಿಸಿಕೊಂಡಿದ್ದಾರೆ. ಕುಸ್ತಿ ಪಟುವಾಗಿ ಕಾಲಿಗೇಟು ಮಾಡಿಕೊಂಡು ಕರುಣೆ ಮೂಡಿಸುತ್ತಾರೆ. ಕ್ರಿಕೆಟ್ ಆಟಗಾರನಾಗಿ ಕೆರಳಿಸುತ್ತಾರೆ. ಹೊಡೆದಾಟ, ನೃತ್ಯದಲ್ಲೂ ಮನ ಗೆಲ್ಲುತ್ತಾರೆ. ಆದರೆ ಜಾಹ್ನವಿ ಪಾತ್ರದ ಜಾತಕವೇ ಸರಿಯಿಲ್ಲ. ರಾಮ್ ಚರಣ್ನ ರೋಮಾನ್ಸ್ಗೆಂದೇ ಸೃಷ್ಟಿಯಾದ ಪಾತ್ರ.
ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ. ಆದರೆ ‘ಚಿಕಿರಿ ಚಿಕಿರಿ’ ಹಾಡಿನ ಹೊರತಾಗಿ ಯಾವುದೂ ಗಮನ ಸೆಳೆಯುವುದಿಲ್ಲ.
ಶಿವಣ್ಣನ ಕುಸ್ತಿ ಅಖಾಡದಲ್ಲಿ ತಾರಕ್ ಪೊನ್ನಪ್ಪ ಹಿತಶತ್ರು. ಅದಕ್ಕೂ ಮೊದಲು ಕ್ರಿಕೆಟ್ನಲ್ಲಿ ಬಾಲಿವುಡ್ ನಟ ದಿವ್ಯೇಂದು ಶರ್ಮ ಜೊತೆ ಕಿರಿಕಿರಿ.
ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಕೇರಳದ ರಾಜೀವ್ ಪಿಳ್ಳೆ ಎದುರಾಳಿ. ಭೋಜ್ ಪುರಿಯ ರವಿಕಿಶನ್ ರನ್ನು ಸೇರಿಸಿ ಇಲ್ಲಿ ಪ್ಯಾನ್ ಇಂಡಿಯಾ ತಾರಾಗಣ ಇದೆ. ಅದೇ ರೀತಿ ಈ ಚಿತ್ರದ ಮೂಲಕ ರಾಮ್ ಚರಣ್ಗೊಂದು ರಾಷ್ಟ್ರ ಪ್ರಶಸ್ತಿ ತರಬೇಕು ಎನ್ನುವ ಪ್ರಯತ್ನ ಕೂಡ ನಡೆದ ಹಾಗಿದೆ. ಯಾಕೆಂದರೆ ರಾಷ್ಟ್ರ ಪ್ರಶಸ್ತಿ ವಿಜೇತ ‘ಉಪ್ಪೇನ’ ನಿರ್ದೇಶಕರ ಪುನರಾಗಮನವಾಗಿದೆ.
ರೈಲು ಸಾರಿಗೆಗಾಗಿ ಹೋರಾಡುವ ಅಪ್ಪಲ ಸೂರಿಯಾಗಿ ಜಗಪತಿ ಬಾಬು ಚಪ್ಪಾಳೆ ಗಿಟ್ಟಿಸುತ್ತಾರೆ. ಜಾತಿ ಹೆಸರಿನ ತುಳಿತದ ವಿಚಾರ, ಗುರುತಿನ ಚೀಟಿ ಇರದವರ ಸಮಸ್ಯೆ ಹೀಗೆ ಎಲ್ಲ ಪ್ರಮುಖ ಅಂಶಗಳ ಬಗ್ಗೆ ಕೂಡ ಇಲ್ಲಿ ಪ್ರಸ್ತಾಪ ಇದೆ. ಮಾತ್ರವಲ್ಲ ಮೂಲ ಕಥೆಯಲ್ಲಿ ಎರಡು ವರ್ಷಗಳ ಹಿಂದೆ ತೆರೆಕಂಡು ಪ್ರಶಸ್ತಿ ಬಾಚಿದ ಬಾಲಿವುಡ್ ಚಿತ್ರದ ಛಾಯೆ ಇದೆ. ‘ಚಂದು ಚಾಂಪಿಯನ್’ ಎನ್ನುವ ಆ ಚಿತ್ರ ನೈಜ ಘಟನೆ ಆಧಾರಿತವಾಗಿತ್ತು ಎನ್ನುವುದೊಂದೇ ವ್ಯತ್ಯಾಸ. ಆದರೆ ಇಷ್ಟೆಲ್ಲಾ ಇದ್ದರೂ ಚಿತ್ರಕತೆಯಲ್ಲಿ ಯಾವುದಕ್ಕೂ ಸರಿಯಾದ ನ್ಯಾಯ ಸಿಕ್ಕಿಲ್ಲ ಎನ್ನುವುದೇ ಪ್ರೇಕ್ಷಕರ ಕೊರಗು.